ಕಲಬುರಗಿ: ಜಂಕ್ ಫುಡ್ಗೆ ಮೊರೆಹೋಗದೆ, ನಿಯಮಿತ ವ್ಯಾಯಮ ಮಾಡಿ ಯಾವಾಗಲೂ ಶುಚಿತ್ವ ಕಾಪಾಡಿಕೊಳ್ಳಿ ಎಂದು ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಮಂಗಳವಾರದಂದು ಶರಣಬಸವ ವಿಶ್ವವಿದ್ಯಾಲಯದ, ವ್ಯವಹಾರ ಅಧ್ಯಾಯನ ನಿಕಾಯದ ಮಹಿಳಾ ಬಿ.ಬಿ.ಎ. ವಿಭಾಗ ಮತ್ತು ಶರಣಬಸವ ಆಯುರ್ವೆದಿಕ ಆಸ್ಪತ್ರೆ ಹಾಗೂ ವಿವಿಯ ಮಹಿಳಾ ಸಬಲೀಕರಣ ಕೋಶದ ವತಿಯಿಂದ ಆಯೋಜಿಸಿದ “ಮಹಿಳೆಯರ ಆರೋಗ್ಯ ಮತ್ತ ನೈರ್ಮಲ್ಯ” ಕುರಿತಾದ ಜಾಗ್ರತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಬೆಳಿಗ್ಗೆ ಬೇಗನೆ ಎದ್ದೇಳುವದನ್ನು ರೂಢಿಸಿಕೊಳ್ಳಿ, ನಿಮ್ಮ ಮನೆಗೆಲಸದಲ್ಲಿ ಹಿರಿಯರ ಕೈ ಜೋಡಿಸಿ. ಬೇರೆಯವರನ್ನು ನೋಡಿ ಅಸೂಯೆ ಪಡಬೇಡಿ ಹಾಗೂ ನಿಮ್ಮನ್ನು ನೀವು ಯಾರೊಂದಿಗೂ ಹೋಲಿಸಿಕೊಳ್ಳಬೇಡಿ. ಸದಾ ಲವಲವಿಕೆಯಿಂದಿದ್ದು, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿರಿಸಿಕೊಳ್ಳಿ. ಯಾವಗಲೂ ಕೈ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ ಇದರಿಂದ ಮನಸ್ಸು ಉಲ್ಲಾಸವಾಗಿ ಆರೋಗ್ಯದಿಂದಿರುವಿರಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶರಣಬಸವ ಆಯುರ್ವೆದಿಕ ಆಸ್ಪತ್ರೆಯ ಡಾ. ರುದ್ರಾಣಿ ದೇಶಮುಖ ಮಾತನಾಡಿದರು. ಮಹಿಳಾ ಬಿ.ಬಿ.ಎ. ವಿಭಾಗದ ಚೇರ್ಪರ್ಸನ್ ಡಾ. ಶಿಲ್ಪಾ ಕಂದಗೂಳ, ವಿವಿಯ ಮಹಿಳಾ ಸಬಲೀಕರಣ ಕೋಶದ ಚೇರ್ಪರ್ಸನ್ ಡಾ. ಶಿಲ್ಪಾ ಶ್ರೀಗಿರಿ ಹಾಗೂ ನೀರಜ ತಡಕಲ, ಶಿವರಾಜ ನಾಲವಾರ, ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


