ಕಲಬುರಗಿ: ಹಿಂದುಳಿದ ವರ್ಗಗಳ ಆಯೋಗ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಸುತ್ತಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಆದಿ ಬಣಜಿಗರು, ಧರ್ಮದ ಕಾಲಂ ನಲ್ಲಿ ಹಿಂದೂ, ಜಾತಿ ಲಿಂಗಾಯತ ಹಾಗು ಉಪಜಾತಿ ಕಾಲಂನಲ್ಲಿ ಆದಿ ಬಣಜಿಗ ಎಂದು ನಮೂದಿಸಬೇಕು ಎಂದು ಸಮುದಾಯದ ಮಾಜಿ ಅಧ್ಯಕ್ಷ ಜಗನ್ನಾಥ ಶೇಗಜಿ ಹೇಳಿದರು.
ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿ ಬಣಜಿಗ ಸಮಾಜದ ಜನರಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ರಾಜ್ಯ ಸರಕಾರ ಕೈಗೊಳ್ಳಲಿರುವ ಸಮೀಕ್ಷೆಯಲ್ಲಿ ಏನನ್ನು ನಮೂದಿಸಬೇಕು ಎನ್ನುವುದು ಗೊಂದಲ ನಿರ್ಮಾಣವಾಗಿದೆ. ಆದರಿಂದ ರಾಜ್ಯ ಮಟ್ಟದ ಸಮಾಜದ ಸಭೆ ನಡೆಸಿ, ಅಂತಮ ತೀರ್ಮಾನ ತೆಗೆದುಕೊಂಡಿದ್ದು, ಧರ್ಮ ಹಿಂದೂ, ಜಾತಿ ಲಿಂಗಾಯತ, ಉಪಜಾತಿ ಆದಿ ಬಣಜಿಗ ಎಂದೇ ಬರೆಸಲು ತಿಳಿಸಲಾಗಿದೆ ಎಂದರು.
ಸಮೀಕ್ಷೆದಾರರು ಮನೆಗೆ ಬಂದಾಗ ಕುಟುಂಬ ಗುರುತಿನ ಚೀಟಿ, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಸಮೀಕ್ಷಕರಿಗೆ ಸಹಕರಿಸಬೇಕು. ಸಮಾಜದ ಜನಸಂಖ್ಯೆ ಹೆಚ್ಚಳವಾದರೆ ಹೆಚ್ಚಿನ ಸೌಲಭ್ಯ ದೊರೆಯಲಿವೆ. ಹೀಗಾಗಿ ಕಡ್ಡಾಯವಾಗಿ ಎಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವೀರಣ್ಣ ಮಂಗಾಣೆ, ವಿಶ್ವನಾಥ್ ಗೌನಹಳ್ಳಿ, ಗುಂಡರಾವ್ ಪದ್ಮಾಜಿ, ಗಿರಿರಾಜ್ ಯಳಿಮೇಲಿ, ಗುಪ್ತಲಿಂಗ, ರಾಜೇಂದ್ರ ಕರೆಕಲ್ ಮತ್ತಿತರರು ಇದ್ದರು.


