ಕಲಬುರಗಿ: ರಾಜ್ಯ ಸರ್ಕಾರ ನಡೆಸಲಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಕಾಲಂನಲ್ಲಿ ಕಾಲಂ ಕೊಡ್ ನಲ್ಲಿ ಎ-1192’ರಲ್ಲಿ ರಡ್ಡಿ ಲಿಂಗಾಯತ ಎಂದು ನಮೂದಿಸಬೇಕು ಎಂದು ರಡ್ಡಿ ಸಮಾಜದ ಕಲಬುರಗಿ ಜಿಲ್ಲಾ ಗೌರವಾಧ್ಯಕ್ಷರಾದ ಸಚಿವರಾದ ಶರಣಬಸಪ್ಪ ದರ್ಶನಾಪೂರ ಅವರ ನಿರ್ದೆಶನದ ಮೇರೆಗೆ ಕಲಬುರಗಿ ಜಿಲ್ಲಾ ಸಮಾಜದ ಅಧ್ಯಕ್ಷ ಶರಣಬಸವಪ್ಪ ಕಾಮರೆಡ್ಡಿ ರಡ್ಡಿ ಲಿಂಗಾಯತ ಸಮಾಜಕ್ಕೆ ಕರೆ ನೀಡಿದರು.
ನಗರದ ರಡ್ಡಿ ಸಮಾಜದ ಕಚೇರಿಯಲ್ಲಿ ಸಮಾಜದ ಮುಖಂಡರ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರ ಸೆ. 22 ರಿಂದ ಎಲ್ಲ ಜನಾಂಗದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಇನ್ನಿತರ ಸುಮಾರು 60 ಮಾಹಿತಿಯ ಜನಗಣತಿಯನ್ನು ಆರಂಭಿಸಲಿದೆ ಎಂದರು.
ಸೆ.3 ರಂದು ಹುಬ್ಬಳ್ಳಿಯಲ್ಲಿ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಸಮಾಜದ ರಾಜ್ಯಮಟ್ಟದ ಪದಾಧಿಕಾರಿಗಳ ಮತ್ತು ಮುಖಂಡರ ಕಾರ್ಯಕಾರಿ ಸಭೆಯಲ್ಲಿ ರಾಜ್ಯ ಸರಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯ ಸರಕಾರ ಪ್ರಕಟಿಸಿದಂತೆ ಜಾತಿ ಕಾಲಂನಲ್ಲಿ ಕಾಲಂ ಕೋಡ್ : ಕಾಲಂ-1192 ರಡ್ಡಿ ಅಂಗಾಯತ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ಒಮ್ಮತದ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಆದಕಾರಣ ಕಲಬುರಗಿ ಜಿಲ್ಲೆಯ ಸಮಾಜದವರು ಈ ಜನಗಣತಿಯಲ್ಲಿ ಕುಟುಂಬದ ವೈಯಕ್ತಿಕ ಸ್ಥಿತಿಗತಿಗಳ ವಿವರಗಳನ್ನು ಸಂಪೂರ್ಣವಾಗಿ ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ಧರ್ಮ ಮತ್ತು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಅಥವಾ ಲಿಂಗಾಯತ ರೆಡ್ಡಿ ಎ-1192 ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಚಂದ್ರಶೇಖರ ರಡ್ಡಿ ಪರಸರಡ್ಡಿ, ಜಾನು ಗೌಡ, ಡಾ. ಸಂಜೀವರೆಡ್ಡಿ, ಸಿದ್ದರಡ್ಡಿ, ಸಂಜುರಡ್ಡಿ , ಮಹೇಶ ರಡ್ಡಿ, ಶಾಂತರಡ್ಡಿ, ಪಂಪನಗೌಡ, ಅಂಬರೀಶ ಕೊಡದ, ಪ್ರೊ. ವಣಿಕ್ಯಾಳ, ಶಂಕರ್ ಗೌಡ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


