ಕಲಬುರಗಿ: ಆಳಂದ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಪೌರನೌಕರ ಸಂಘದ ಸ್ಥಳೀಯ ಘಟದ ಸಭೆಯಲ್ಲಿ ನೂತನ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ (ಸಿಒ) ಸಂಗಮೇಶ ಪನಶೆಟ್ಟಿ ಅವರು ಮಳೆಗಾಲದ ತುರ್ತು ಪರಿಸ್ಥಿತಿಗಳಿಗೆ ಸನ್ನದ್ಧರಾಗಿ ಕೆಲಸ ನಿರ್ವಹಿಸಬೇಕೆಂದು ಸೂಚಿಸಿದರು.
ಮಳೆಯಿಂದಾಗಿ ಬಡಾವಣೆಗಳಲ್ಲಿ ನೀರಿನ ಅವಘಡ ಉಂಟಾದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆ ಹಾಗೂ ಇತರ ಅವಶ್ಯಕ ಕಾರ್ಯಗಳಲ್ಲಿ ಹಿಂಜರಿಕೆ ತೋರಿದರೆ ಕ್ರಮ ಜರುಗಿಸಲಾಗುವುದು. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಪುರಸಭೆಗೆ ಕೀರ್ತಿ ತಂದುಕೊಡಿ ಎಂದು ಪನಶೆಟ್ಟಿ ಕರೆ ನೀಡಿದರು.
ಪುರಸಭೆ ಅಧ್ಯಕ್ಷ ಫೀರದೋಸ್ ಅನ್ಸಾರಿ ಗೌಡಾ ಅವರು ನೂತನ ಪದಾಧಿಕಾರಿಗಳಿಗೆ ಸನ್ಮಾನ ಸಲ್ಲಿಸಿ, “ನೌಕರರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿ, ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಂದಾಳತ್ವ ತೋರಬೇಕು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸದಸ್ಯರಾದ ದೋಂಡಿಬಾ ಸಾಳುಂಕೆ, ಸಂಜಯ ನಾಯಕ ಸೇರಿದಂತೆ ಅನೇಕರು ಸನ್ಮಾನದಲ್ಲಿ ಪಾಲ್ಗೊಂಡರು.
ಈ ಮೊದಲು ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು. ಅಧ್ಯಕ್ಷರಾಗಿ ಸಿದ್ರಾಮಪ್ಪ ಎನ್. ಬಟಗೇರಿ, ಉಪಾಧ್ಯಕ್ಷ ಮಾರುತಿ ಉಕ್ರಂಡೆ, ಕಾರ್ಯದರ್ಶಿ ಬೀರಪ್ಪ ಪೂಜಾರಿ, ಸಂಘಟನಾ ಕಾರ್ಯದರ್ಶಿ ರಾಮ ಪೂಜಾರಿ, ಖಜಾಂಚಿ ಚಿದಾನಂದ ಜಂಗಲೆ, ಉಪಖಜಾಂಚಿ ಅಜೀಮ್ ಕರ್ಜಗಿ ಅವರನ್ನು ಏಕಮತದಿಂದ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗಾಯತ್ರಿ ದೇಗುಲಮಡಿ, ಸಿದ್ಧಯ್ಯ ಸ್ವಾಮಿ, ಹರಿಷ ಗೋವಿನ, ಶಹಾಜಿ ಮೋರೆ, ಗೋವಿಂದ ಏಕಬೋಟೆ, ದಾನಯ್ಯ ಸ್ವಾಮಿ, ಮಿರ್ಜಾ ಇದಾಯಿತುಲ್ಲಾ (ಚೋಟು), ಜೀವರಾಜ ದೇವನೂರ್, ಜ್ಞಾನೇಶ್ವರಿ ಜಂಗಲೇ, ಚಂದ್ರಶೇಖರ ಸನಗುಂದಿ, ಮಶಾಕ್ ಚೌಸ್, ಸಾಯಬಣ್ಣ ದೇವನೂರ, ಸುಮಿತ್ರಾಬಾಯಿ ಸಿಂಗೆ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.


