ಕಲಬುರಗಿ: ಸಮಾಜದ ಓರೆಕೊರೆಗಳನ್ನು ತಿದ್ದುವುದಕ್ಕೆ ಉದಯವಾದ ರಂಗಭೂಮಿಯು ವ್ಯಕ್ತಿಯ ಸಾಮಾಜಿಕ ವಿಕಸನಕ್ಕೂ ಅದು ಸಹಕಾರಿಯಾಗಿ ನಿಂತಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ್ ಲಂಡನ್ಕರ್ ಹೇಳಿದರು.
ಶುಕ್ರವಾರ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕಲಬುರಗಿ ರಂಗಾಯಣ ಇವರುಗಳ ಸಂಯುಕ್ತಾಶ್ರಯದಲ್ಲಿ ರಂಗಾಯಣದ ಸಭಾಂಗಣದಲ್ಲಿ ಬಿ.ವಿ. ಕಾರಂತ ಅರವರ ಜನ್ಮದಿನದ ಸವಿ ನೆನಪಿಗಾಗಿ ಆಯೋಜಿಸಿದ್ದ “ಕಾರಂತರ ರಂಗನಿನಾದ” ಕಾರ್ಯಕ್ರಮವನ್ನು ಕಾರಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದಲ್ಲದೆ ನಗಾರಿ ಬಾರಿಸಿ ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆ ಅನಾವರಣಕ್ಕೆ ಮತ್ತು ಸಮಾಜ ತಿದ್ದುವಲ್ಲಿ ರಂಗಭೂಮಿ ಅತ್ಯುತ್ತಮ ವೇದಿಕೆ. ನನಗೆ ನಾಟಕ ಮಾಡಲು ಬರದಿದ್ದರು ನಾನೊಬ್ಬ ರಂಗ ಭೂಮಿಯ ಆರಾಧಕ.ರಂಗಭೂಮಿಯ ಮೇಲೆ ತಮಗೆ ಬಹಳಷ್ಟು ಆಸಕ್ತಿ ಇದೆ ಎಂದ ಅವರು, ಜೀವನದ ಮೌಲ್ಯ ತಿಳಿಸಿಕೊಡುವ ರಂಗಭೂಮಿಯನ್ನು ಉಳಿಸಿ ಬೆಳಸಬೇಕು ಎಂದರು.
ರಂಗಭೀಷ್ಮ ಎಂದೇ ಪ್ರಖ್ಯಾತವಾಗಿ ಭಾರತೀಯ ಮತ್ತು ಕನ್ನಡ ರಂಗಭೂಮಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಕಾರಂತರು ರಂಗಭೂಮಿ, ಚಿತ್ರಕಲೆ, ಸಂಗೀತ ಕ್ಷೇತ್ರದಲ್ಲಿ ದಿಗ್ಗಜರಾಗಿದ್ದರು. ಬಾಲ್ಯದಿಂದಲೇ ನಾಟಕ, ಕಲೆ, ರಂಗಭೂಮಿಯನ್ನು ಮೈಗೂಡಿಸಿಕೊಂಡಿದ್ದ ಕಾರಂತರನ್ನು ರಂಗಜಂಗಮ ಎಂದು ಕೂಡ ಕರೆಯುತ್ತಾರೆ. ಕನ್ನಡಕ್ಕೆ ಸೀಮಿತವಾಗದೆ ಹಲವಾರು ಭಾಷೆಗಳಲ್ಲಿ ನಾಟಕವನ್ನು ಸಹ ಮಾಡಿದ್ದಾರೆ ಎಂದರು.
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ನಾಟಕ ವಿಭಾಗದ ಪ್ರಾಧ್ಯಾಪಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಮಾತನಾಡಿ, ರಂಗಾಯಣದಿಂದ ಕಲಾವಿದರು ವಿಮುಖರಾಗುತ್ತಿದ್ದು, ಮತ್ತೆ ರಂಗಭೂಮಿಯತ್ತ ಮುಖ ಮಾಡುವಂತೆ ಕಲಬುರಗಿ ರಂಗಾಯಣ ಪ್ರದೇಶದ ಯುವ ಕಲಾವಿದರನ್ನು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕೇಂದ್ರಿತವಾಗಿ ಕಾರ್ಯಕ್ರಮಗಳು ರೂಪಿಸಬೇಕಿದೆ. ಪ್ರಮುಖವಾಗಿ ಹಳ್ಳಿಯತ್ತ ರಂಗಾಯಣ ಹೆಜ್ಜೆ ಇಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿ, ರಸ್ತೆಗಳಿಲ್ಲದ ಊರನ್ನು ರಂಗಭೂಮಿಯ ಕೇಂದ್ರವನ್ನಾಗಿಸೊಕೊಂಡು ಇಡಿ ಜಗತ್ತಿನ ರಂಗಭೂಮಿಯನ್ನು ತಮ್ಮ ಕಡೆ ತಿರುಗಿಸಿಕೊಂಡ ಮಹಾನ ವ್ಯಕ್ತಿ ಬಿ.ವಿ. ಕಾರಂತರು. ರಂಗಭೂಮಿಯು ಸಾಮಾಜಿಕ ಬದಲಾವಣೆಯ ಮಾಧ್ಯಮವಾಗಿದೆ. ಹೀಗಾಗಿ ರಂಗಭೂಮಿಯನ್ನು ಯಾರು ಮರೆಯಬಾರದೆಂದು ಕಲಾವಿದರಿಗೆ ಕರೆ ನೀಡಿದರು.
ಗಾಯಕ ಮತ್ತು ಸಂಗೀತ ಸಂಯೋಜಕ ರಾಘವ ಕಮ್ಮಾರ ಅವರು, ಬಿ. ವಿ ಕಾರಂತರ ಬದುಕು ಮತ್ತು ಸಾಧನೆಗಳು ಕುರಿತು ಸಂಗೀತ ಪ್ರಾತ್ಯಕಿಕೆ ಜೊತೆಗೆ ರಂಗ ಕಲಾವಿದರೊಂದಿಗೆ ಸಂವಾದ ನಡೆಸಿದರು.
ಇದೇ ಸಂದರ್ಭದಲ್ಲಿ ಬಿ.ವಿ.ಕಾರಂತರ ಬದುಕು ಮತ್ತು ಸಾಧನೆಗಳ ಕುರಿತು ಕಾಲೇಜುಗಳಲ್ಲಿ ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 13 ವಿದ್ಯಾರ್ಥಿಗಳಿಗೆ ಅತಿಥಿ ಗಣ್ಯರು ಪ್ರಮಾಣ ಪತ್ರ ನೀಡಿ ಗೌರವಿಸಿದರು. ಸಿದ್ದಾರ್ಥ ಚಿನ್ಮಯಿ ಇದ್ಲಾಯಿ ಮತ್ತು ತಂಡ ರಂಗಗೀತೆಗಳನ್ನು ಸೊಗಸಾಗಿ ಹಾಡಿದರು.
ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಡಾ.ರಮೇಶ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೇಶ್ವರಿ ನಾಶಿ ಉಪಸ್ಥಿತರಿದ್ದರು. ರಂಗಾಯಣದ ಅಡಳಿತಾಧಿಕಾರಿ ಸಿದ್ರಾಮ ಸಿಂದೆ ಸ್ವಾಗತಿಸಿದರೆ, ಕಪಿಲ್ ಚಕ್ರವರ್ತಿ ನಿರೂಪಿಸಿದರು.


