ಕಲಬುರಗಿ: ಬಸವ ಸಿದ್ಧಾಂತದಲ್ಲಿ ಚೈತನ್ಯಕ್ಕೆ ಮಹತ್ವವಿದೆ. ಜಂಗಮ ಸ್ವಾಮಿಗಳಿಗೆ ವಿವೇಕ ಕಡಿಮೆ ಇದೆ. ಪೂಜ್ಯ ಲಿಂ. ಶರಣಬಸವಪ್ಪ ಅಪ್ಪ ಲಿಂಗ ಶರೀರದ ತಲೆಯ ಪಾದವಿಟ್ಟಿರುವುದು ಅವಿವೇಕದ ಪರಮಾವಧಿ ಎಂದು ಸಾಣೆಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಗರದ ಲಿಂ. ಬಸವರಾಜಪ್ಪ ಅಪ್ಪ ಸ್ಮಾರಕ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ವಿದ್ಯಾರ್ಥಿ-ಸಾರ್ವಜನಿಕರ ಮುಕ್ತ ಸಂವಾದದಲ್ಲಿ ಲಿಂಗೈಕ್ಯ ಶರಣಬಸವಪ್ಪ ಅವರ ಲಿಂಗ ಶರೀರದ ಮೇಲೆ (ತಲೆ ಮೇಲೆ) ಸ್ವಾಮಿಗಳು ಕಾಲಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಕೆಲ ಮಠಗಳು ಮಾರಕವಾಗಿವೆ. ಯಾವ ಮಠ ಮಾರಕ ಯಾವ ಮಠ ಪೂರಕ ಎನ್ನುವುದು ಭಕ್ತರು ಗುರುತಿಸಬೇಕು. ಮಾರಕವಾದ ಮಠಗಳಿಗೆ ಹೋಗೋವುದನ್ನು ಬಿಟ್ಟು ನಿಮಗೆ ಬೇಕಾದ ಪೂರಕವಾದ ಮಠಗಳಿಗೆ ಹೋಗಿ ಎಂದು ಸಲಹೆ ನೀಡಿದರು.
ಬಸವಣ್ಣ ಕಟ್ಟಿದ ಕಲ್ಯಾಣ ನಾಡು ಈಗ ಏಕಿಲ್ಲ? ಬಸವ ಕಲ್ಯಾಣದಲ್ಲಿ ನಡೆಯಲಿರುವ ದಸರಾ ದರ್ಬಾರ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ಸಮಾನತೆ ತಂದ ಬಸವಣ್ಣನವರನ್ನು ಕೆಲವರು ಈಗಲೂ ವಿರೋಧಿಸುತ್ತಾರಲ್ಲ ಏಕೆ? ಮಠಾಧೀಶರಾಗಿ ನೀವೇನು ಮಾಡುತ್ತಿದ್ದೀರಿ? ವೀರಶೈವ ಲಿಂಗಾಯತ ಹೇಗೆ ಬೇರೆ? ಎಂಬಿತ್ಯಾದಿ ಪ್ರಶ್ನೆಗಳು ಗುರುರಾಜ, ಸೃಷ್ಟಿ ಜಮಾದಾರ, ಸಮೀರಾ, ಸಾಕ್ಷಿ, ವರ್ಷಾ, ಮಹಾಂತೇಶ ಕುಂಬಾರ, ಸಂಜನಾ, ಲಕ್ಷ್ಮೀ, ಆರತಿ, ಗುಂಡಮ್ಮ, ಇನ್ನಿತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಸಾಣೆಹಳ್ಳಿ, ಗದಗ, ಭಾಲ್ಕಿ ಶ್ರೀಗಳು ಉತ್ತರಿಸಿದರು.
ಇದೇ ವೇಳೆಯಲ್ಲಿ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು, ಸಾಣೇಹಳ್ಳಿಯ ಡಾ.ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗದಗನ ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹಾಗೂ ಅಥಣಿಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿಗಳು ಒಟ್ಟಾಗಿ ಮಾತನಾಡಿ, ಜೈನರು, ಸಿಖ್ಖರು ಸ್ವತಂತ್ರ ಧರ್ಮವಾಗಿ ಮಾನ್ಯತೆ ಪಡೆದಿದ್ದಾರೆ. ಅದೇ ಮಾದರಿಯಲ್ಲಿ ಲಿಂಗಾಯತ ಧರ್ಮಕ್ಕೂ ಕೇಂದ್ರ ಸರಕಾರ ತಕ್ಷಣ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಸಿಎಂ ಸಿದ್ದರಾಮಯ್ಯ ಈ ಸಂಬಂಧ ಈಗಾಗಲೇ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಿದ್ದಾರೆ. ಅಗತ್ಯವಿದ್ದರೆ ರಾಜ್ಯ ಸರಕಾರದಿಂದ ಮತ್ತೊಮ್ಮೆ ಶಿಫಾರಸ್ಸು ಕಳುಹಿಸುವಂತೆ ಒತ್ತಾಯಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮೈಸೂರಿನ ಡಾ.ಶರಶ್ಚಂದ್ರ ಸ್ವಾಮೀಜಿ, ಬೆಳಗಾವಿಯ ಡಾ.ಗುರುದೇವಿ ಹುಲ್ಲೇ ಪ್ಪನವರ ಮಠ, ಶ್ರೀ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ರಟಕಲ್ ಶ್ರೀಗಳು, ನಾಗೂರ ಶ್ರೀಗಳು, ಹೂಲಸೂರ ಶ್ರೀಗಳು ವಿವಿಧ ಮಠಾಧೀಶರು ಮತ್ತು ಯೋಜನಾ ಆಯೋಗದ ರಾಜ್ಯ ಉಪಾಧ್ಯಕ್ಷ, ಆಳಂದ ಶಾಸಕ ಬಿ.ಆರ್. ಪಾಟೀಲ್ ಸೇರಿ ಇತರರು ಇದ್ದರು.
ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್, ಅಧ್ಯಕ್ಷತೆ ವಹಿಸಿದ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ.ಅನೀಲಕುಮಾರ ಬಿಡವೆ, ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಸಾರಿಕಾದೇವಿ ಕಾಳಗಿ ಮಾತನಾಡಿದರು. ಜಿಲ್ಲಾ ವೀರಶೈವ ಸಮಾಜ ಮತ್ತು ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ್ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಅಪ್ಪ ಸಭಾಂಗಣದವರೆಗೆ ಮೆರವಣಿಗೆ ನಡೆಯಿತು.


