ಕಲಬುರಗಿ: ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕಾಗಿ ತನ್ನ ಮಗಳನ್ನೇ ಕತ್ತು ಹಿಸುಕಿ, ಸುಟ್ಟು ಹಾಕಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿ ನಡೆದಿದೆ.
ಕವಿತಾ ಶಂಕರ ಕೊಳ್ಳೂರ(18) ಎಂಬ ಯುವತಿಯೇ ಮರ್ಯಾದಾ ಹತ್ಯೆಗೆ ಬಲಿಯಾದ ದುರ್ದೈವಿ ಎಂದು ತಿಳಿದುಬಂದಿದೆ.
ಆರೋಪಿಗಳಾದ ಮೃತ ಯುವತಿಯ ತಂದೆ ಶಂಕರ ಕೊಳ್ಳುರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನೊಂದಿಗೆ ಇದ್ದ ಇನ್ನಿಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಿಂಗಾಯತ ಸಮುದಾಯದ ಯುವತಿ ಕವಿತಾ, ಮೇಳಕುಂದಾ (ಬಿ) ಗ್ರಾಮದಲ್ಲೇ ಕುರುಬ ಸಮುದಾಯದ ಯುವಕನನ್ನು ಪ್ರೀತಿಸಿದ್ದಕ್ಕಾಗಿ ತಂದೆ ಹಾಗೂ ಕುಟುಂಬಸ್ಥರು ಕಾಲೇಜು ಬಿಡಿಸಿದ್ದಾರೆ. ಆದರೂ ಆಕೆ ಯುವಕನನ್ನು ಪ್ರೀತಿಸುವುದನ್ನು ಬಿಡದಿರಲು ತೀರ್ಮಾನಿಸಿದ್ದಾಳೆ. ಇದರಿಂದ ಕೋಪಗೊಂಡ ತಂದೆ ಹಾಗೂ ಆಕೆಯ ಸಂಬಂಧಿಕರು ಸೇರಿ ಯುವತಿಯನ್ನು ಕೊಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇಳಕುಂದಾ (ಬಿ) ಗ್ರಾಮದಲ್ಲಿ ಪ್ರೀತಿಸುತ್ತಿದ್ದ ಇಬ್ಬರ ಪ್ರೇಮಿಗಳ ಜಾತಿಗಳು ಬೇರೆ ಬೇರೆಯಾಗಿವೆ. ಆ ಎರಡು ಜಾತಿಗಳ ಮಧ್ಯೆ ಹಲವು ವರ್ಷಗಳಿಂದ ಪರಸ್ಪರ ದ್ವೇಷ ಇತ್ತು ಎನ್ನಲಾಗಿದೆ. ಅದೇ ಕಾರಣಕ್ಕಾಗಿ ಮಗಳು ಕವಿತಾ, ಯುವಕನ ಜೊತೆ ಸಂಬಂಧ ಇದ್ದರೆ ಮರ್ಯಾದೆ ಹೋಗುತ್ತದೆ ಎಂದು ಭಾವಿಸಿ, ತಂದೆ ಸೇರಿದಂತೆ ಸಂಬಂಧಿಗಳು ಕೂಡಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಡಾ. ಶರಣಪ್ಪ ಎಸ್.ಡಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


