ಕಲಬುರಗಿ: ಕಳೆದ ನಾಲ್ಕು ವರ್ಷದಿಂದ ಅರ್ಹವಲ್ಲದ ನಕಲಿ ಹೂಡುವಳಿ ತೆರಿಗೆಯನ್ನು ಕ್ಲೇಮು ಮಾಡಿ ತನ್ನ ವಿವಿಧ ನಾಲ್ಕು ಸಂಸ್ಥೆಗಳ ಮುಖೇನ ಸುಳ್ಳು ದಾಖಲೆ ಸೃಷ್ಟಿಸಿ, ನಕಲಿ ಬಿಲ್ಗಳ ನೀಡಿ 132 ಜನರಿಗೆ ವಂಚಿಸಿದಲ್ಲದೆ ಸರ್ಕಾರದ ಬೊಕ್ಕಸಕ್ಕೆ 9 ಕೋಟಿ 25 ಲಕ್ಷ ತೆರಿಗೆ ಕಟ್ಟದೆ ವಂಚಿಸಿರುವ ಹಿನ್ನಲೆಯಲ್ಲಿ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಕಲಬುರಗಿ ಪೂರ್ವ ವಲಯ ವಾಣಿಜ್ಯ ತೆರಿಗೆ (ಜಾರಿ) ಇಲಾಖೆಯ ಜಂಟಿ ಆಯುಕ್ತೆ ಯಾಸ್ಮೀನ ಬೇಗಂ ವಾಲೀಕಾರ ಅವರು ತಿಳಿಸಿದರು.
ನಗರದ ರೈಲ್ವೆ ಸ್ಟೇಷನ ಬಳಿ ಇರುವ ವಾಣಿಜ್ಯ ತೆರಿಗೆ ಇಲಾಖೆಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೀದರ್ ಜಿಲ್ಲೆಯ ನಿವಾಸಿ ರಾಹುಲ್ ಕಿಶನ ಕುಲಕರ್ಣಿ ಅವರನ್ನು ಕಲಬುರಗಿಯ ಪೂರ್ವ ವಲಯದ ಜಾರಿ ವಿಭಾಗದ ಅಧಿಕಾರಿಗಳು, ಬೆಂಗಳೂರು, ಶಿವಮೊಗ್ಗದ ಅಧಿಕಾರಿಗಳು ಹಾಗೂ ತೆಲಂಗಾಣ ರಾಜ್ಯದ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳ ಸಹಯೋಗದಿಂದ ಹೈದರಾಬಾದಿನಲ್ಲಿ ವಶಕ್ಕೆ ಪಡೆದು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಅಪಾದಿತ ತೆರಿಗೆದಾರ ತನ್ನ ಕುಟುಂಬ ಸದಸ್ಯರ ಹಾಗೂ ಸ್ನೇಹಿತರ ಆಧಾರ್ ಹಾಗೂ ಪ್ಯಾನ್ ಕಾರ್ಡಗಳನ್ನು ದುರುಪಯೋಗಪಡಿಸಿಕೊಂಡು, ಜಿಎಸ್ಟಿ ನೋಂದಣಿಗಳನ್ನು ಪಡೆದು ಬ್ಯಾಂಕ್ ಖ್ಯಾತೆಗಳನ್ನು ನಿರ್ವಹಿಸುತ್ತಾ ಸರಕು, ಸೇವೆಗಳನ್ನು ಪೂರೈಕೆ ಮಾಡದೇ ನಕಲಿ ಬಿಲ್ಲುಗಳನ್ನು ನೀಡಿ ಆ ಮೂಲಕ ನಕಲಿ ಹೂಡುವಳಿ ತೆರಿಗೆಯ ಕ್ಲೇಮ ಮಾಡಲು ಸಹಕರಿಸುತ್ತಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದೆ, ಇದರಲ್ಲಿ ಬಹುತೇಕ ಲಾಭಾಂಶಿಗಳು ಕಾಮಗಾರಿ ಗುತ್ತಿಗೆದಾರರಾಗಿದ್ದು, ಇವರು ಪಡೆದಿರುವ ನಕಲಿ ಹೂಡುವಳಿ ತೆರಿಗೆಯ ಬಗ್ಗೆ ತನಿಖೆ ಪ್ರಗತಿಯಲ್ಲಿರುತ್ತದೆ. ನಕಲಿ ಹೂಡುವಳಿ ತೆರಿಗೆ ಪಡೆದಿರುವ ಎಲ್ಲಾ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲಾಗಿದ್ದು, ನಕಲಿ ಹೂಡುವಳಿ ತೆರಿಗೆ ಕ್ಲೇಮು ಮಾಡಿರುವುದರಿಂದ ತೆರಿಗೆಯನ್ನು ಬಡ್ಡಿ ಮತ್ತು ದಂಡದ ಸಮೇತ ವಸೂಲಿ ಮಾಡಲಾಗುವುದು ವಿವರಿಸಿದರು.
ಸರ್ಕಾರಕ್ಕೆ ವಂಚಿಸಿದ ಆರೋಪದಡಿ ರಾಹುಲ್ಗೆ ಕನಿಷ್ಟ 5 ವರ್ಷ ಜೈಲು ಹಾಗೂ ದಂಡ ವಿಧಿಸುತ್ತದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬೀದರ ತೆರಿಗೆ ಸಹಾಯಕ ಆಯುಕ್ತ (ಜಾರಿ) ಪರ್ವತಗೌಡ ಎಸ್., ವಾಣಿಜ್ಯ ತೆರಿಗೆ ಅಧಿಕಾರಿ ಅಶೋಕ ಶೆಂಬಳ್ಳಿ, ಕಲಬುರಗಿ ವಾಣಿಜ್ಯ ತೆರಿಗೆ ಅಧಿಕಾರಿ (ಜಾರಿ) ಖಾಜಾ ಖಲಲೀಲುಲ್ಲಾ, ವಾಣಿಜ್ಯ ತೆರಿಗೆ ಉಪಯುಕ್ತರು (ಜಾರಿ) ಪುಷ್ಷಲತಾ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು(ಜಾರಿ) ಪ್ರಭಾತ ರಂಜನ , ಮಹೇಶ ಟಿ.ಎ., ಸೇರಿದಂತೆ ಇತರರು ಇದ್ದರು.


