ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ರವಿವಾರ ಏರ್ಪಡಿಸಿದ ಚಿತ್ರಕಲಾ ಪ್ರದರ್ಶನ ಹಾಗೂ ಪೌರಕಾರ್ಮಿಕರೊಂದಿಗೆ ಸ್ವಾತಂತ್ರ್ಯೋತ್ಸವ ಆಚರಣೆ ಸಮಾರಂಭ ಅತ್ಯಂತ ವಿಜೃಂಭಣೆಯಿoದ ನಡೆಯಿತು.
ಸ್ವಾತಂತ್ರ್ಯ ಹೋರಾಟದ ಹಿಂದೆ ಹಲವು ಹೋರಾಟಗಾರರ ತ್ಯಾಗವಿದೆ. ಅವರ ಸ್ಮರಣೆ ಮಾಡುವ ನಿಟ್ಟಿನಲ್ಲಿ ಎಲೆ ಮರೆಯವ ಕಾಯಿಯಂತಿರುವ ಅನೇಕ ಹೋರಾಟಗಾರರ ಮತ್ತು ಸ್ವಾತಂತ್ರ್ಯ ಚಳವಳಿಯ ಪ್ರಮುಖ ಸನ್ನಿವೇಶಗಳ ಅನಾವರಣ ಪ್ರೇಕ್ಷಕರ ವಿಶೇಷ ಗಮನ ಸೆಳೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ನ್ಯಾಯಾಧೀಶರೂ ಆದ ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷ ಎಸ್.ಎಲ್. ಚವ್ಹಾಣ ಮಾತನಾಡಿ, ಸ್ವಚ್ಚ ಹಾಗೂ ನಿರ್ಭೀತಿ ಹೊಂದಿದ ಸ್ವಾತಂತ್ರ್ಯ ನಮ್ಮ ಬದುಕಿನ ಉಸಿರಾಗಿದೆ. ಈ ದಿಸೆಯಲ್ಲಿ ಸಮಾಜದಲ್ಲಿ ಅಪರಾಧ ತಡೆಗಟ್ಟಲು ಹಾಗೂ ಭಯಮುಕ್ತ ವಾತಾವರಣ ನಿರ್ಮಾಣಕ್ಕಾಗಿ ನೈತಿಕ ಮೌಲ್ಯಗಳ ಅವಶ್ಯಕವಾಗಿವೆ. ಇಂಥ ನೈತಿಕ ಮೌಲ್ಯ ಮತ್ತು ಬದುಕು ನಮ್ಮದಾಗಬೇಕು. ಒಳ್ಳೆಯ ಮನುಷ್ಯನಾಗಲು ತನ್ನ ಗೌರವ ಘನತೆ ಹೆಚ್ಚಿಸಿಕೊಳ್ಳಲು ಕಾನೂನು ಅರಿವು ಮುಖ್ಯ. ನಮ್ಮ ಜತೆ ಮಾತೃ, ಶಿವಾ ಮತ್ತು ಲೌಕಿಕ ನೈಯಾಲಯಗಳಿದ್ದು, ಆತ್ಮಸಾಕ್ಷಿಯಾಗಿ ಕೆಲಸ ಮಾಡುತ್ತವೆ. ಆದರೆ ಕಾನೂನುಗಳ ಅರಿವಿನ ಕೊರತೆಯಾಗಿದ್ದು, ಪ್ರಾಥಮಿಕ ಹಂತಲದಲ್ಲಿಯೇ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸಬೇಕಾಗಿದೆ. ಮತ್ತು ಸಾಹಿತ್ಯ, ಸಂಗೀತ, ನಾಟಕ ಚಿತ್ರಕಲೆಗಳ ಮೂಲಕವೂ ಅರಿವು ಬೆಳೆಸಬಹುದಾಗಿದೆ ಎಂದು ಹೇಳಿದರು.
ನಮ್ಮ ಪೌರ ಕಾರ್ಮಿಕರು ನಿಜವಾದ ಸಮಾಜ ಸೇವಕರು. ಇಂಥ ಸೇವಕರಿಂದಲೇ ನಾವೆಲ್ಲ ರೋಗ ಮುಕ್ತ ಸಮಾಜ ಕಟ್ಟಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಬ್ರಿಟಿಷರ ದಾಸ್ಯದಿಂದ ನಮ್ಮ ದೇಶವನ್ನು ಮುಕ್ತಗೊಳಿಸಲು ಶ್ರಮಿಸಿದ ರಾಷ್ಟ್ರ ನಾಯಕರ ಆದರ್ಶಗಳೇ ನಮ್ಮ ಹೊಸ ಜೀವನಕ್ಕೆ ಸ್ಪೂರ್ತಿಯಾಗಿವೆ. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ಅತ್ಯಂತ ಅಗತ್ಯವಿದೆ. ಈ ದಿಸೆಯಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸುವ ಮೂಲಕ ಹೋರಾಟಗಾರರನ್ನು ಸ್ಮರಿಸುವ ಕಾರ್ಯ ಪರಿಷತ್ತು ಮಾಡಿದಂತಾಗಿದೆ ಎಂದರು.
ಕುಡಾ ದ ವಿಶ್ರಾಂತ ಆಯುಕ್ತ ದಯಾನಂದ ಪಾಟೀಲ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಕಸಾಪ ಕೇಂದ್ರ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿ ಸೈಯ್ಯದ್ ನಜಿರುದ್ದೀನ್ ಮುತ್ತವಲಿ, ಚಿತ್ರಕಲಾವಿದ ಡಾ. ರೆಹಮಾನ್ ಪಟೇಲ್, ಧರ್ಮಣ್ಣ ಎಚ್. ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜಶೇಖರ ಶಾಮಣ್ಣ, ಡಾ. ಎಸ್.ಎಂ. ನೀಲಾ ಮಾತನಾಡಿದರು.
ನಗರದ ಅನೇಕ ಸ್ವಚ್ಚತಾ ರಾಯಭಾರಿಗಳನ್ನು ಪರಿಷತ್ತು ವಿಶೇಷವಾಗಿ ಸತ್ಕರಿಸಿ ಧನ್ಯತಾಭಾವ ಮೆರೆಯಿತು.
ಪ್ರಮುಖರಾದ ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಭುವನೇಶ್ವರಿ ಹಳ್ಳಿಖೇಡ, ಬಾಬುರಾವ ಪಾಟೀಲ, ಮಹ್ಮದ್ ಅಯಾಜೋದ್ದೀನ್ ಪಟೇಲ್, ನವಾಬ ಖಾನ್, ಶಿವಾನಂದ ಪೂಜಾರಿ, ಎಂ.ಎನ್. ಸುಗಂದಿ, ಶಿವಾನಂದ ಸುರವಸೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.