ಕಲಬುರಗಿ: ಪ್ರತಿ ವರ್ಷದಂತೆ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಜಯನಗರ ಶಿವಮಂದಿರದಲ್ಲಿ ಶ್ರಾವಣ ಮಾಸದ ನಿಮಿತ್ತ ಜುಲೈ 25 ರಿಂದ ಆಗಷ್ಟ್ 24 ರವರೆಗೆ ಒಂದು ತಿಂಗಳ ಪೂರ್ತಿ ಗುಡ್ಡಾಪೂರ ಶ್ರೀ ದಾನಮ್ಮ ದೇವಿಯ ಚರಿತ್ರೆಯ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಇಂದಿಲ್ಲಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಅದರಲ್ಲೂ ಟಿವಿ ಮನರಂಜನೆ ಹಾಗೂ ಮೋಬೈಲ್ ಗಳ ಹಾವಳಿಯಿಂದ ಪುರಾತನ ಕಾಲದ ಪುರಾಣಗಳು ಮರೆಯಾಗುತ್ತಿವೆ. ನಗರಗಳಲ್ಲಿ ಪ್ರವಚನ,ಪುರಾಣಗಳು ಎಂದರೆ ಇಂದಿನ ಜನಾಂಗಕ್ಕೆ ಅಸಡ್ಯೆ ಭಾವನೆ. ಇಂಥ ಪರಿಸ್ಥಿತಿಯಲ್ಲೂ ಜಯನಗರ ಶಿವಮಂದಿರದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ತಿಂಗಳ ಪರ್ಯಂತ ಆಧ್ಯಾತ್ಮಿಕ ಪ್ರವಚನ ನಡೆಸುತ್ತಾ ಬರಲಾಗಿದೆ. ಈ ವರ್ಷ ಪುರಾಣ ನಡೆಯಲಿದೆ ಎಂದರು.
ದಿನ ನಿತ್ಯ 7 ರಿಂದ 8 ಗಂಟೆವರೆಗೆ ಅಬ್ಬೆ ತುಮಕೂರಿನ ತಾಲೂಕಿನ ಪುರಾಣ ಪಂಡಿತ ವೇದಮೂರ್ತಿ ಶ್ರೀ ತೋಟಯ್ಯ ಶಾಸ್ತ್ರೀಗಳು ಗುಡ್ಡಾಪೂರದ ವಿಶೇಷವಾಗಿ ಹೆಣ್ಣು ಮಕ್ಕಳ ಹಾಗೂ ಎಲ್ಲರೂ ಭಕ್ತಿಯಿಂದ ಪೂಜಿಸುವ ಮಹಾತಾಯಿ ಶ್ರೀ ದಾನಮ್ಮ ದೇವಿಯ ಪುರಾಣವನ್ನು ದಿನ ನಿತ್ಯ ಒಂದು ತಿಂಗಳವರೆಗೆ ನಡೆಸಿಕೊಡಲಿದ್ದಾರೆ. ನಂತರ ರಾತ್ರಿ 8 ರಿಂದ 8.30 ಗಂಟೆವರೆಗೆ ವಿಶೇಷ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಚಿಂತಕರು ಮತ್ತು ಸಾಹಿತಿಗಳು, ಪತ್ರಕರ್ತರು ಭಾಗವಹಿಸಿ ವಿವಿಧ ರೀತಿಯ ಆಧ್ಯಾತ್ಮದ ಬಗ್ಗೆ ಮಾತನಾಡುವರು. ಕಳೆದ 3 ವರ್ಷದಿಂದ ಶ್ರಾವಣ ಮಾಸದ ಕಾರ್ಯಕ್ರಮವು ಅದ್ದೂರಿಯಾಗಿ ನಡೆದು ಭಕ್ತ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಾರಿ ಭಕಿತರ ಕೋರಿಕೆ ಮೇಲೆ ಶ್ರೀ ದಾನಮ್ಮ ದೇವಿಯ ಪುರಾಣ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಳೆದ ವರ್ಷ ಅನೇಕರಿಂದ ವಿವಿಧ ರೀತಿಯ ಉಪನ್ಯಾಸಗಳು ನಡೆದು ಜನರು ಮೆಚ್ಚುಗೆ ವ್ಯಕ್ತಪಡಿಸಿದರು.ಅದೇ ರೀತಿ ಅದರ ಜೊತೆಗೆ ಮಕ್ಕಳಿಗಾಗಿ ರಂಗೋಲಿ, ಚಿತ್ರ ಬಿಡಿಸುವುದು ಸೇರಿದಂತೆ ಅನೇಕ ಸ್ಪರ್ಧೆಗಳು ಎರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು, ಜನ ಮೆಚ್ಚುಗೆಗೂ ಪಾತ್ರವಾಯಿತು ಎಂದರು.
ಜುಲೈ25 ರಂದು ಶುಕ್ರವಾರ ಸಂಜೆ 7 ಗಂಟೆಗೆ ಜಯನಗರ ಶಿವಮಂದಿರದಲ್ಲಿ ಹಮ್ಮಿಕೊಂಡಿರುವ ಪುರಾಣ ಕಾರ್ಯಕ್ರಮವನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಉದ್ಯಮಿ ಹಾಗೂ ಕೃಷಿ ಚಿಂತಕರಾದ ಡಾ.ಲಿಂಗರಾಜಪ್ಪ ಅಪ್ಪ, ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಗೌರವಾಧ್ಯಕ್ಷ ಹಾಗೂ ಎಚ್ಕೆಇ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ ಅವರು ಆಗಮಿಸಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅಧ್ಯಕ್ಷತೆ ವಹಿಸುವರು. ಪುರಾಣ ಪಂಡಿತ ತೋಟಯ್ಯ ಶಾಸ್ತ್ರಿಗಳು ಪುರಾಣ ನಡೆಸಿಕೊಡುವರು. ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿರುವರು.ತಿಂಗಳ ಪರ್ಯಂತ ನಡೆಯುವ ಪುರಾಣ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕದ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಪುರಾಣದ ನಂತರ ನಿತ್ಯ ಪ್ರಸಾದ ವ್ಯವಸ್ಥೆ ಇರುತ್ತದೆ. ಪ್ರಸಾದ ದಾಸೋಹಿಗಳಿಗೆ ಸತ್ಕರಿಸಲಾಗುವುದು. ಅದೇ ರೀತಿ ಪುರಾಣದ ಮಹಾ ಮಂಗಲೋತ್ಸವ ಆಗಷ್ಟ್ 24 ಭಾನುವಾರರಂದು ಜರುಗಲಿದೆ. ಭಕ್ತರು, ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಬೇಕು ಎಂದು ಅವರು ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ವೀರೇಶ ದಂಡೋತಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ.ಕೆ.ಬಿ, ಕೋಶಾಧ್ಯಕ್ಷ ಬಸವರಾಜ ಮಾಗಿ, ಸಹ ಕಾರ್ಯದರ್ಶಿ ಮಲ್ಲಯ್ಯಸ್ವಾಮಿ ಗಂಗಾಧರ ಮಠ, ಸದಸ್ಯರಾದ ವೀರಪ್ಪ ಹುಡುಗಿ ಇತರರು ಇದ್ದರು.