ಕಲಬುರಗಿ| ವನಮಹೋತ್ಸವಕ್ಕೆ ಚಾಲನೆ; ಹಸಿರಿದ್ದರೆ ಉಸಿರು, ಗಿಡ ನೆಟ್ಟು ಪರಿಸರ ಕಾಪಾಡಿ: ಡಾ.ಮಲ್ಲಿಕಾರ್ಜುನ ಖರ್ಗೆ

Date:

Share post:

ಕಲಬುರಗಿ: ಭೂಮಿ ಮೇಲೆ ಜೀವನ ನಡೆಸಲು ನಿಸರ್ಗವೇ ಜೀವನಕ್ಕೆ ಆಧಾರವಾಗಿದೆ. ಹಸಿರಿದ್ದರೆ ಮಾತ್ರ ಉಸಿರು ಎಂಬುದನ್ನು ಯಾರು ಮರೆಯಬಾರದು. ಮನುಷ್ಯ ತನ್ನ ದುರಾಸೆ ಬಿಟ್ಟು ಗಿಡ-ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡಬೇಕು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.

 

ಶನಿವಾರ ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಲಬುರಗಿ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಇವುಗಳ ಸಹಯೋಗದೊಂದಿಗೆ ಶನಿವಾರ ಇಲ್ಲಿನ ಪಿ.ಡಿಎ ಕಾಲೇಜು ಹಿಂಭಾಗದ ಹೆಚ್.ಕೆ.ಇ. ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಆಯೋಜಿಸಿದ “ವನಮಹೋತ್ಸವ-2025″, “ಹಸಿರು ಪಥ” ಹಾಗೂ “ಕಲಬುರಗಿಯ ಹಸಿರು ಹೆಜ್ಜೆ” ಕಾರ್ಯಕ್ರಮವನ್ನು ಸಸಿಗೆ ನೇರೆರೆಯುವ ಮೂಲಕ ಉದ್ಘಾಟಿಸಿ ಮತ್ತು ಮಕ್ಕಳಿಗೆ ಸಾಂಕೇತಿಕವಾಗಿ ಗಿಡಗಳನ್ನು ವಿತರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಪರಿಸರ ಸಮತೋಲನ ಕಾಪಾಡಬೇಕಾದರೆ ಶೇ.33ರಷ್ಟು ಅರಣ್ಯ ಹೊಂದುವುದು ಅವಶ್ಯಕ. ಇಂದು ದೇಶದಲ್ಲಿ ಶೇ.25.15 ಮಾತ್ರ ಅರಣ್ಯ ಪ್ರದೇಶ ಇದೆ. ಇನ್ನು ಕರ್ನಾಟಕದಲ್ಲಿ ಇದರ ಪ್ರಮಾಣ ಶೇ.21 ಮಾತ್ರ. ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಬೇಕು. ಮುನುಷ್ಯನ ದುರಾಸೆಯಿಂದ ಶೇ.20 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ನಾವು ಕಳೆದುಕೊಂಡಿದ್ದೇವೆ. ರಸ್ತೆ ಬದಿಯಲ್ಲಿ ಸಸಿ ನೆಡುವುದಷ್ಟೇ ಅಲ್ಲದೇ ಅವುಗಳ ರಕ್ಷಣೆ ಮಾಡಬೇಕು. ಸಾರ್ವಜನಿಕರು ಕೂಡಾ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಅವರು ಒತ್ತಿ ಹೇಳಿದರು.

ತಾವು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅರಣ್ಯ ಪ್ರದೇಶ ವಿಸ್ತರಣೆಗೆ ಪ್ರಯತ್ನ ಪಟ್ಟಿರುವುದನ್ನು ನೆನಪಿಸಿಕೊಂಡ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಜನರು ಆಗೆಲ್ಲ ರಸ್ತೆ ಬಡಿಯ ಗಿಡಗಳನ್ನು ಕಡಿದುಕೊಂಡು ಹೋಗಿ ಕೃಷಿ ಪರಿಕರಗಳನ್ನು ಮಾಡಿಕೊಳ್ಳುತ್ತಿದ್ದರು. ಒಣಗಿದ ಅಥವಾ ಕೆಲಸಕ್ಕೆ ಅನುಕೂಲವಾಗುವ ಗಿಡ-ಮರ ಕಡಿದರೆ ಅದರಿಂದ ಸಮಸ್ಯೆಯಾಗುವುದಿಲ್ಲ. ಆದರೆ ಬೆಳೆದು ನಿಂತ ಮರ ಕಡಿದರೆ ಅದು ಅಪಾಯವಾಗುತ್ತದೆ ಎಂದರು.

ಇತ್ತೀಚಿಗೆ ಹೃದಯಾಘಾತದಿಂದ ಜನರನ್ನು ಅದರಲ್ಲೂ ಯುವಕರು ಸಾವನ್ನಪ್ಪುತ್ತಿದ್ದಾರೆ, ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಹೆಚ್ಚು ಜನರು ಮೃತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಖರ್ಗೆ ಅವರು ಜನರು ಜೀವನ ನಡೆಸಲು ಸ್ವಚ್ಛ ಗಾಳಿ, ಬೆಳಕು, ನೀರು ಬೇಕೆ ಬೇಕು. ಇವೆಲ್ಲ ದೊರಕಬೇಕೆಂದರೆ ಪರಿಸರ ಉತ್ತಮವಾಗಿರಬೇಕು. ಜನರ ಒಳಿತಿಗಾಗಿ ಈ ಪ್ರದೇಶಕ್ಕೆ 371ಜೆ ವಿಶೇಷ ಮೀಸಲಾತಿ ಕಲ್ಪಿಸಿದ್ದೇವೆ. ಪರಿಸರ ಸಂರಕ್ಷಣೆ ಸಹ ನಿಮ್ಮ ಭವಿಷ್ಯದ ಬದುಕಿಗೆ, ಯುವ ಪೀಳಿಗೆಗೆ ನೆರವಾಗಲಿದೆ. ರಾಜ್ಯ ಸರ್ಕಾರ ಈ ವರ್ಷ 3 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಅವುಗಳಲ್ಲಿ 2.50 ಕೋಟಿ ಸಸಿಗಳು ಬದುಕಿದರೆ ಅದೆಷ್ಟೋ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಅರಣ್ಯ ಸಂರಕ್ಷಣೆಗೆ 1980ರಲ್ಲಿ ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಗೆ ತಂದರು. ರಾಜ್ಯದಲ್ಲಿ ಬರಗಾಲ ಬಂದಾಗ ಇಲ್ಲಿಗೆ ಬಂದಿದ್ದ ಅವರು ಅರಣ್ಯ ಬೆಳೆಸುವ ಬಗ್ಗೆ ಸಲಹೆ ನೀಡಿದ್ದರು. ಮತ್ತೊಬ್ಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದು ಅರಣ್ಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ, ಅರಣ್ಯಕ್ಕೆ ಸಂಬಂಧಿಸಿದಂತೆ ಜಾರಿಗೆ ಬಂದ ಕಾನೂನುಗಳನ್ನು ದೇಶದ ಯಾವ ರಾಜ್ಯಗಳು ಪಾಲನೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇತ್ತೀಚೆಗೆ ಕೇಂದ್ರ ಸರ್ಕಾರ ಈ ಕಾಯ್ದೆ ತಿದ್ದುಪಡಿ ತಂದಿದ್ದಾದರು ಯಾವುದೇ ಪರಿಣಾಮಕಾರಿ ಯೋಜನೆ ಹಾಕಿಕೊಂಡಿಲ್ಲ. ಪರಿಸ್ಥತಿ ಹೀಗೆ ಮುಂದುವರೆದರೆ ಜನರು ಸ್ವಚ್ಛ ಗಾಳಿ, ಬೆಳಕು, ಆಹಾರ ಸಿಗದೆ ಅಪಾಯಕ್ಕೆ ಸಿಲುಕುವಂತಾಗುತ್ತದೆ ಎಂದರು.

ದಕ್ಷಿಣ ಕರ್ನಾಟಕದ ಬಹುತೇಕ ಕಡೆ ರಸ್ತೆ ಬದಿ ಚೆನ್ನಾಗಿ ಮರಗಳನ್ನು ಬೆಳೆಸಿದ್ದಾರೆ. ನೋದಲು ಸುಂದರವಾಗಿ ಕಾಣುತ್ತವೆ. ರಸ್ತೆ ಬದಿ ಬಿಟ್ಟು ಒಳಗಡೆ ಹೋದರೆ ಮರಗಳಿಲ್ಲ. ಮರ ಕತ್ತರಿಸಿ ಜಮೀನು ಮಾಡಿಕೊಂಡಿದ್ದಾರೆ. ಹೀಗಾದರೆ ಪರಿಸರ ಸಂರಕ್ಷನೆ ಹೇಗೆ ಸಾಧ್ಯ? ಆಲಮಟ್ಟಿ, ನಾರಾಯಣಪುರ, ಕಾರಂಜಾ ಜಲಾಶಯ, ಕೃಷ್ಣಾ-ಭೀಮಾ ನದಿ ಹಾಗೂ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಹಿನ್ನಿರಿನ ನೆರವಿನಿಂದ ಗಿಡ-ಮರಗಳನ್ನು ಬೆಳೆಸಿ ಅರಣ್ಯ ಪ್ರದೇಶ ವಿಸ್ತರಿಸಬೇಕು. ಇನ್ನು ಶಾಲಾ-ಕಾಲೇಜು, ರಸ್ತೆ ಬದಿ, ಮನೆ ಮುಂದೆ ಅಲ್ಲದೇ ಜಮೀನುಗಳಲ್ಲೂ ಕೂಡಾ ಸಸಿ ನೆಡಬೇಕೆಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

 

ವನ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ಕಾರ್ಯಕ್ರಮ ನಡೆದ ಸ್ಥಳದಲ್ಲಿಯೆ ಡಾ.ಮಲ್ಲಿಕಾರ್ಜುನ ಖರ್ಗೆ, ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆದಿಯಾಗಿ ಚುನಾಯಿತ ಜನಪ್ರತಿನಿಧಿಗಳು ಸವಿನೆನಪಿಗೆ ಸಸಿ ನೆಟ್ಟು ನೀರು ಹಾಕಿದರು. ಹೆಚ್.ಕೆ.ಇ. ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿಯೂ ಅಭಿಯಾನದ ಅಂಗವಾಗಿ ಸುಮಾರು 1,000 ಗಿಡಗಳನ್ನು ನೆಡಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಹಸಿರು ಪಥ ಲೋಗ ಬಿಡುಗಡೆ ಮತ್ತು ವನಮಹೋತ್ಸವ, ಹಸಿರು ಹೆಜ್ಜೆಗಳು ಹಾಗೂ ಹಸಿರು ಪಥದ ವಿಡಿಯೋ ಟೀಸರ್ ಸಹ ಬಿಡುಗಡೆಗೊಳಿಸಲಾಯಿತು.

ಶಾಸಕ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ, ಪರಿಸರ ಹಾಗೂ ಜೀವಿಶಾಸ್ತç ಸಚಿವ ಈಶ್ಬರ ಖಂಡ್ರೆ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲಅಫಜಲಪುರ ಶಾಸಕ ಎಂ.ವೈ. ಪಾಟೀಲ, ಕರ್ನಾಟಕ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ಸಂಸದ ರಾಧಾಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಚಂದ್ರಶೇಖರ ಪಾಟೀಲ, ಜಗದೇವ ಗುತ್ತೇದಾರ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕಲಬುರಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಮಹಾನಗರ ಪಾಲಿಕೆ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪನ್ವಾರ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿ.ಸಿ.ಎಫ್ ಸುಮಿತ್ ಪಾಟೀಲ ಸೇರಿದಂತೆ ಇತರೆ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು. ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಸರ್ವರನ್ನು ಸ್ವಾಗತಿಸಿದರು.

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....