ಕಲಬುರಗಿ: ಆಳಂದ ತಾಲೂಕಿನ ಆರು ಗ್ರಾಮ ಪಂಚಾಯಿತಿಗಳಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳ ಹಂಚಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಭೇಟಿಯಾದ ಬಳಿಕ ಅವರು ಈ ವಿಷಯದ ಬಗ್ಗೆ ಸುಮ್ಮನಾಗಿದ್ದಾರೆ ಎಂದು ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ ಗಂಭೀರವಾಗಿ ಪ್ರಶ್ನಿಸಿದ್ದಾರೆ.
ಆಳಂದ ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಲಿ, ಶಾಸಕ ಬಿ.ಆರ್. ಪಾಟೀಲ್ ಗ್ರಾಮ ಪಂಚಾಯಿತಿಗಳಲ್ಲಿ ಹಣ ಪಡೆದು ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಬಹಿರಂಗವಾಗಿದ್ದರೂ, ಕೇವಲ ಎರಡು ಪಂಚಾಯಿತಿಗಳಿಗೆ ಮಾತ್ರ ತನಿಖೆಗೆ ಆದೇಶಿಸಲಾಗಿದೆ. ಉಳಿದ ನಾಲ್ಕು ಪಂಚಾಯಿತಿಗಳಲ್ಲಿ ತನಿಖೆಗೆ ಏಕೆ ತಂಡ ರಚಿಸಿಲ್ಲ ಎಂದು ವಾಲಿ ಕಿಡಿಕಾರಿದ್ದಾರೆ.
ಶಾಸಕ ಪಾಟೀಲ ಮತ್ತು ಮಾಜಿ ಶಾಸಕ ಗುತ್ತೇದಾರ ಅವರ “ಅಡ್ಜಸ್ಟ್ಮೆಂಟ್ ರಾಜಕಾರಣ”ದಿಂದ ತಾಲೂಕಿನ ಅಭಿವೃದ್ಧಿ ಕುಂಠಿತವಾಗಿದೆ. ಪಾಟೀಲ್ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಾರೆ, ಆದರೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಭೇಟಿಯ ಬಳಿಕ ಸುಮ್ಮನಾಗುತ್ತಾರೆ. ಇದು ಜನರಿಗೆ ನಾಟಕವಾಗಿ ಕಾಣುತ್ತಿದೆ,” ತಮ್ಮದೆ ಸರ್ಕಾರಕ್ಕೆ ಹೆದರಿಕೆ ಹಾಕಿ ಉನ್ನತ ಹುದ್ದೆಗಾಗಿ ಈ ತಂತ್ರವನ್ನು ಅನುಸರಿಸತೊಡಗಿದ್ದಾರೆ ಎಂದು ವಾಲಿ ಟೀಕಿಸಿದರು.
ಗುತ್ತೇದಾರ್ ಕೂಡ ಶಾಸಕರ ಪಾಟೀಲ ವಿರುದ್ಧ ಕಾಟಾಚಾರಕ್ಕೆ ಧ್ವನಿ ಎತ್ತಿ, ಹೊಂದಾಣಿಕೆ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ತಾಲೂಕಿ ಆರು ಗ್ರಾಮ ಪಂಚಾಯಿತಿಗಳಲ್ಲಿ ಮನೆ ಹಂಚಿಕೆಗೆ ಹಣ ಪಡೆಯಲಾಗಿದೆ ಎಂಬ ಆರೋಪವನ್ನು ಶಾಸಕ ಬಿ.ಆರ್. ಪಾಟೀಲ್ ಮಾಡಿದ್ದು, ಇದಕ್ಕೆ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಸ್ಪಷ್ಟನೆ ನೀಡಿ ನಿಗಮದಲ್ಲಿ ಇಂಥ ಯಾವ ಚಟುವಟಿಕೆ ನಡೆದಿಲ್ಲ ಗ್ರಾಪಂಗಳಲ್ಲಿನ ನಡೆದ ಬಗ್ಗೆ ಮಾಹಿತಿ ಇಲ್ಲ ಎಂದಿದ್ದು, ಆದರೆ, ಪಾಟೀಲ ಹೇಳಿರುವಂತೆ ಭ್ರಷ್ಟಾಚಾರ ನಡೆದ ಎಲ್ಲ ಕಡೆ ತನಿಖೆ ಮಾಡುವ ಬದಲು ಕೇವಲ ಎರಡು ಪಂಚಾಯಿತಿಗಳಿಗೆ ತನಿಖೆಗೆ ಆದೇಶಿಸಲಾಗಿದ್ದು, ಉಳಿದವುಗಳಿಗೆ ತನಿಖೆ ಏಕಿಲ್ಲ. ಈ ಭ್ರಷ್ಟಾಚಾರ ಮತ್ತು ಅಡ್ಜಸ್ಟ್ಮೆಂಟ್ ರಾಜಕಾರಣದಿಂದ ತಾಲೂಕಿನಲ್ಲಿ ಯಾವುದೇ ಗಮನಾರ್ಹ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ನಡೆದ ತಾಲೂಕಿನಲ್ಲಿ ದುರಾಡಳಿತ ಮತ್ತು ಅಭಿವೃದ್ಧಿಯ ಕೊರತೆಯ ವಿರುದ್ಧ ಜನಪರ ಬೇಡಿಕೆಗಳನ್ನು ಮುಂದಿಟ್ಟುಕೊoಡು ಜೆಡಿಎಸ್ನಿಂದ ನಿರಂತರ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.