ಕಲಬುರಗಿ: ಭೀಮಾ ನದಿಯಲ್ಲಿ ಪುಣ್ಯ ಸ್ನಾನ ಮಾಡುವಾಗ ಕೊಚ್ಚಿ ಹೋದ ಬಾಲಕನೋರ್ವ ಕೊನೆಗೆ ಶವವಾಗಿ ಪತ್ತೆಯಾಗಿರುವ ಘಟನೆ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ನಡೆದಿದೆ.
ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ಲಕ್ಷ್ಮಿಕಾಂತ ರಾಜು ಹತ್ತಿಗಳೆ(17) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಮೃತ ಲಕ್ಷ್ಮೀಕಾಂತ್, ಸೋಮವಾರ ತನ್ನ ಕುಟುಂಬದೊಂದಿಗೆ ಗಾಣಗಾಪುರದ ದತ್ತಾತ್ರೇಯ ಸ್ವಾಮಿಯ ದರ್ಶನಕ್ಕೆ ಬಂದಿದ್ದ. ಈ ವೇಳೆಯಲ್ಲಿ ಭೀಮಾ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಕುಟುಂಬದ ನಾಲ್ವರು ಸದಸ್ಯರು ಇಳಿದಿದ್ದಾರೆ ಎನ್ನಲಾಗಿದೆ. ಈ ವೇಳೆಯಲ್ಲಿ ಸ್ನಾನ ಮಾಡಲು ನದಿಗೆ ಇಳಿದಿದ್ದ ಲಕ್ಷ್ಮೀಕಾಂತ್ ನೀರಿನ ರಭಸಕ್ಕೆ ಸುಳಿಯಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದಾನೆ, ಒಂದೇ ಕುಟುಂಬದ ನಾಲ್ವರ ಪೈಕಿ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ಲಕ್ಷ್ಮೀಕಾಂತ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಆತನ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದರು. ಕೊನೆಗೆ ಲಕ್ಷ್ಮೀಕಾಂತ ಶವವಾಗಿ ಪತ್ತೆಯಾಗಿರುವುದು ತಿಳಿದುಬಂದಿದೆ.
ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.