ಕಲಬುರಗಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಬೆಳೆಗಳಾದ ತೊಗರಿ, ಹೆಸರು, ಉದ್ದು, ಹತ್ತಿ, ಸೋಯಾ ಹಾಗೂ ಇತರೆ ಎಲ್ಲಾ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸಲು ಬರುವ ಜುಲೈ 31 ಕೊನೆ ದಿನವಾಗಿದ್ದು, ಜಿಲ್ಲೆಯ ರೈತ ಬಾಂಧವರು ನಿಗಧಿತ ಅವಧಿಯಲ್ಲಿ ನೊಂದಣಿ ಮಾಡಿಕೊಳ್ಳುವ ಮೂಲಕ ಲಾಭ ಪಡೆಯುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಶೇ.90ರಷ್ಟು ಪ್ರದೇಶ ಮಳೆಯಾಶ್ರಿತವಾಗಿರುವುದರಿಂದ ಅತೀವೃಷ್ಟಿ ಹಾಗೂ ಅನಾವೃಷ್ಟಿಗೆ ಸತತವಾಗಿ ಬೆಳೆಗಳು ತುತ್ತಾಗುವ ಸಾಧ್ಯತೆ ಇರುತ್ತದೆ. ಬಿತ್ತನೆ ಪೂರ್ವದಿಂದ ಕೊಯ್ಲಿನ ನಂತರದ ವರೆಗೆ ಅನಿರೀಕ್ಷಿತ ನೈಸರ್ಗಿಕ ವಿಕೋಪಗಳಿಂದಾಗಿ, ಅತೀವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆಯಂತಹ ಪ್ರಕೃತಿ ವಿಕೋಪಗಳಿಂದ ಯಾವುದೇ ಹಂತದಲ್ಲಿ ಬೆಳೆ ನಾಶವಾಗಬಹುದು. ಇಂತಹ ಬೆಳೆ ನಷ್ಟದಿಂದ ರೈತರನ್ನು ರಕ್ಷಿಸಲು ಸೂಕ್ತ ಪರಿಹಾರ ಪಡೆಯುವ ನಿಟ್ಟಿನಲ್ಲಿ ರೈತ ಭಾಂದವರು ಬಿತ್ತಿದ ಬೆಳೆಯ ಕ್ಷೇತ್ರವನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ವ್ಯಾಪ್ತಿಗೆ ನೊಂದಾಯಿಸುವುದು ಅವಶ್ಯಕವಾಗಿದೆ ಎಂದಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 6.64 ಲಕ್ಷ ರೈತರು ಬೆಳೆ ವಿಮೆ ನೊಂದಣಿ ಮಾಡಿ 70.80 ಕೋಟಿ ರೂ. ತಮ್ಮ ವಂತಿಕೆ ಪಾವತಿಸಿದ್ದರು. ಪರಿಣಾಮ ಬೆಳೆ ನಾಶದಿಂದ ಬೆಳೆ ವಿಮೆ ಯೋಜನೆಯಡಿ 1,035.33 ಕೋಟಿ ರೂ. ಪರಿಹಾರ ಧನ ಪಡೆದಿರುತ್ತಾರೆ. ಇಂತಹ ಸುವರ್ಣಾವಕಾಶವನ್ನು ರೈತರು ಸದುಪಯೋಗ ಪಡೆದುಕೊಳ್ಳುವಂತೆ ಕೋರಿರುವ ಡಿ.ಸಿ. ಅವರು, ರೈತರು ತಮ್ಮ ಹತ್ತಿರದ ಗ್ರಾಮ್-ಒನ್, ಸಿ.ಎಸ್.ಸಿ ಕೇಂದ್ರ, ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
*ಬೆಳೆವಾರು ರೈತರು ಪಾವತಿಸಬೇಕಾದ ವಂತಿಕೆ ಮೊತ್ತ:*
ಹೆಸರು (ಮಳೆಆಶ್ರಿತ) ಪ್ರತಿ ಎಕರೆಗೆ 269.13 ರೂ., ಉದ್ದು (ಮಳೆಆಶ್ರಿತ) ಪ್ರತಿ ಎಕರೆಗೆ 265.08 ರೂ., ತೊಗರಿ (ಮಳೆಆಶ್ರಿತ) ಪ್ರತಿ ಎಕರೆಗೆ 388.51 ರೂ., ತೊಗರಿ (ನೀರಾವರಿ) ಪ್ರತಿ ಎಕರೆಗೆ 406.72 ರೂ., ಹತ್ತಿ (ಮಳೆಆಶ್ರಿತ) ಪ್ರತಿ ಎಕರೆಗೆ 865.75 ರೂ., ಹತ್ತಿ (ನೀರಾವರಿ) ಪ್ರತಿ ಎಕರೆಗೆ 1,492.33 ರೂ., ಸೂಯಾ ಅವರೆ (ಮಳೆಆಶ್ರಿತ) ಪ್ರತಿ ಎಕರೆಗೆ 331.85 ರೂ., ಮುಸುಕಿನ ಜೋಳ (ಮಳೆಆಶ್ರಿತ) ಪ್ರತಿ ಎಕರೆಗೆ 457.31 ರೂ., ಮುಸುಕಿನ ಜೋಳ (ನೀರಾವರಿ) ಪ್ರತಿ ಎಕರೆಗೆ 522.06 ರೂ., ಜೋಳ (ಮಳೆ ಆಶ್ರಿತ) ಪ್ರತಿ ಎಕರೆಗೆ 317.82 ರೂ., ಎಳ್ಳು (ಮಳೆ ಆಶ್ರಿತ) ಪ್ರತಿ ಎಕರೆಗೆ 238.88 ರೂ., ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) ಪ್ರತಿ ಎಕರೆಗೆ 452.84 ರೂ. ಗಳನ್ನು ರೈತರು ತಮ್ಮ ವಂತಿಕೆ ಮೊತ್ತ ಪಾವತಿಸಿ ಜುಲೈ 31 ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಅದೇ ರೀತಿ ಸೂರ್ಯಕಾಂತಿ (ಮಳೆ ಆಶ್ರಿತ) ಪ್ರತಿ ಎಕರೆಗೆ 329.83 ರೂ. ಹಾಗೂ ಭತ್ತ (ನೀರಾವರಿ) ಪ್ರತಿ ಎಕರೆಗೆ 754.77 ರೂ. ವಂತಿಕೆ ಪಾವತಿಸಿ ಆಗಸ್ಟ್ 16 ರೊಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.