ಕಲಬುರಗಿ: ಆಳಂದ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣಕ್ಕೆ ತಕ್ಷಣ ಅಂದಾಜು ಪಟ್ಟಿ ತಯಾರಿಸಿ, ಟೆಂಡರ್ ಕರೆದು ಕಾಮಗಾರಿಯನ್ನು ತ್ವರಿತಗೊಳಿಸಲು ಶಾಸಕ ಹಾಗೂ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಸೂಚಿಸಿದರು.
ಮಂಗಳವಾರ ಆಳಂದ ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನುಮ್ ಸಮ್ಮುಖದಲ್ಲಿ ನಡೆದ ಪುರಸಭೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರಸ್ತೆ ಅಗಲೀಕರಣಕ್ಕೆ ₹4.90 ಕೋಟಿ ಅನುಮೋದನೆ ಹಂತದಲ್ಲಿದ್ದು, ಇದರಿಂದ ಸಂಚಾರ, ವ್ಯಾಪಾರ ಮತ್ತು ವಹಿವಾಟಿಗೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು. ಶ್ರೀರಾಮ ಮಾರುಕಟ್ಟೆಯ ಹಳೆಯ ಕಟ್ಟಡ ತೆರವಿಗೆ ಮತ್ತು ಮೂರಂತಸ್ತಿನ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ಜಿಲ್ಲಾಧಿಕಾರಿ ಫೌಜಿಯಾ ತರನುಮ್, ಇಂದಿರಾ ಕ್ಯಾಂಟಿನ್ ಶೀಘ್ರ ಆರಂಭಕ್ಕೆ ಕ್ರಮ, ಕರ್ತವ್ಯ ಲೋಪದ ಸಿಬ್ಬಂದಿಗಳ ಮೇಲೆ ಕ್ರಮ, ತೆರೆದ ಬಾವಿಗಳ ಸ್ವಚ್ಛತೆ, ಮತ್ತು ಖಾಸಗಿ ಆಸ್ತಿಗಳ ಆನ್ಲೈನ್ ನೋಂದಣಿಗೆ ಸೂಚಿಸಿದರು. ಪುರಸಭೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ಆಸ್ತಿ ತೆರಿಗೆ ವಸೂಲಿಗೆ ಒತ್ತು ನೀಡಲು ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿಗೆ ತಿಳಿಸಿದರು.
ಮೂರು ವರ್ಷಗಳಿಂದ ಬಾಕಿ ಉಳಿದ 15ನೇ ಹಣಕಾಸಿನ ಕಾಮಗಾರಿಗಳ ವಿಳಂಬಕ್ಕೆ ಜಿಲ್ಲಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿದರು. ತಾಂತ್ರಿಕ ಕಾರಣಗಳಿಂದ ಟೆಂಡರ್ಗಳು ತಿರಸ್ಕೃತವಾಗಿದ್ದವು ಎಂದು ಮುಖ್ಯಾಧಿಕಾರಿಗಳು ತಿಳಿಸಿದರು. ಎರಡು ತಿಂಗಳೊಳಗೆ ರಸ್ತೆ, ಚರಂಡಿ, ಸ್ಮಶಾನ ಭೂಮಿ ಆವರಣ, ನೀರು ಸರಬರಾಜು, ಘನ ತ್ಯಾಜ್ಯ ನಿರ್ವಹಣೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಡಿಸಿ ತಾಕೀತು ಮಾಡಿದರು.
ಎಸ್ಎಫ್ಸಿ ಅನುದಾನದ ಎಂಟು ಕಾಮಗಾರಿಗಳಿಗೆ ಮೂರನೇ ಬಾರಿಗೆ ಟೆಂಡರ್ ಕರೆಯಲಾಗಿದ್ದು, ಮೂರು ಕಾಮಗಾರಿಗಳಿಗೆ ಡಿಸಿ ಅನುಮತಿ ನೀಡಿದರು. ಉಳಿದ ಐದು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ.
14 ಕಾಮಗಾರಿಗಳಿಗೆ ₹10 ಕೋಟಿ ಮಂಜೂರಾಗಿದ್ದು, ₹97 ಲಕ್ಷ ಬಿಡುಗಡೆಯಾಗಿದೆ. ₹41 ಲಕ್ಷ ಖರ್ಚಾಗಿದ್ದು, ಎರಡು ಕಾಮಗಾರಿಗಳು ಪೂರ್ಣಗೊಂಡಿವೆ. ಆರು ಕಾಮಗಾರಿಗಳಿಗೆ ₹5.50 ಕೋಟಿ ಪಾವತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅನುದಾನ ಬಿಡುಗಡೆಯಾದರೆ ನೀರಿನ ಸಮಸ್ಯೆ ನಿವಾರಣೆ ಸಾಧ್ಯ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.
ಆಳಂದ ಪಟ್ಟಣದಲ್ಲಿ 10 ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಸಮಸ್ಯೆಗೆ ತಕ್ಷಣ ಪರಿಹಾರಕ್ಕೆ ಡಿಸಿ ಸೂಚನೆ ನೀಡಿದರು.
ಪುರಸಭೆ ಸಿಬ್ಬಂದಿಗಳು ಬಡಾವಣೆ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸದಸ್ಯರು ದೂರಿದರು. ಡಿಸಿ ಮತ್ತು ಶಾಸಕರು, ಅಧಿಕಾರಿಗಳು ಮತ್ತು ಸದಸ್ಯರು ಸಮನ್ವಯದಿಂದ ಕಾರ್ಯನಿರ್ವಹಿಸಿ, ದೂರುಗಳನ್ನು ವಾರದೊಳಗೆ ಇತ್ಯರ್ಥಗೊಳಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ, ಪುರಸಭೆ ಅಧ್ಯಕ್ಷ ಫಿರದೋಸ್ ಅನ್ಸಾರಿ, ಉಪಾಧ್ಯಕ್ಷೆ ಕವಿತಾ ಎಸ್. ನಾಯಕ, ನಗರಾಭಿವೃದ್ಧಿ ಅಧಿಕಾರಿ ದವಲಾ, ಪಿಡಬ್ಲೂಡಿ ಎಇಇ ಆನಂದಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ, ಜೆಸ್ಕಾ ಎಇಇ ಪ್ರಭು ಮಡ್ಡಿತೋಟ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.