ಕಲಬುರಗಿ: ಫರಹತಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯ ಫಿರೋಜಾಬಾದ್ ಕ್ರಾಸ್ ಸಮೀಪ ಕೊಲೆ ಆರೋಪಿ ನಜಿಮುದ್ದೀನ್ ಅಬ್ದುಲ್ ಸತ್ತಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಬುರಗಿ ನಗರದ ನಿವಾಸಿಗಳಾದ ಗಜಾನನ, ಶೇಖ್ ಶಹಬಾಜ್, ನಿತಿನ್, ಸಚಿನ್, ಸಾಗರ್ ಚವ್ಹಾಣ್, ಸೈಯದ್ ಉಮರ್, ಮೊಹಮ್ಮದ್ ಅಖಿಲ್ ಹಾಗೂ ವಿಜಯ ದೊಡ್ಡಮನಿ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರೌಡಿಶೀಟರ್ ಖಲೀಲ್ ಕೊಲೆ ಪ್ರಕರಣದಲ್ಲಿ ನಾಲ್ಕನೆಯ ಆರೋಪಿಯಾಗಿದ್ದ ನಜೀಮುದ್ದೀನ್ ನ ಅದೇ ಹಳೇ ದ್ವೇಷದ ಹಿನ್ನೆಲೆಯಲ್ಲಿ ಖಲೀಲ್ ಸಹಚರರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ನಜಿಮುದ್ದೀನ್ ಮತ್ತು ಇತರರು ಕಾರಿನಲ್ಲಿ ಬಿ.ಗುಡಿ ಸಮೀಪದ ದರ್ಗಾಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಫಿರೋಜಾಬಾದ್ ಸಮೀಪ ಕೂಡಿ ದರ್ಗಾ ಸಮೀಪದಲ್ಲಿ ಕಾರು ಅಡ್ಡಗಟ್ಟಿದ ಆರೋಪಿಗಳು ಮಾರಕಾಸ್ತ್ರಗಳಿಂದ ನಜಿಮುದ್ದೀನ್ ನನ್ನು ಹೊಡೆದು ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿ, ಬೆನ್ನಟ್ಟಿದ ಪೊಲೀಸರು ಮೊದಲು 6 ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಸೋಮವಾರದವರೆಗೆ ಒಟ್ಟಾರೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ಆರೋಪಿಗಳ ಪತ್ತೆ ಹಚ್ಚಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.