ಕಲಬುರಗಿ : ಶಿಕ್ಷಣ ಮತ್ತು ಸರ್ವಜ ನರ ಅಭಿವೃದ್ಧಿಗಾಗಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೇಯರ್ ಅವರು ಅಪಾರವಾಗಿ ಶ್ರಮಿಸಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಲಾದ ಪರಿಷತ್ತಿನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೇಯರ್ ಅವರ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದ ಅವರು, ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟು 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ್ನು ಸ್ಥಾಪಿಸಿ ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆಯನ್ನು ಪ್ರೋತ್ಸಾಹಿಸಿದರು. ಕನ್ನಡಿಗರ ಒಗ್ಗೂಡಿಕೆಗಾಗಿ ಪರಿಷತ್ತು ಹಗಲಿರುಳು ಶ್ರಮಿಸುತ್ತಿದೆ. ಪರಿಷತ್ತಿನ ಮೂಲ ಆಶಯವನ್ನು ಈಡೇರಿಸಲು ಜಿಲ್ಲಾ ಕಸಾಪ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದ ಅವರು, ಪರಿಷತ್ತಿನ ಅಧ್ಯಕ್ಷನಾಗಿ ಕನ್ನಡದ ಸೇವೆ ಮಾಡುವುದು ಅಂದರೆ ಹೆತ್ತ ತಾಯಿಯ ಸೇವೆ ಮಾಡಿದಂತೆ ಎಂಬ ಭಾವನೆ ನಮ್ಮದ್ದಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರಮೇಶ ಡಿ ಬಡಿಗೇರ, ರಾಜೇಂದ್ರ ಮಾಡಬೂಳ, ಪ್ರಭವ ಪಟ್ಟಣಕರ್, ಸಂತೋಷ ಕುಡಳ್ಳಿ, ಶಿವಾನಂದ ಮಠಪತಿ, ರೇವಣಸಿದ್ದಪ್ಪ ಜೀವಣಗಿ, ನರಸಿಂಗರಾವ ಹೇಮನೂರ, ಚಂದ್ರಕಾಂತ ಸೂರನ್, ಎಂ.ಎನ್. ಸುಗಂಧಿ, ಗಣೇಶ ಚಿನ್ನಾಕಾರ, ಧರ್ಮರಾಜ ಜವಳಿ, ಕಲ್ಯಾಣಕುಮಾರ ಶೀಲವಂತ, ಶಕುಂತಲಾ ಪಾಟೀಲ, ಡಾ. ರೆಹಮಾನ ಪಟೇಲ್, ದಿನೇಶ ಮದಕರಿ, ರವಿಕುಮಾರ ಶಹಾಪುರಕರ, ಸೈಯ್ಯದ್ ನಜಿರುದ್ದೀನ್ ಮುತ್ತವಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.