ಕಲಬುರಗಿ: ಭಾರತ ಸರ್ಕಾರದ ಗಣಿ ಮಂತ್ರಾಲಯದ ಸುಸ್ಥಿರ ಮರಳು ಗಣಿಗಾರಿಕೆ ಮಾರ್ಗಸೂಚಿಗಳು-2016 ರನ್ವಯ ಮಳೆಗಾಲದಲ್ಲಿ ಮರಳು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ತಿಳಿಸಿರುವುದರಿಂದ ಜಿಲ್ಲೆಯ ಮರಳು ಬ್ಲಾಕ್ ಗಳಲ್ಲಿ ಮುಂದಿನ ಆದೇಶದವರೆಗೆ ಮರಳು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದ್ದಾದರು ಸಾರ್ವಜನಿಕರಿಗೆ ಮತ್ತು ಸರ್ಕಾರಿ ಕಾಮಗಾರಿಗಳಿಗೆ ಜಪ್ತಿ ಮಾಡಿಕೊಳ್ಳಲಾದ ಸಾಕಷ್ಟು ಮರಳು ಮಾರಾಟಕ್ಕೆ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಜಿಲ್ಲೆಯ ಅಫಜಲಪೂರ, ಜೇವರ್ಗಿ ಹಾಗೂ ಚಿತ್ತಾಪೂರ ತಾಲ್ಲೂಕು ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಗಣಿಗಾರಿಕೆ ಮಾಡಿ ದಾಸ್ತಾನು ಮಾಡಿರುವ ಮರಳನ್ನು ಜಪ್ತಿ ಪಡಿಸಿದ್ದು, ಸಾಕಷ್ಟು ಮರಳು ಸರ್ಕಾರಿ ಕಾಮಗಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಟ್ಟಡ ಕಾಮಗಾರಿಗಳಿಗೆ ಬಳಕೆಗೆ ಲಭ್ಯವಿರುತ್ತದೆ ಎಂದಿದ್ದಾರೆ.
ಸಾರ್ವಜನಿಕರು ಜಪ್ತಿಪಡಿಸಿದ ಮರಳನ್ನು ಪಡೆಯಲು ಸರ್ಕಾರ ನಿಗದಿಪಡಿಸಿರುವ ಪ್ರತಿ ಮೆಟ್ರಿಕ್ ಟನ್ ಗೆ 850 ರೂ. ಗಳಂತೆ ಪಾವತಿಸಿ ನಿಯಮಾನುಸಾರ ಖನಿಜ ರವಾನೆ ಪರವಾನಿಗೆ ಪಡೆದು, ತಮ್ಮ ಸ್ವಂತ ಖರ್ಚಿನಲ್ಲಿ ಮರಳನ್ನು ತೆಗೆದುಕೊಂಡು ಹೋಗಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಮರಳು ಪಡೆಯಲು ಅಫಜಲಪೂರ, ಆಳಂದ ತಾಲ್ಲೂಕಿನ ನಾಗರೀಕರು ಲೋಕೋಪಯೋಗಿ ಇಲಾಖೆಯ ಅಫಜಲಪೂರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಲಕ್ಷ್ಮೀಕಾಂತ ಬಿರಾದಾರ-9148570109, ಚಿತ್ತಾಪೂರ, ಸೇಡಂ, ಚಿಂಚೋಳಿ, ಕಾಳಗಿ, ಶಹಾಬಾದ್ ಹಾಗೂ ಕಲಬುರಗಿ ತಾಲ್ಲೂಕಿನ ನಾಗರೀಕರು ಲೋಕೋಪಯೋಗಿ ಇಲಾಖೆಯ ಚಿತ್ತಾಪೂರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಸಲೀಂ-9448219377, ಜೇವರ್ಗಿ, ಯಡ್ರಾಮಿ, ಕಮಲಾಪೂರ ತಾಲ್ಲೂಕಿನ ನಾಗರೀಕರು ಲೋಕೋಪಯೋಗಿ ಇಲಾಖೆಯ ಜೇವರ್ಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ತ್ರೈಜಾಮುಲ್ ಇಸ್ಲಾಂ-944979574 ಅವರನ್ನು ಸಂಪರ್ಕಿಸಬಹುದಾಗಿದೆ.
ಇದಲ್ಲದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಸೋಮಶೇಖರ್ ಎಂ.-9945229477 ಮತ್ತು ಭೂವಿಜ್ಞಾನಿ ಪ್ರವೀಣ-9008529896 ಇವರನ್ನು ಸಹ ಸಂಪರ್ಕಿಸಬಹುದಾಗಿದೆ.