ಕಲಬುರಗಿ: ಜಿಲ್ಲೆಯಲ್ಲಿ ದಿನನಿತ್ಯ ಗೋಹತ್ಯೆ ಮತ್ತು ಅಕ್ರಮ ಗೋಸಾಗಾಣಿಕೆ ನಡೆಯುತ್ತಿದ್ದು, ಇದರ ಹಿಂದೆ ಜಿಲ್ಲಾ ಉಸ್ತುವಾರಿ ಮತ್ತು ಜಿಲ್ಲಾಡಳಿತ ಬೆಂಬಲವಿದೆ ಎಂದು ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತದ ಅಧ್ಯಕ್ಷ ಲಿಂಗರಾಜ ಅಪ್ಪಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಕ್ರೀದ್ ಹಬ್ಬದಲ್ಲಿ ಅಕ್ರಮ ಗೋವುಗಳನ್ನು ವಧೆ ಮಾಡುವುದನ್ನು ಸಂಪೂರ್ಣ ನಿಷೇಧಿಸಿದರೂ ಜಿಲ್ಲೆಯಲ್ಲಿ ದಿನನಿತ್ಯ ನಡೆಯುತ್ತಿದೆ, ಅದರಂತೆಯೇ ನಗರದ ವಿವಿಧ ಬಡಾವಣೆಗಳಲ್ಲಿ 4 ಸಾವಿರಕ್ಕೂ ಹೆಚ್ಚು ಅಕ್ರಮ ಗೋವುಗಳನ್ನು ಸಾಗಿಸಲಾಗಿದೆ. ಅಕ್ರಮ ಗೋಸಾಗಾಣಿಕೆ ತಡೆಯಬೇಕು ಎಂದು ಒತ್ತಾಯಿಸಿ, ಮನವಿ ಪತ್ರ ನೀಡಿದರೂ ಜಿಲ್ಲಾಡಳಿತ ಕ್ಯಾರೇ ಎನ್ನುತ್ತಿಲ್ಲ, ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಜೂ.2ರಂದು ಜಿಲ್ಲಾಧಿಕಾರಿ ಕಚೇರಿಯನ್ನು ಮುತ್ತಿಗೆ ಹಾಕಲಾಗುವುದು ಎಂದರು.
ಇತ್ತೀಚೆಗೆ ನಗರದ ಸೇಡಂ ರಸ್ತೆಯ ಹೊರವಲಯದಲ್ಲಿ ಅಕ್ರಮ ಗೋವುಗಳನ್ನು ನಗರಕ್ಕೆ ಸಾಗಿಸುತ್ತಿದ್ದಾಗ ಅದನ್ನು ರೆಡ್ ಹ್ಯಾಂಡ್ ನಲ್ಲಿ ಹಿಡಿದರೂ ಪೊಲೀಸರು ಕ್ರಮ ಕೈಗೊಳ್ಳಲು ಹಿಂಜರಿದಿದ್ದಾರೆ. ತದನಂತರ ಪ್ರಕರಣ ದಾಖಲಿಸಿ ಅಕ್ರಮ ಗೋವು ಸಾಗಾಟ ಮಾಡಿದವರನ್ನು ಪೊಲೀಸರು ತಕ್ಷಣವೇ ಹೊರಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಬೋಳಶೆಟ್ಟಿ, ಶಿವರಾಜ ಸಂಗೊಳಗಿ, ಸಾಗರ್ ರಾಠೋಡ್, ಅಶ್ವಿನಕುಮಾರ್ ಸೇರಿದಂತೆ ಮತ್ತಿತರರು ಇದ್ದರು.


