ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ವೈಯಕ್ತಿಕವಾಗಿ ನಿಂದಿಸಿದ ಛಲವಾದಿ ನಾರಾಯಣಸ್ವಾಮಿ ಅವರನ್ನು ಕೂಡಲೇ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಇದೇ ಮೇ31ರಂದು ಬೆಳಗ್ಗೆ 11 ಗಂಟೆಗೆ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ತನಕ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ನಾಗರಿಕ ಹೋರಾಟ ಸಮಿತಿಯ ಮುಖಂಡ ಡಾ.ಡಿ.ಜಿ ಸಾಗರ್ ಹೇಳಿದ್ದಾರೆ.
ನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಸದನವನ್ನು ಚಿಂತಕರ ಚಾವಡಿ ಎಂದು ಹೇಳಲಾಗುತ್ತದೆ, ಅಂತಹ ಸದನದ ವಿರೋಧ ಪಕ್ಷದ ನಾಯಕರಾಗಿರುವ ಛಲವಾದಿ ನಾರಾಯಣಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕಲಬುರಗಿ ನಗರದಲ್ಲಿ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ನಾಯಿ ಎಂದು ಸಂಬೋಧಿಸಿದ್ದಾರೆ. ಇಂತಹ ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಸಚಿವರಿಗೆ ವೈಯಕ್ತಿಕವಾಗಿ ನಿಂದಿಸಿರುವುದು ಅಕ್ಷಮ್ಯ ಅಪರಾಧ. ಅಂತಹ ಸ್ಥಾನದಲ್ಲಿ ಕೂರಿಸಿರುವ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಮತ್ತು ಅವರ ಕುಟುಂಬವು ಸುದೀರ್ಘ ಕಾಲ ರಾಜಕೀಯ ಮಾಡುತ್ತಾ ಬಂದಿದೆ, ಇಲ್ಲಿಯವರೆಗೆ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕೀಯದಲ್ಲಿ ದೊಡ್ಡ ಎತ್ತರಕ್ಕೆ ಬೆಳೆದಿದ್ದಾರೆ. ಅದರಲ್ಲಿ ಇತ್ತೀಚೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದನ್ನು ಕಂಡು ಬಿಜೆಪಿಗರಲ್ಲಿ ನಡುಕ ಹುಟ್ಟಿಸಿದೆ, ಹಾಗಾಗಿ ಪ್ರಿಯಾಂಕ್ ಖರ್ಗೆ ಅವರಿಗೆ ಪ್ರತಿ ಬಾರಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.
ಖರ್ಗೆ ಕುಟುಂಬದ ವಿರುದ್ಧ ರಾಜಕೀಯ ಮತ್ತು ವೈಯಕ್ತಿಕ ತೇಜೋವಧೆಗೆ ಮುಂದಾಗಿರುವ ಛಲವಾದಿ ನಾರಾಯಣಸ್ವಾಮಿ ಹಿಂದೆ ಬಿಜೆಪಿ ಮತ್ತು ಆರೆಸ್ಸೆಸ್ ಕೈವಾಡ ಇರುತ್ತಿರುವುದು ನಾರಾಯಣಸ್ವಾಮಿ ತನ್ನ ತಲೆ ಮೇಲೆ ಚಡ್ಡಿ ಹೊತ್ತಾಗಲೇ ಗೊತ್ತಾಗಿದೆ, ಇಂತಹ ರಾಜಕಾರಣಿಗಳಿಂದ ಕಲಬುರಗಿಯ ಸಾಮರಸ್ಯ ಹಾಳಾಗುತ್ತಿದೆ, ಅಲ್ಲದೆ ಸಾಮಾನ್ಯ ಜನರಲ್ಲಿ ಗಲಭೆಗಳಿಗೆ ಕುಮ್ಮಕ್ಕು ನೀಡುವ ಸಂಭವ ಹೆಚ್ಚಾಗಿವೆ. ವೈಯಕ್ತಿಕವಾಗಿ ನಿಂದಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಛಲವಾದಿ ನಾರಾಯಣಸ್ವಾಮಿ ಯ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಠ್ಠಲ್ ದೊಡ್ಡಮನಿ, ರಾಜಕುಮಾರ್ ಕಪನೂರ್, ಪ್ರಕಾಶ್ ಮೂಲಭಾರತಿ, ಮಲ್ಲಪ್ಪ ಹೊಸಮನಿ, ದೇವೇಂದ್ರ ಸಿನ್ನೂರ್, ದಿನೇಶ್ ದೊಡ್ಡಮನಿ, ಅಶ್ವಿನ್ ಸಂಕಾ, ಪ್ರಕಾಶ್ ನಾಗನಳ್ಳಿ, ಸುರೇಶ್ ಹಾದಿಮನಿ, ಹಣಮಂತ ಬೋಧನಕರ್, ಗುಂಡಪ್ಪ, ಪವನಕುಮಾರ್ ವಳಕೇರಿ, ದಿಗಂಬರ ಬೆಳಮಗಿ ಸೇರಿದಂತೆ ಮತ್ತಿತರರು ಇದ್ದರು.