ಕಲಬುರಗಿ: ಕ್ಷಯರೋಗ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅಪಾಯದಂಚಿನಲ್ಲಿರುವ 18 ವರ್ಷ ಮತ್ತು ಮೇಲ್ಪಟ್ಟ ವಯಸ್ಕರಿಗೆ ವಯಸ್ಕರ ಬಿ.ಸಿ.ಜಿ ಲಸಿಕೆ ನೀಡಲಾಗುತ್ತಿದೆ. ಇದು ಸುರಕ್ಷಿತವಾಗಿದ್ದು, ಯಾವುದೇ ಅಡ್ಡಿ ಪರಿಣಾಮ ಇರುವುದಿಲ್ಲ. ಅನಗತ್ಯ ಭಯಪಡದೆ ಲಸಿಕೆ ಹಾಕಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಜಿಲ್ಲೆಯ ವಯಸ್ಕರ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಲಸಿಕಾಕರಣ ಕಳೆದ ಮೇ 5 ರಿಂದಲೆ ಆರಂಭವಾಗಿದ್ದು, ಜೂನ್ ಅಂತ್ಯದ ವರೆಗೆ ಇರಲಿದೆ. ಜಿಲ್ಲೆಯಾದ್ಯಂತ ಮನೆ ಮನೆ ಸಮೀಕ್ಷೆ ಮಾಡಿ ಅಪಾಯದಂಚಿನಲ್ಲಿರುವ 4,11,460 ಜನರನ್ನು ಈಗಾಗಲೆ ಗುರುತಿಸಿಸಲಾಗಿದೆ. ಇದರಲ್ಲಿ 55,056 ಜನ ಲಸಿಕೆ ಪಡೆಯಲು ಮೌಖಿಕ ಒಪ್ಪಿಗೆ ಸೂಚಿಸಿದ್ದು, ಈ ಪೈಕಿ ಇದುವರೆಗೆ 19,970 ವಯಸ್ಕರಿಗೆ ಬಿ.ಸಿ.ಜಿ ಲಸಿಕೆ ನೀಡಲಾಗಿದೆ. ಇನ್ನು ಒಪ್ಪಿಗೆ ಸೂಚಿಸದವರು ಹಿಂದೇಟು ಹಾಕದೆ ಕೂಡಲೆ ಒಪ್ಪಿಗೆ ಸೂಚಿಸಿ ಲಸಿಕೆ ಹಾಕಿಸಿಕೊಳ್ಳುಬೇಕೆಂದು ಅವರು ತಿಳಿಸಿದ್ದಾರೆ.
ದೇಶದ 23 ರಾಜ್ಯಗಳ 274 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಕೇಂದ್ರ ಸರ್ಕಾರವು ಈ ಒಂದು ಲಸಿಕಾಕರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಲ್ಲಿ ಕಲಬುರಗಿ ಸೇರಿ ರಾಜ್ಯದ 16 ಜಿಲ್ಲೆಗಳಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಕಾರ್ಯಕ್ರಮ ಯಶಸ್ವಿಗೆ ವಯಸ್ಕರು ಸಹಕರಿಸಬೇಕೆಂದು ಅವರು ಕೋರಿದ್ದಾರೆ.
ಕಳೆದ 5 ವರ್ಷಗಳಲ್ಲಿ ಕನಿಷ್ಠ ಒಂದು ಬಾರಿಯಾದರೂ ಕ್ಷಯರೋಗವನ್ನು ಹೊಂದಿ ಗುಣಮುಖರಾದವರು, ಕ್ಷಯರೋಗಿಗಳ ನಿಕಟ ಸಂಪರ್ಕದಲ್ಲಿರುವವರು, ಪ್ರಸ್ತುತ ಕ್ಷಯರೋಗಿಗಳ ಸಂಪರ್ಕದಲ್ಲಿರುವವರು ಮತ್ತು ಜನೆವರಿ 2021 ರಿಂದ ನೀಕ್ಷಯ್ ತಂತ್ರಾಂಶದಲ್ಲಿ ದಾಖಲಾಗಿರುವ ರೋಗಿಗಳ ಸಂಪರ್ಕದಲ್ಲಿರುವವರು, 60 ವರ್ಷ ಅಥವಾ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳು, ಮಧುಮೇಹ (ಸಕ್ಕರೆ ಕಾಯಿಲೆ) ದಿಂದ ಬಳಲುತ್ತಿರುವವರು, ಪ್ರಸ್ತುತ ಹಾಗೂ ಹಿಂದೆ ಧೂಮಪಾನ ಸೇವನೆ ಮಾಡಿರುವವರು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ವಯಸ್ಕರ ಬಿ.ಸಿ.ಜಿ ಲಸಿಕೆ ನೀಡಲಾಗುತ್ತದೆ.
ಇನ್ನು ಕ್ಷಯರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ಮುಗಿದ 4 ವಾರಗಳ ನಂತರ ವಯಸ್ಕರ ಬಿಸಿಜಿ ಲಸಿಕೆಯನ್ನು ಪಡೆಯಬಹುದಾಗಿದೆ. ಅನಾರೋಗ್ಯದಿಂದ ಬಳಲಿ ಗುಣಮುಖರಾದವರಿಗೆ ವೈದ್ಯಕೀಯ ಸಲಹೆ ಮೇರೆಗೆ ಹಾಗೂ ರಕ್ತ ವರ್ಗಾವಣೆ ಮಾಡಿಕೊಂಡ 3 ತಿಂಗಳ ಅವಧಿ ಪೂರೈಸಿದವರಿಗೆ ವಯಸ್ಕರ ಬಿಸಿಜಿ ಲಸಿಕೆ ನೀಡಲು ವಿಶೇಷವಾಗಿ ಪರಿಗಣಿಸಲಾಗುತ್ತಿದೆ.
ಇವರಿಗೆ ಲಸಿಕೆ ಇಲ್ಲ:
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ, ಒಪ್ಪಿಗೆ ನೀಡದವರಿಗೆ, ಹೆಚ್.ಐ.ವಿ ರೋಗದಿಂದ ಬಳಲುತ್ತಿರುವವರಿಗೆ, ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ, ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಹಾಗೂ ಅಂಗಾಂಗಗಳನ್ನು ಕಸಿ ಮಾಡಿಕೊಂಡಿರುವವರಿಗೆ, ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರಿಗೆ, ಕಳೆದ 3 ತಿಂಗಳುಗಳಲ್ಲಿ ರಕ್ತ ವರ್ಗಾವಣೆ ಇತಿಹಾಸ ಹೊಂದಿರುವವರಿಗೆ, ಹೆಚ್.ಐ.ವಿ ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯಕ್ಕೆ ಕಾರಣವಾಗುವ ಇತಿಹಾಸ ಹೊಂದಿರುವವರಿಗೆ ಹಾಗೂ ಯಾವುದೇ ಕಾರಣದಿಂದ ಪ್ರಸುತ್ತ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಬಿ.ಸಿ.ಜಿ ಲಸಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.