ಕಲಬುರಗಿ: ಇದು ರಾಜಕೀಯ ವಿಷಯವಲ್ಲ ಒಂದು ಸಮುದಾಯದ ಭವಿಷ್ಯದ ವಿಚಾರ. ನಾನು ಇದರಲ್ಲಿ ರಾಜಕೀಯ ಮಾತಾಡುವುದಿಲ್ಲ ಕೂಡಲೇ ಪ್ರಿಯಾಂಕ್ ಖರ್ಗೆ ಅವರೇ ಖುದ್ದಾಗಿ ಮುಂದೆ ನಿಂತು ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಮೊದಲಿನಂತೆ ಸರಳವಾಗಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ತಳವಾರ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ತಳವಾರ ಸಮಾಜ ಸಂಘಟನೆವತಿಯಿಂದ ಕೈಗೊಂಡಿರುವ 14ನೇ ದಿನದ ಅನಿರ್ದಿಷ್ಟಾವಧಿಯ ಧರಣಿ ಸತ್ಯಾಗ್ರಕ್ಕೆ ಬೆಂಬಲಿಸಲು ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಇದನ್ನು ಬಹಳ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು. ಇದೊಂದು ಸಮುದಾಯಕ್ಕೆ ಸಂಬಂಧಿಸಿದ ವಿಷಯವಾಗಿದ್ದರಿಂದ ಇದರಲ್ಲಿ ರಾಜಕೀಯ ಮಾಡಬಾರದು. ಅದಕ್ಕೆ ನಾನು ಇದರಲ್ಲಿ ರಾಜಕೀಯ ಮಾಡುವುದಿಲ್ಲ. ಪ್ರಸ್ತುತ ಈಗ ಶಾಲಾ ಕಾಲೇಜುಗಳು, ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ವಿದ್ಯಾರ್ಥಿಗಳಿಗೆ ರೈತರಿಗೆ ಸೇರಿದಂತೆ ತಳವಾರ ಸಮುದಾಯದವರಿಗೆ
ಜಾತಿ ಪ್ರಮಾಣ ಪತ್ರ ಅವಶ್ಯಕತೆ ಇದೆ. ಕೂಡಲೇ ಪ್ರಿಯಾಂಕ ಖರ್ಗೆಯವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ತಳವಾರ ಸಮಾಜದ ಬೇಡಿಕೆ ನ್ಯಾಯ ಸಮ್ಮತವಾಗಿದೆ ಅವರಿಗೆ ಮೊದಲಿನಂತೆ ಸರಳವಾಗಿ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣ ಪತ್ರ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ವಿಶೇಷವಾಗಿ 7% ಮೀಸಲಾತಿ ಹೆಚ್ಚಿಗೆ ಮಾಡಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಇವರನ್ನು ರಾಜ್ಯ ಹಿಂದುಳಿದ ವರ್ಗದ ಪಟ್ಟಿಯಿಂದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲಾಗಿದೆ. ಯಾವುದೇ ರೀತಿಯ ಸಮಸ್ಯೆವಿರದಿದ್ದರೂ ವಿನಾಕಾರಣ ಗೊಂದಲ ಸೃಷ್ಟಿ ಮಾಡಿ ತಳವಾರ ಸಮಾಜಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಇವರೆಲ್ಲಾ ತಮ್ಮ ಕ್ಷೇತ್ರದ ಜನರು, ಇವರ ಬಗ್ಗೆ ವಿಶೇಷವಾದ ಕಾಳಜಿ ನಿಮಗಿರಬೇಕು. ಬದಲಾಗಿ ನಿಮ್ಮಿಂದಲೇ ಇವರಿಗೆ ಅನ್ಯಾಯವಾಗುತ್ತಿದೆ ಎಂದರು.
ತಳವಾರರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಲು ಯಾವುದೇ ರೀತಿಯ ಕಾನೂನು ತೊಡಕಾಗಲಿ, ಸಮಸ್ಯೆಯಾಗಲಿ ಇಲ್ಲ. ನಾವು ತಳವಾರರಿಗೆ ಸರ್ಟಿಫಿಕೇಟ್ ನೀಡಬಹುದು, ಆದರೆ ನಮಗೆ ಮೇಲಿಂದ ಒತ್ತಡವಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಅಧಿಕಾರಿಗಳಿಗೆ ಒತ್ತಡ ಹಾಕುವವರು ಯಾರು?
ಇಲ್ಲಿ ತಾವೇ ಉಸ್ತುವಾರಿ ಮಂತ್ರಿಗಳಾಗಿದ್ದರಿ, ಆದ್ದರಿಂದ ತಳವಾರ ಸಮಾಜಕ್ಕೆ ಆಗುತ್ತಿರುವ ಅನ್ಯಾಯಕ್ಕೆ ನೇರ ಹೊಣೆ ತಾವೇ ಆಗುತ್ತಿದ್ದೀರಿ, ಕೆಲವೊಬ್ಬ ಅಧಿಕಾರಿಗಳು ಪ್ರತ್ಯಕ್ಷ, ಪರೋಕ್ಷವಾಗಿ ನೇರಾ ನೇರ ತಮ್ಮ ಹೆಸರನ್ನು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತಳವಾರ ಸಮಾಜದ ರಾಜ್ಯಾಧ್ಯಕ್ಷರಾದ ಡಾ. ಸರ್ದಾರ ರಾಯಪ್ಪ, ಮಾಜಿ ಸಚಿವ ಬಾಬುರಾವ್ ಚೌವ್ಹಾಣ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಿಗಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಿಂದುಳಿದ ವರ್ಗ ಅವ್ವಣ್ಣ ಮ್ಯಾಕೇರಿ, ಮಾಜಿ ಕಾಡ ಅಧ್ಯಕ್ಷರು ಶರಣಪ್ಪ ತಳವಾರ, ಬಿಜೆಪಿಯ ಹಿರೇಮಠ ಅಂಬರಾಯ ಅಷ್ಟಗಿ, ವಿದ್ಯಾಧರ ಮಂಗಳೂರೆ ,ಎನ್ ರುದ್ರಯ್ಯ, ಬಸವರಾಜ ಬೂದಿಹಾಳ, ವಿದ್ಯಾಧರ ಮಂಗಳೂರು, ಬಾಗೇಶ್ ಹೋತಿನಮಡು, ಸಾಬಣ್ಣ ಜಾಲಗಾರ, ಅಶೋಕ ಕಂಕಿ, ಪ್ರೇಮ ಕೋಲಿ, ಈರಣ್ಣ ಹೊಸಮನಿ, ಬಾಬುಗೌಡ ಮಾಲಿ ಪಾಟೀಲ, ಪ್ರವೀಣ, ಬೋಗೇಶ ಸೇರಿದಂತೆ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಸಮಾಜದ ಮುಖಂಡರು ಭಾಗಿಯಾಗಿದ್ದರು.