ಕಲಬುರಗಿ: ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಉಗ್ರವಾದಿಗಳನ್ನು ಸದೆಬಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಗಾಗಿ ಸೈನಿಕರನ್ನು ಬೆಂಬಲಿಸಲು ಇದೇ ಮೇ.17ರಂದು ನಗರದಲ್ಲಿ ರಾಷ್ಟ್ರ ರಕ್ಷಣೆಗಾಗಿ ನಾಗರೀಕರು ಎಂಬ ಘೋಷವಾಕ್ಯದಡಿ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಶರಣು ಪಪ್ಪಾ ಹೇಳಿದ್ದಾರೆ.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದ ನೆಹರೂ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಶನಿವಾರ ಸಂಜೆ 4 ಗಂಟೆಗೆ ಬೃಹತ್ ತಿರಂಗಾ ಯಾತ್ರೆ ಪ್ರಾರಂಭವಾಗಿ, ಜಗತ್ ವೃತ್ತದಲ್ಲಿ ಸಂಪನ್ನಗೊಳ್ಳಲಿದೆ. ಪಕ್ಷಭೇದ ಮರೆತು ಸರ್ವ ದೇಶ ಭಕ್ತ ನಾಗರೀಕರು ಯಾತ್ರೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ರಾಷ್ಟ್ರ ನಮಗೇನು ಕೊಟ್ಟಿದೆ ಎಂಬುದನ್ನು ಪಕ್ಕಕ್ಕಿಟ್ಟು, ರಾಷ್ಟ್ರಕ್ಕೆ ನಾವೇನೂ ಕೊಡಬಲ್ಲೆವು ಎಂಬ ವಿಚಾರಧಾರೆಯೊಂದಿಗೆ ಈ ದೇಶದ ಸೈನಿಕನ ಬೆನ್ನಿಗೆ, ದೇಶವನ್ನು ಮುನ್ನೆಡೆಸುತ್ತಿರುವ ಪ್ರಧಾನಿ ಮೋದಿಯವರ ಬೆಂಬಲಕ್ಕೆ ನಾವೆಲ್ಲರೂ ನಿಲ್ಲುವ ಮೂಲಕ ರಾಷ್ಟ್ರದ ರಕ್ಷಣೆಗೆ ಮುಂದಾಗಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಾಲ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಕಾಂತ ಕೋಬಾಳ, ನ್ಯಾಯವಾದಿ ಎಸ್.ವಿ ಪಸಾರ್, ನಾಗಣ್ಣಾ ಪಾಟೀಲ್, ಶಿವಾನಂದ ಇಂಗಿನಶೆಟ್ಟಿ,ಆನಂದ ದಂಡೋತಿ,ಸಿದ್ದು ವಾಡಿ, ಬಾಬುರಾವ್ ಹಾಗರಗುಂಡಗಿ, ವಿರೇಂದ್ರ ಪಾಟೀಲ್ ರಾಯಕೋಡ ಇದ್ದರು.