ಕಲಬುರಗಿ: ಜಗತ್ತಿಗೆ ಭಾರತ ಕೊಟ್ಟ ಆರೋಗ್ಯ ಭಾಗ್ಯವೇ ಯೋಗ, ಇದು ಜಗತ್ತು ಕಣ್ಣು ಬಿಡುವ ಮುಂಚೆಯೆ 5,000 ವರ್ಷಗಳ ಹಿಂದೆ ಭಾರತದಲ್ಲಿ ಹುಟ್ಟಿಕೊಂಡ ದೈಹಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ ಎಂದು ಹಿಂಗುಲಾಂಬಿಕಾ ಆಯುರ್ವೇದ ಕಾಲೇಜಿನ ದ್ರವ್ಯಗುಣ ವಿಭಾಗದ ಮುಖ್ಯಸ್ಥ ಯೋಗ ತರಬೇತುದಾರರಾದ ನಿರ್ಮಲಾ ಕೆಳಮನಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ಡಾ ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಹಾಗೂ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದಲ್ಲಿ ನಡೆದ ನಮಸ್ತೆ ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮನುಷ್ಯನ ಬೆಳವಣಿಗೆಗೆ ಆಹಾರ ಪದ್ಧತಿ ಹಾಗೂ ಯೋಗಾಭ್ಯಾಸ ಅತೀ ಮುಖ್ಯವಾದುದು. ಆಹಾರಕ್ಕೂ ಆರೋಗ್ಯಕ್ಕೂ ನಂಟಿದೆ. ಇತ್ತೀಚೆಗಿನ ನಮ್ಮ ಜೀವನ ಕ್ರಮ ನಾವು ಸೇವಿಸುವ ಆಹಾರದ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿದರು.
ಗಡಿಬಿಡಿಯ ಜೀವನದಿಂದ ಥಟ್ಟೆಂದು ತಯಾರಿಸುವ ಆಹಾರದ ಕಡೆಗೆ, ಜಂಕ್ ಪುಡ್ ಕಡೆಗೆ, ಟೆಲಿವಿಷನ್ ನೋಡುತ್ತ ಉಣ್ಣುವುದರ ಕಡೆಗೆ ವಾಲಿದ್ದೇವೆ. ಬಾಯಿ ಇರುವುದೇ ತಿನ್ನುವುದಕ್ಕಾಗಿ ಎನ್ನುವ ಜನರಿದ್ದಾರೆ. ಆದರೆ ನಾಲಿಗೆ ಚಪಲ ಬರೀ ಚಪಲವಾಗದೆ ಅನಾರೋಗ್ಯಕ್ಕೆ ಮೂಲವಾಗಿ ಅವರನ್ನು ರೋಗಿಯನ್ನಾಗಿ ಮಾಡಿ ಬಿಡುತ್ತದೆ. ಅಲ್ಲದೆ ಅಜೀರ್ಣತೆಯಿಂದ ಹಿಡಿದು ಆ್ಯಸಿಡಿಟಿ, ಬೊಜ್ಜು, ಸಕ್ಕರೆಕಾಯಿಲೆ, ಬಿ.ಪಿ., ಕ್ಯಾನ್ಸರ್ನಂತಹ ಮಹಾರೋಗಗಳ ತವರೂರಾಗಿ ಬಿಡುತ್ತದೆ ಈ ದೇಹ ಎಂದರು.
ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಮಾತನಾಡಿ, ಆಧುನಿಕತೆಯತ್ತ ಹೆಜ್ಜೆ ಹಾಕುತ್ತಿರುವ ಮಾನವನಿಗೆ ಒತ್ತಡದ ಜೀವನದ ನಡುವೆ ಆರೋಗ್ಯ ಕಾಪಾಡಿಕೊಳ್ಳಬೇಕಾದ ಸನ್ನಿವೇಶ ಬಂದೊದಗಿದೆ. ಒತ್ತಡದಿಂದ ಮಾನಸಿಕ, ದೈಹಿಕ ತೊಂದರೆಗಳು ಕಾಣಿಸಿಕೊಂಡು ಆಸ್ಪತ್ರೆ ಬಾಗಿಲು ತಟ್ಟುವ ಬದಲು ಯೋಗದ ಮೂಲಕ ಸದಾಕಾಲ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ತರಳಿ ಸಾವಿರಾರು ರೂ.ಖರ್ಚು ಮಾಡಿ ಔಷಧ ಖರೀದಿಸಿ ಅದನ್ನು ಸೇವನೆ ಮಾಡಿದಾಗಲೂ ಆರೋಗ್ಯ ಸುಧಾರಿಸುತ್ತಿಲ್ಲವೆಂದರೆ, ಅದಕ್ಕೆ ಪರಿಹಾರ ಎಂದರೆ ಯೋಗ. ಪ್ರಾಚೀನ ಕಾಲದಿಂದ ಬಂದಿರುವ ಯೋಗದಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂಬುದು ಈಗ ಎಲ್ಲರ ಅರಿವಿಗೂ ಬಂದಿದೆ. ಯೋಗವೆಂಬುದು ಆರೋಗ್ಯವಂತರನ್ನಾಗಿಸಿ ಔಷಧಿಯಿಂದ ದೂರವಿಡುವ ಮಹಾನ್ ಅಸ್ತ್ರ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್, ಕಾಲೇಜಿನ ಸಂಚಾಲಕರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಡಾ ಶರಣಬಸಪ್ಪ ಹರವಾಳ, ಡಾ.ಮಹಾದೇವಪ್ಪ ರಾಂಪೂರೆ, ಡಾ.ಸಾಯಿನಾಥ ಪಾಟೀಲ್, ನಾಗಣ್ಣ ಘಂಟಿ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ ಎಸ್ ಆರ್ ಮೀಸೆ, ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಸಂಜೋತ್ ಶಹಾ, ಪತಂಜಲಿ ಯೋಗ ಸಮಿತಿಯ ಸುನೀತಾ ಠಾಕೂರ್ ಕಾರ್ಯಕ್ರಮದ ಸಂಘಟಕಿ ಪ್ರೊ.ಅಂಬಿಕಾ ಹಾಗರಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪ್ರೊ. ಪ್ರೀಯಾ ರುದ್ರವಾಡಿ ಕಾರ್ಯಕ್ರಮ ನಿರೂಪಿಸಿದರು, ಪ್ರೊ. ಸಂಜೋತ್ ಶಹಾ ಸ್ವಾಗತಿಸಿದರು. ವಾರಿಧೀ ಕುಲಕರ್ಣಿ ಪ್ರಾರ್ಥಿಸಿದರು. ಪ್ರೀಯಾಂಕಾ ಹಿಬಾರೆ ವಂದಿಸಿದರು.


