ಕಲಬುರಗಿ: ವೀರಶೈವ ಲಿಂಗಾಯತ್ ಸಮಾಜದ ಎಲ್ಲ ಒಳಪಂಗಡದವರಿಗಾಗಿ ತೃತೀಯ ರಾಜ್ಯ ಮಟ್ಟದ ಬೃಹತ್ ವಧು-ವರರ ಸಮಾವೇಶ ಕಾರ್ಯಕ್ರಮವನ್ನು ಜೂನ್ 1ರಂದು ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಆಧ್ಯಕ್ಷರಾದ ಶರಣಕುಮಾರ ಮೋದಿ ಹೇಳಿದರು.
ನಗರದ ಪತ್ರಿಕಾಭವದನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶರಣಬಸವೇಶ್ವರ ಸಂಸ್ಥಾನ ಸಹಕಾರದೊಂದಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಶಿವ ಪಾರ್ವತಿ ಮ್ಯಾಟ್ರಿಮೋನಿಯನ್ ಟ್ರಸ್ಟ್ ಇವರ ಸಹಯೋಗದಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಧು-ವರರ ಸಮಾವೇಶ ಕಾರ್ಯಕ್ರಮ ನಡೆಯಲಿದೆ ಎಂದರು.
ಸಮಾಜದ ಮುಖಂಡ ಚoದಶೇಖರ ಕಕ್ಕೇರಿ ಮಾತನಾಡಿ, ವೀರಶೈವ ಲಿಂಗಾಯತ್ ಸಮಾಜದ ಎಲ್ಲ ಒಳ ಪಂಗಡದವರಿಗಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮೇ30 ರ ರೊಳಗಾಗಿ ನೋಂದಣಿ ಮಾಡಿಸಿದವರ ಪೋಟೋಗಳನ್ನು ಮಾತ್ರ ಎಲ್ಇಡಿ ಮೂಲಕ ವಧು-ವರರ ಮಾಹಿತಿ ಪರಿಚಯಿಸಲಾಗುವುದು. 1000 ರೂಪಾಯಿ ಪ್ರವೇಶ ಫ್ರೀ ಇರುತ್ತದೆ ಎಂಬ ಮಾಹಿತಿ ನೀಡಿದ ಅವರು, ಮರು-ಮದುವೆ ಹಾಗೂ ವಿಳಂಬ ಮದುವೆ ಬಯಸುವವರು ಸಮಾವೇಶದಲ್ಲಿ ಭಾಗಿಯಾಗಬಹುದು ಎಂದು ವಿವರಿಸಿದರು.
ಶರಣಬಸವೇಶ್ವರ ಸಂಸ್ಥಾನದ ಎಂಟನೆಯ ಪೀಠಾಧಿಪತಿ ಡಾ.ಶರಣಬಸಪ್ಪ ಅಪ್ಪ, ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ಸಾನಿಧ್ಯ ವಹಿಸಲಿದ್ದು. ಶರಣಬಸವೇಶ್ವರ ಸಂಸ್ಥಾನದ ಒಂಬತ್ತನೆಯ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಧ್ಯಕ್ಷತೆ ವಹಿಸಿಕೊಳ್ಳುವರು. ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಬಸವರಾಜ ದೇಶಮುಖ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಆಧ್ಯಕ್ಷರಾದ ಶರಣಕುಮಾರ ಮೋದಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಬಸವರಾಜ ದೇಶಮುಖ, ಡಾ.ಸುಧಾ ಹಾಲಕಾಯಿ, ಕಲ್ಯಾಣರಾವ ಯಲಮಡಗಿ, ಸಿದ್ದಮ್ಮ ಪಾಟೀಲ್, ಶ್ರೀದೇವಿ, ಸೋಮಶೇಖರ ಹಿರೇಮಠ ಸೇರಿದಂತೆ ಇತರರು ಇದ್ದರು.


