ಬೆಂಗಳೂರು-ಜರ್ಮನಿ ಕೌಶಲ್ಯ ಸೇತುವೆ ಯೋಜನೆಗೆ ಚಾಲನೆ ನೀಡಿದ ಡಾ. ಶರಣಪ್ರಕಾಶ್‌ ಪಾಟೀಲ್‌

Date:

Share post:

ಫ್ರಾಂಕ್‌ಫರ್ಟ್ (ಜರ್ಮನಿ): ಕರ್ನಾಟಕದ ಕೌಶಲ್ಯಪೂರ್ಣ ಯುವಕರು ಜರ್ಮನಿಯಲ್ಲಿ ಉದ್ಯೋಗವನ್ನು ಹಾಗೂ ರಚನಾತ್ಮಕ, ಗೌರವಾನ್ವಿತ ನೆಲೆ ಕಂಡುಕೊಳ್ಳಲು ಯೋಜನೆ ರೂಪಿಸಲಾಗಿದೆ. ಇದೊಂದು ಮಹತ್ವದ ಕೌಶಲ್ಯ ಸೇತುವೆ ಯೋಜನೆಯಾಗಿದೆ (ಸ್ಕಿಲ್ಸ್ ಬ್ರಿಡ್ಜ್ ನೆಟ್‌ವರ್ಕ್)

ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್‌. ಪಾಟೀಲ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಜರ್ಮನಿ ಪ್ರವಾಸ ಕೈಗೊಂಡಿರುವ ಸಚಿವರಗಳ ನಿಯೋಗ, ಫ್ರಾಂಕ್‌ಫರ್ಟ್‌ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಬೆಂಗಳೂರು-ಜರ್ಮನಿ ಕೌಶಲ್ಯ ಸೇತುವೆ ಯೋಜನೆಗೆ ಚಾಲನೆ ನೀಡಿದ ನಂತರ ಭಾಷಣ ಮಾಡಿದರು.

ರಾಜ್ಯ ಸರ್ಕಾರವು ಸ್ಕಿಲ್ಸ್ ಬ್ರಿಡ್ಜ್ ನೆಟ್‌ವರ್ಕ್ ಅನ್ನು ಪ್ರಾರಂಭಿಸಿದೆ – ಇದು ಕರ್ನಾಟಕದ ಪ್ರಮುಖ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರ (GTTC) ಮತ್ತು ಜರ್ಮನ್ ವೃತ್ತಿಪರ ಸಂಸ್ಥೆಗಳು ಮತ್ತು ಉದ್ಯೋಗದಾತರ ನಡುವಿನ ದೀರ್ಘಕಾಲೀನ ದ್ವಿಪಕ್ಷೀಯ ಪಾಲುದಾರಿಕೆಯಾಗಿದೆ ಎಂದು ತಿಳಿಸಿದ್ದಾರೆ.

“ಇದು ಒಂದು ಬಾರಿಯ ತಾತ್ಕಾಲಿಕ ಅಥವಾ ಪ್ರಾಯೋಗಿಕ ಯೋಜನೆಯಲ್ಲ. ಇದೊಂದು ದೀರ್ಘಾವಧಿಯ ಪಾಲುದಾರಿಕೆಯ ಕ್ರಮವಾಗಿದೆ. ನಾವು ಇದನ್ನು ಬೆಂಗಳೂರು-ಜರ್ಮನಿ ಕೌಶಲ್ಯ ಸೇತುವೆ ಎಂದು ಕರೆಯುತ್ತೇವೆ” ಎಂದು ಡಾ. ಪಾಟೀಲ್ ಹೇಳಿದರು.

ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತರಬೇತಿ ಮತ್ತು ಸಂಪೂರ್ಣ ಪಾರದರ್ಶಕತೆ, ಸುರಕ್ಷತೆ ಮತ್ತು ಘನತೆಯೊಂದಿಗೆ ಜರ್ಮನಿಗೆ ವಲಸೆ ಹೋಗಲು ಅನುವು ಮಾಡಿಕೊಡುತ್ತದೆ. ನಮ್ಮ ಯುವಕರು ಜರ್ಮನಿಯಲ್ಲಿರುವ ಕಂಪನಿ ಅಥವಾ ಇತರೆ ಸಂಸ್ಥೆ ಅಥವಾ ಆಸ್ಪತ್ರೆಗಳಿಗೆ ಆತ್ಮವಿಶ್ವಾಸದಿಂದ ಹೆಜ್ಜೆ ಇರಿಸಬೇಕು ಎಂಬುದು ನಮ್ಮ ಆಶಯವಾಗಿದೆ. ಇದಕ್ಕಾಗಿ ನಮ್ಮ ಸರ್ಕಾರ ಮಹತ್ವದ ಯೋಜನೆ ಜಾರಿಗೆ ತಂದಿದೆ ಎಂದು ಫ್ರಾಂಕ್‌ಫರ್ಟ್‌ನಲ್ಲಿ ನೆಲೆಸಿರುವ ಕನ್ನಡಿಗರಿಗೆ ತಿಳಿಸಿದರು.

ಜರ್ಮನಿಯಲ್ಲಿರುವ ಕನ್ನಡಿಗರಿಗೆ ಸಚಿವರ ಮನವಿ:

ಕರ್ನಾಟಕದಿಂದ ಬರುವ ಯುವ ಸಮುದಾಯಕ್ಕೆ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬೆಂಬಲವನ್ನು ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಆರೋಗ್ಯ ರಕ್ಷಣೆ, ಸಾರಿಗೆ, ಮೆಕಾಟ್ರಾನಿಕ್ಸ್ ಮತ್ತು ಉತ್ಪಾದನೆ ಸೇರಿದಂತೆ ಕೈಗಾರಿಕೆ ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ಕೆಲಸಗಾರರಿಗೆ ಜರ್ಮನಿಯಲ್ಲಿ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ನಾವು ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಕರ್ನಾಟಕದಲ್ಲಿ ಪ್ರತಿ ವರ್ಷ ಲಕ್ಷಾಂತರ ತರಬೇತಿ ಪಡೆದ ಯುವಕರು ಕ್ಯಾಂಪಸ್‌ಗಳಿಂದ ಬರುತ್ತಿದ್ದಾರೆ. ವಿಶ್ವದರ್ಜೆಯ ಕೌಶಲ್ಯಗಳನ್ನು ಪಡೆದು, ಅವಕಾಶಗಳನ್ನು ಬಳಸಿಕೊಳ್ಳಬೇಕಾದ ಸಮಯ ಇದಾಗಿದೆ ಎಂದು ಸಚಿವ ಪಾಟೀಲ್‌ ವಿವರಿಸಿದರು.

2030ರ ವೇಳೆಗೆ ವರ್ಷಕ್ಕೆ 1,000 ಉದ್ಯೋಗಗಳು:

2026 ರ ವೇಳೆಗೆ ವಾರ್ಷಿಕವಾಗಿ 500 ಯುವಕರನ್ನು ಜರ್ಮನ್ ಸಂಸ್ಥೆಗಳಿಗೆ ಕಳುಹಿಸಲಾಗುವುದು. 2030 ರ ವೇಳೆಗೆ ಇದನ್ನು 1,000 ಕ್ಕೆ ಹೆಚ್ಚಿಸಲು ನಮ್ಮ ಸರ್ಕಾರ ಗುರಿ ಹೊಂದಿದೆ. ಇದಕ್ಕಾಗಿ ಬೆಂಬಲಿಸಲು, ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಇತರ ಜಿಲ್ಲೆಗಳಲ್ಲಿ ಕೌಶಲ್ಯ ಕೇಂದ್ರಗಳನ್ನು ಆರಂಭಿಸಲಾಗಿದೆ. ಇವು ಜರ್ಮನ್ ಭಾಷಾ ಪ್ರಯೋಗಾಲಯಗಳು, ಅಂತಾರಾಷ್ಟ್ರೀಯ ಪಠ್ಯಕ್ರಮ ಮತ್ತು ಪೂರ್ವ-ನಿರ್ಗಮನ ತರಬೇತಿ ಮಾಡ್ಯೂಲ್‌ಗಳನ್ನು ಹೊಂದಿವೆ ಎಂದು ಸಚಿವರು ತಿಳಿಸಿದರು.

ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲ್ವಿಚಾರಣೆ ಮಾಡಲು ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆ ಸಹ ಪರಿಚಯಿಸಲಾಗುವುದು. ಕೌಶಲ್ಯ, ಸುರಕ್ಷತೆ ಮತ್ತು ಸಾಮಾಜಿಕ ಘನತೆಗೆ ಆದ್ಯತೆ ನೀಡುವ ಸರ್ಕಾರಿ ನಿಯಂತ್ರಿತ ಜಾಗತಿಕ ಚಲನಶೀಲತೆ ಟ್ರ್ಯಾಕ್ ಅನ್ನು ಆರಂಭಿಸಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ನಮ್ಮ ಕರ್ನಾಟಕದ್ದಾಗಲಿದೆ. ಇದು ಪರಸ್ಪರ ಗೌರವ ಮತ್ತು ಹಂಚಿಕೆಯ ಸಮೃದ್ಧಿಯ ಭವಿಷ್ಯವನ್ನು ನಿರ್ಮಿಸುವ ವಿಶೇಷ ಉಪ ಕ್ರಮವಾಗಿದೆ ಎಂದು ಸಚಿವ ಡಾ.‌ ಪಾಟೀಲ್‌ ತಿಳಿಸಿದರು.

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....