ಕಲಬುರಗಿ: “ಅಪರೇಷನ್ ಅಭ್ಯಾಸ” ನಾಗರಿಕ ರಕ್ಷಣಾ ಕಾರ್ಯಚರಣೆ ಅಂಗವಾಗಿ ಕಲಬುರಗಿ ಹೈಕೋರ್ಟ್ ಅವರಣದಲ್ಲಿ ಶುಕ್ರವಾರ ಸಂಜೆ ಬಾಂಬ್ ಬ್ಲಾಸ್ಟ್ ಸೃಷ್ಠಿಸಿ ತದನಂತರ ರಕ್ಷಣಾ ಕಾರ್ಯಚರಣೆಯ ಸನ್ನಿವೇಶದ ಕುರಿತ ಅಣುಕು ಪ್ರದರ್ಶನವು ಕೋರ್ಟ್ ಅವರಣದಲ್ಲಿ ನಡೆಯಿತು.
ಹೈಕೋರ್ಟ್ ನಲ್ಲಿ ಡ್ರೋನ್ ಮೂಲಕ ಬಾಂಬ್ ಹಾಕಿರುವುದನ್ನು ಸೈರನ್ ಅಪಾಯದ ಸಂದೇಶ ಖಚಿತಪಡಿಸುತ್ತಿದ್ದಂತೆ ಗಾಬರಿಗೊಂಡ ನ್ಯಾಯಾಧೀಶರು, ವಕೀಲರು, ಸಿಬ್ಬಂದಿಗಳು, ಕಕ್ಷಿದಾರರು ಕಚೇರಿಯಿಂದ ಓಡಿ ಬರುವ ದೃಶ್ಯ, ಸುದ್ದಿ ಅರಿತು ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕೋರ್ಟ್ ಅವರಣ ತಪಾಸಣೆಗೊಳಪಡಿಸಿ ಪತ್ತೆಯಾದ ಒಂದು ಜೀವಂತ ಬಾಂಬ್ ನಿಷ್ಕ್ರಿಯಗೊಳಿಸುವ, ಇನ್ನು ಸಿ.ಐ.ಎಸ್.ಎಫ್ ಸೇನಾ ಪಡೆ ಹೈಕೋರ್ಟ್ ಆವರಣ ಮತ್ತು ಕಟ್ಟಡ ಸುತ್ತುವರಿದಿದ್ದಲ್ಲದೆ ಕಟ್ಟಡದಲ್ಲಿ ಉಗ್ರರು, ಯಾರಾದರು ಅಡಗಿದಾರೆಯೆ? ಒತ್ತೆಯಾಳು ಇರಿಸಲಾಗಿದಿಯೇ? ಗಾಯಾಳುಗಳು ಸಿಲುಕಿರುವರೆ? ಎಂದು ತಪಾಸಣೆ ಮಾಡುವ ಸನ್ನಿವೇಶ ಕಂಡುಬಂತು.
ಇನ್ನೊಂದೆಡೆ ಅಗ್ನಿಶಾಮಕ ದಳದ ಎರಡು ತಂಡಗಳು ಬೆಂಕಿ ನಂದಿಸಲು ಯಶಸ್ವಿಯಾದವು. ಎಸ್.ಡಿ.ಆರ್.ಎಫ್ ತಂಡವು ನ್ಯಾಯಾಲಯದಲ್ಲಿನ ಸುಮಾರು 100 ಜನ ನ್ಯಾಯಾಧೀಶರು, ವಕೀಲರು, ಅಧಿಕಾರಿ-ಸಿಬ್ಬಂದಿಗಳು, ಸಾರ್ವಜನಿಕರನ್ನು ರಕ್ಷಿಸಿ ಅಲ್ಲಿಂದ ಕೆ.ಕೆ.ಆರ್.ಟಿ.ಸಿ. ಬಸ್ ಸಹಾಯದೊಂದಿಗೆ ಸ್ಥಳಾಂತರಿಸಿದರು. ಬಾಂಬ್ ಬ್ಲಾಸ್ಟ್ ನಲ್ಲಿ ಗಾಯಾಳುಗಳಾಗಿದ್ದ ಸುಮಾರು 50 ಜನರಿಗೆ ಪ್ರಥಮ ಚಿಕಿತ್ಸೆ ನೀಡಿ ಜಿಮ್ಸ್, ಇ.ಎಸ್.ಐ.ಸಿ ಆಸ್ಪತ್ರೆಗೆ ರವಾನಿಸುವ, ಎನ್.ಸಿ.ಸಿ. ಪಡೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರು ನೆರವಿಗೆ ಬಂದ ದೃಶ್ಯ ಇಲ್ಲಿ ಸೃಷ್ಟಿ ಮಾಡಲಾಯಿತು.
ಅಣುಕು ಪ್ರದರ್ಶನದ ರಕ್ಷಣಾ ಕಾರ್ಯಚರಣೆಯ ನಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ತುರ್ತು ಮತ್ತು ವಿಪತ್ತಿನ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಭಯಭೀತರಾಗದೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು. ವಿಶೇಷವಾಗಿ ಎಲ್ಲರು ಒಟ್ಟಾಗಿ ಇದ್ದು ಕ್ಲಿಷ್ಠಕರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಂತೆ ಕರೆ ನೀಡಿದರು.
ತುರ್ತು ಪರಿಸ್ಥಿತಿಯಲ್ಲಿ ಯಾವ ರೀತಿಯಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತದೆ. ಆಯಾ ಇಲಾಖೆಯ ಪಾತ್ರ ಏನಿರಲಿದೆ? ಎಂಬುದರ ಕುರಿತು ಸಾಜನಿಕರಿಗೆ ಅರಿವು ಮೂಡಿಸಲು ಇಂದಿಲ್ಲಿ ಅಣುಕು ಪ್ರದರ್ಶನ ನಡೆಸಲಾಗಿದೆ. ಮುಂದಿನ ದಿನದಲ್ಲಿ ಇದೇ ರಿಈತಿಯ ಅಣುಕು ಪ್ರದರ್ಶನ ಕಾಲೇಜು, ಗ್ರಾಮೀಣ ಭಾಗದಲ್ಲಿ, ಬಸ್ನಿಲ್ದಟಣ, ರಯಲು ನಿಲ್ದಾಣ, ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ನಡೆಸಲಾಗುವುದು ಎಂದ ಅವರು, ಕಳೆದ ಮೇ 6 ರಂದು ಗಡಿಯಲ್ಲಿ ಯುದ್ದದ ವಾತಾವರಣ ನಿರ್ಮಾಣವಾದಾಗ ಮುನ್ನೆಚ್ಚರಿಕೆವಾಗಿ ಮರು ದಿನವೇ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಣುಕು ಪ್ರದರ್ಶನ ಮಾಡುವ ಮೂಲಕ ಪ್ರಯಾಣಿಕರಿಗೆ ಆತಂಕದ ಪರಿಸ್ಥಿಯಲ್ಲಿ ಸ್ಚಯಂ ರಕ್ಷಣೆ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು ಎಂದರು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಮಾತನಾಡಿ, ಪ್ರವಾಹ, ದುರ್ಘಟನೆ, ಭೂಕಂಪದದಂತಹ ವಿಪತ್ತು ತುರ್ತು ಪರಿಸ್ಥಿತಿಯನ್ನು ನಿರ್ಭಯವಾಗಿ ಎದುರಿಸಿದಲ್ಲಿ ಸಂಭವನೀಯ ಹಾನಿ ತಕ್ಕಮಟ್ಟಿಗೆ ತಪ್ಪಿಸಬಹುದಾಗಿದೆ ಎಂದ ಅವರು, ಇಂದಿನ ಅಣುಕು ಪ್ರದರ್ಶನದಲ್ಲಿ ಎಲ್ಲಾ 13 ಇಲಾಖೆಗಳು ನಾಗರಿಕರ ರಕ್ಷಣೆಗೆ ಸಕ್ರಿಯವಾಗಿ ಭಾಗವಹಿಸಿದವು ಎಂದರು.
ಸೈನಿಕರು-ರೈತರ ಸೇವೆ ಮರೆಯುವಂತಿಲ್ಲ:
ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಾಧೀಶರಾದ ನ್ಯಾಯಮೂರ್ತಿ ಇಂದ್ರೇಶ್ ಅವರು ಮಾತನಾಡಿ, ಇವತ್ತಿನ ಅಣುಕು ಪ್ರದರ್ಶನವು ಪ್ರತಿಯೊಬ್ಬ ನಾಗರಿಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಮತ್ತು ತುರ್ತು ಪರಿಸ್ಥಿಯಲ್ಲಿ ಯಾವ ರೀತಿಯಲ್ಲಿ ಆತ್ಮ ರಕ್ಷಣೆ ಮಾಡಿಕೊಳ್ಳಬೇಕೆಂದು ಕಲಿಸಿದೆ. ಗಡಿಯಲ್ಲಿ ಕಣ್ಣಿಗೆ ಎಣ್ಣೆ ಹಾಕಿಕೊಂಡು ದೇಶ ಕಾಯುವ ಸೈನಿಕ, ಅಂತರಿಕ ಭದ್ರತೆ ಒದಗಿಸುವ ಜವಾಬ್ದಾರಿ ಹೊತ್ತ ಪೊಲೀಸರು, ಅನ್ನ ನೀಡಿ ಹಸಿವನ್ನು ನೀಗಿಸುವ ರೈತ ಈ ದೇಶದ 3 ಸ್ತಂಭಗಳ ಇದ್ದಂತೆ, ಯಾರು ಇವರ ಸೇವೆ ಮರೆಯುವಂತಿಲ್ಲ ಎಂದರು.
ಈ ಸಂದರ್ಭದಲ್ಲಿ ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿ.ಸಿ.ಎಫ್ ಸುಮಿತ್ ಪಾಟೀಲ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಡಿ.ಎಚ್.ಓ ಡಾ. ಶರಣಬಸಪ್ಪ ಕ್ಯಾತನಾಳ, ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ, ಸಹಾಯಕ ಆಯುಕ್ತರಾದ ಸಾಹಿತ್ಯ, ಪ್ರಭುರೆಡ್ಡಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನ, ಹೈಕೋರ್ಟ್ ಬಾರ್ ಅಸೋಸಿಯನ್ ಅಧ್ಯಕ್ಷ ಎಸ್.ಬಿ. ಪಸಾರ, ಉಪಾಧ್ಯಕ್ಷ ಅನಂತ ಜಾಹಗೀರಧಾರ, ಹೆಚ್ಚುವರಿ ಕಾರ್ಯಾದರ್ಶಿ ಗೌರೀಶ ಕಾಶಂಪೂರ, ಪೋಲಿಸ್ ಇಲಾಖೆ ವಿಪತ್ತು ನಿರ್ವಹಣಾ ತಂಡದ ಅಧ್ಯಕ್ಷ ಡಾ.ಶಂಕರಪ್ಪ ದತ್ತಿ ಸೇರಿದಂತೆ, ಜೆಸ್ಕಾಂ, ಕೆ.ಕೆ.ಅರ್.ಟಿ.ಸಿ. ಅಧಿಕಾರಿಗಳು, ಇನ್ನಿತರ ರಕ್ಷಣಾ ತಂಡಗಳು ಭಾಗವಹಿಸಿದ್ದವು.