ಕಲಬುರಗಿ: ವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯ ಲಾಡ್ಲಾಪುರ ಗ್ರಾಮದ ಸಮೀಪ ಸುಟ್ಟು ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯೋರ್ವಳ ಶವ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹಿಳೆಯ ಗುರುತು ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗಣಿಯಾರ್ ತಾಂಡಾದ ನಿವಾಸಿ ದೇವಿಬಾಯಿ ಲಾಲಸಿಂಗ್ ರಾಠೋಡ್(42) ಎಂದು ಗುರುತು ಪತ್ತೆ ಹಚ್ಚಲಾಗಿದೆ. ಅದೇ ಗ್ರಾಮದ ದೇವಿವಾಯಿ ಜೊತೆಗೆ ಸಹಜೀವನ ನಡೆಸುತ್ತಿದ್ದ ಸೋಮಲು ಠಾಕ್ರೂ ಪವಾರ್(53) ಮತ್ತು ಹಾಮು ಅಲಿಯಾಸ್ ಪಪ್ಪು ಲಾಲು ರಾಠೋಡ್ ಎಂಬಾತರೆ ಮಹಿಳೆಯನ್ನು ಕೊಲೆ ಮಾಡಿದ ಬಳಿಕ ಪೆಟ್ರೋಲ್ ನಿಂದ ಸುಟ್ಟು ಹಾಕಿದ್ದಾರೆ ಎಂದು ತಿಳಿಸಿದರು.
ಆರೋಪಿತರು ದೇವಿಬಾಯಿಯನ್ನು ಕೊಲೆ ಮಾಡಿದ ಬಳಿಕ ಯಾವುದಾದರೂ ನದಿಗೆ ಎಸೆಯಬೇಕೆಂದು 11 ಗಂಟೆಗಳ ಕಾಲ ಹ್ಯುಂಡೈ ಕಾರಿನಲ್ಲಿ ಶವ ಇಟ್ಟುಕೊಂಡಿದ್ದರು. ನಂತರ ಮಹಿಳೆಯ ಯಾವುದೇ ಗುರುತು ಸಾಕ್ಷಿ, ಪತ್ತೆ ಸಿಗಬಾರದು ಎಂಬ ಉದ್ದೇಶದಿಂದ ಆಕೆಯ ಶವವನ್ನು ಪೆಟ್ರೋಲ್ ನಿಂದ ಸುಟ್ಟು ಹಾಕಿದ್ದಾರೆ. ಆರೋಪಿತರಿಂದ ಒಂದು ಕಾರು ಮತ್ತು ತಾಳಿಯ ಗುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.
ಮೃತದೇಹದ ಗುರುತು ಪತ್ತೆ ಮಾಡುವುದು ಮತ್ತು ಆರೋಪಿತರ ಪತ್ತೆ ಸವಾಲಿನ ಕೆಲಸವಾಗಿತ್ತು. ಈ ವಿಶೇಷ ಪ್ರಕರಣವನ್ನು ಭೇದಿಸಲು ತನಿಖಾ ತಂಡವನ್ನು ರಚಿಸಲಾಗಿತ್ತು. ಮೃತದೇಹ ಪತ್ತೆ ಮತ್ತು ಆರೋಪಿಗಳನ್ನು ಬಂಧಿಸುವಲ್ಲಿ ತನಿಖಾ ತಂಡವು ಕೇವಲ ಮೂರು ದಿನಗಳಲ್ಲಿ ಬೇಧಿಸಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ್ ತಿಗಡಿ, ಪಿಎಸ್ಐ ತಿರುಮಲೇಶ್ ಮತ್ತಿತರರು ಇದ್ದರು.