ಕಲಬುರಗಿ: ವೇತನ ಪರಿಷ್ಕರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ಮಂಗಳವಾರ ಕರೆ ನೀಡಿದ್ದ ಮುಷ್ಕರದ ಹಿನ್ನೆಲೆ ಸಾರಿಗೆ ಬಸ್ಗಳ ಸಂಚಾರದಲ್ಲಿ ವ್ಯತ್ಯವಾಗಿದೆ. ಹಾಗಾಗಿ ಕಲಬುರಗಿ ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡಿರುವ ದೃಶ್ಯಗಳು ಕಾಣಿಸಿವೆ.
ನಗರದ ಕೇಂದ್ರ ಬಸ್ ನಿಲ್ದಾಣ, ಶಹಾಬಝಾರ್ ನಾಕಾ, ಸೂಪರ್ ಮಾರ್ಕೆಟ್, ಗಂಜ್ ಪ್ರದೇಶ ಸೇರಿದಂತೆ ಇತರೆ ಕಡೆಗಳಲ್ಲಿ ಬಸ್ ಗಳು ರಸ್ತೆಗೆ ಇಳಿಯದೆ ಇರುವುದರಿಂದ ಪ್ರಯಾಣಿಕರು ಖಾಸಗಿ ಬಸ್, ಹಾಗೂ ನಗರ ಸಂಚಾರಕ್ಕೆ ಆಟೋಗಳನ್ನು ಅವಲಂಬಿಸಿರುವುದು ಎಲ್ಲೆಡೆ ಗಮನ ಸೆಳೆಯಿತು.
ಬಸ್ಗಳ ಕೊರತೆಯಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ಪರದಾಡಿದ ಕೆಲ ಪ್ರಯಾಣಿಕರು ಖಾಸಗಿ ವಾಹನಗಳತ್ತ ಮೊರೆ ಹೋಗಿ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು.
ಬೆಂಗಳೂರು, ಹೈದ್ರಾಬಾದ್, ಬಳ್ಳಾರಿ, ಹುಬ್ಬಳ್ಳಿ, ಸೇರಿದಂತೆ ವಿವಿಧ ಕಡೆಗಳಿಂದ ಬಸ್ ಹಾಗೂ ರೈಲುಗಳ ಮೂಲಕ ಬೆಳ್ಳಂಬೆಳಗ್ಗೆ ನಗರಕ್ಕೆ ಬಂದಿಳಿದ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಹರಸಾಹಸಪಟ್ಟರು.
ಇಲ್ಲಿನ ಕೇಂದ್ರ ಬಸ್ ನಿಲ್ದಾಣಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರು ಭೇಟಿ ನೀಡಿ ಮುಷ್ಕರ ಹಾಗೂ ಪ್ರಯಾಣಿಕರ ಸಂಚಾರದ ಕುರಿತು ಮಾಹಿತಿ ಪಡೆದರು.
ಈ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-2ರ ಅಧಿಕಾರಿಯಾದ ಎಸ್.ಜಿ.ಗಂಗಾಧರ, ‘ಮುಷ್ಕರ ನಿರತ ಸಿಬ್ಬಂದಿಗೆ ಕೆಲಸಕ್ಕೆ ಬರುವಂತೆ ಮನವಿ ಮಾಡಿದ್ದೆವು. ನಮ್ಮ ಕಲಬುರಗಿ ವಿಭಾಗದಲ್ಲಿ ಒಟ್ಟು ಐದು ಡಿಪೊಗಳಿದ್ದು, ನಿತ್ಯ ಬೆಳಿಗ್ಗೆ ಎಂಟು ಗಂಟೆವರೆಗೆ 250ಕ್ಕೂ ಹೆಚ್ಚು ಬಸ್ಗಳು ರಸ್ತೆಗೆ ಇಳಿಯುತ್ತಿದ್ದವು. ಆದರೆ ಮುಷ್ಕರದ ಬಿಸಿಯಲ್ಲಿ ಮಂಗಳವಾರ ಕೇವಲ 20ರಿಂದ 25 ಬಸ್ಗಳು ಮಾತ್ರವೇ ರಸ್ತೆಗಿಳಿದಿವೆ’ ಎಂದು ಹೇಳಿದರು.