ಕಲಬುರಗಿ: ಬುದ್ಧನು ಶಾಂತಿಯ ಸಂದೇಶದ ಮೂಲಕ ಸಾಮಾಜಿಕ ಧಾರ್ಮಿಕ ವಿಚಾರಗಳ ಮುಖಾಂತರ ಸಮಾಜದಲ್ಲಿ ಸರ್ವರು ಸಮಾನರು ಎಂಬ ಸಂದೇಶವನ್ನು ನೀಡಿದ ಮಹಾನ ವ್ಯಕ್ತಿ ಗೌತಮ ಬುದ್ದ ಅವರಾಗಿದ್ದಾರೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ ಹೇಳಿದರು.
ಸೋಮವಾರದಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿಯ ಜಗತ್ ವೃತ್ತದ ಡಾ. ಬಿ.ಆರ್. ಅಂಬೇಡ್ಕರ ಪ್ರತಿಮೆ ಎದುರಗಡೆ ಬಿ. ಶ್ಯಾಮಸುಂದರ ರಸ್ತೆಯ ಲುಂಬಿನ ಉದ್ಯಾನವನದಲ್ಲಿ 2569 ನೇ ವೈಶಾಖ ಬುದ್ಧ ಪೂರ್ಣಿಮೆ ದಿನದಂದು ಬುದ್ಧ ಪ್ರತಿಮೆಗೆ ಪುಷ್ಪ ಸುಗಂಧ ಅರ್ಪಿಸುವ ಮೂಲಕ ಉದ್ಫಾಟಿಸಿ, ಮಾತನಾಡಿದರು.
ಆಸೆಯೇ ದು:ಖಕ್ಕೆ ಮೂಲ ಎಂಬುದರ ಆಶಯದಂತೆ ರಾಜಮನೆತನದ ಎಲ್ಲ ವೈಭೋಗಗಳನ್ನು ತ್ಯಾಗ ಮಾಡಿ ಸಮಾಜದಲ್ಲಿ ಸರ್ವೋನ್ನತ್ತರ ಒಳ್ಳಿತಿಗಾಗಿ ಶ್ರಮಿಸಿ ಮಹಾನ ವ್ಯಕ್ತಿ ಗೌತಮ್ ಬುದ್ಧ ವಿಶ್ವಕ್ಕೆ ಶಾಂತಿಯ ಮೂಲಕ ಸಮಾನತೆಯ ಸಂದೇಶವನ್ನು ನೀಡಿದ್ದಾರೆ. ಬುದ್ದ ಜಯಂತಿ ಸರ್ಕಾರವು ಪ್ರಥಮ ಬಾರಿಗೆ ವಿಜೃಂಭಣೆಯಿಂದ ಆಚರಣೆಯನ್ನು ಮಾಡುತ್ತಿರುವುದು ಸಂತೋಷದ ವಿಷಯ ಎಂದರು. Kalaburag
ನಮ್ಮ ಸಂವಿಧಾನ ನೀಡಿದ ಡಾ.ಬಾಬಾ ಸಾಹೇಬ ಅಂಬೇಡ್ಕರರವರು ಶಾಂತಿಯುತವಾದ ಬೌದ್ಧಧರ್ಮವನ್ನು ತಮ್ಮ ಲಕ್ಷ್ಮಾಂತರ ಅನುಯಾಯಿಗಳೊಂದಿಗೆ ಸ್ವೀಕಾರ ಮಾಡಿದರು. ಈ ಕಾರಣದಿಂದಾಗಿ ಭೌದ್ದ ಧರ್ಮ ಇಡೀ ವಿಶ್ವದಲ್ಲಿಯೇ ಪ್ರಸಿದ್ದಿ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.
ಈ ಭಾಗದ ರಾಜಕೀಯ ಮುತ್ಸದ್ದಿ ಎ.ಐ.ಸಿ.ಸಿ.ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ 371 ಜೆ ಕಲಂ ಜಾರಿಗೆ ತಂದು ಕಲ್ಯಾಣ ಕರ್ನಾಟಕ ಭಾಗವನ್ನು ಅವಿರತವಾಗಿ ಶ್ರಮಿಸಿದ್ದಾರೆ. ಅದೇ ರೀತಿ ಕಲಬುರಗಿಯಲ್ಲಿ ಬುದ್ದ ವಿಹಾರ ಸ್ಥಾಪನೆ ಮಾಡುವ ಮೂಲಕ ಪ್ರತಿದಿನ ಸಾವಿರಾರು ಜನ ವೀಕ್ಷಣೆ ಮಾಡುತ್ತಿದ್ದು, ಬೌದ್ಧ ಧರ್ಮದ ಪ್ರಸಾರಕ್ಕೆ ಪ್ರಮುಖ ಕಾರಣವಾಗಿದೆ ಎಂದರು.
ಪ್ರತಿಯೊಬ್ಬರು ಗೌತಮ್ ಬುದ್ಧನ ವಿಚಾರಗಳು ಮತ್ತು ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಇಂತಹ ಮಹಾನ ವ್ಯಕ್ತಿಗಳ ಜೀವನ ಎಲ್ಲರಿಗೂ ಆದರ್ಶವಾಗಬೇಕೆಂದು ಹೇಳಿದರು.
ಬುದ್ದಿಷ್ಟ್ ವಲ್ಸ್ ಅಲೆಯನ್ಸ್ ಉಪಾಧ್ಯಕ್ಷರಾದ ಡಾ. ಪೂಜ್ಯ ಭಂತೆ ಧಮ್ಮನಾಗ ಮಾಹಥೇರೋ ಬುದ್ದ ಜಯಂತಿ ಉದ್ದೇಶಿಸಿ ಪ್ರವಚನ ನೀಡಿದರು.
ಮುಂದುವರೆದು ಮಾತನಾಡಿ, ಶಾಂತಿ ಮೂಲಕ ಇಡೀ ವಿಶ್ವಕ್ಕೆ ಆದರ್ಶ ಪ್ರಾಯವಾದ ವ್ಯಕ್ತಿ ಗೌತಮ್ ಬುದ್ಧ. ಇಂದು ಇಡೀ ವಿಶ್ವವೇ ಗೌತಮ ಬುದ್ಧರ ಜಯಂತಿ ಆಚರಣೆ ಮಾಡುತ್ತಿದೆ. ಬುದ್ಧ, ಅಶೋಕ ಚಕ್ರವರ್ತಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ರವರು ಇಡೀ ವಿಶ್ವಕ್ಕೆ ಬೌದ್ಧ ಧರ್ಮವನ್ನು ಪ್ರಸಾರ ಆಗುವಂತೆ ಮಾಡಿದವರು ಎಂದರು.
ಬೌದ್ಧ ಉಪಾಸಕರಾದ ಲಕ್ಷ್ಮಿಕಾಂತ ಹುಬಳಿ ಕ್ಷಮೆ ಮತ್ತು ಶೀಲಯಾಚನೆ ಮಾಡಿದರು.
ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಪಂಚಶೀಲ ಧ್ವಜಾರೋಹಣ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ನೀಲಿ ಧ್ವಜಾರೋಹಣ ನೆರವೇರಿಸಿದರು.
ವೇದಿಕೆ ಮೇಲೆ ಗ್ಯಾರೆಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಭಂವಾರ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸೇರಿದಂತೆ ಬೌದ್ಧ ಉಪಾಸಕರುಗಳಾದ ಮಹೇಶ ಹುಬಳಿ, ದೇವಿಂದ್ರಪ್ಪ ಕಪನೂರ, ವಿಠ್ಠಲ ಗೋಳಾ ಪವನ ವಳಕೇರಿ, ಪ್ರಕಾಶ ಮೂಲ ಭಾರತಿ, ಚಂದ್ರಕಾಂತ್ ಸೂರನ್ ಇದ್ದರು.
ಬೌದ್ಧ ಉಪಾಸಕ ಪ್ರಕಾಶ ಹದನೂರ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಮೇಲ್ಮನಿ ವಂದಿಸಿದರು.