ಕಲಬುರಗಿ: ಕರ್ನಾಟಕ ರಾಜ್ಯ ಶಿಲ್ಪಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗ ಶಿಲ್ಪಿ (88) ಅವರು ರವಿವಾರ ನಿಧನರಾದರು.
ಅವರಿಗೆ ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ದಿಗ್ಗಾಂವ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 2.30ಕ್ಕೆ ನೆರವೇರಲಿದೆ ಎಂದು ಮೃತರ ಕುಟುಂಬದವರು ತಿಳಿಸಿದ್ದಾರೆ.
2014ರಿಂದ 2017ರ ಅವಧಿಯಲ್ಲಿ ಅವರು ಅಕಾಡೆಮಿಗೆ ಅಧ್ಯಕ್ಷರಾಗಿದ್ದರು. ದೆಹಲಿ ಸೇರಿದಂತೆ ಹಲವೆಡೆ ಶಿಲ್ಪಕಲಾ ಶಿಬಿರಗಳನ್ನು ಆಯೋಜಿಸಿದ್ದರು.
ಮಹಾದೇವಪ್ಪ ಶಿಲ್ಪಿ ಅವರು ಅಕಾಡೆಮಿಯ ಅಧ್ಯಕ್ಷ ಹುದ್ದೆಗೇರಿದ ಕಲ್ಯಾಣ ಕರ್ನಾಟಕದ ಮೊದಲ ಶಿಲ್ಪ ಕಲಾವಿದರು ಎನಿಸಿದ್ದಾರೆ.