ಕಲಬುರಗಿ: ವ್ಯಕ್ತಿಯೊಬ್ಬ ಕಾಣೆಯಾದ ಪ್ರಕರಣ ದಾಖಲಿಸಿಕೊಂಡ ಸ್ಟೇಶನ್ ಬಜಾರ್ ಪೊಲೀಸರು, ಕ್ಷೀಪ್ರ ತನಿಖೆಯಿಂದ ಕೊಲೆ ಪ್ರಕರಣವೆಂದು ಬಯಲಿಗೆಳೆದು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು, ಗಣೇಶ್ ನಗರದ ನಿವಾಸಿ ರಾಘವೇಂದ್ರ ನಾಯಕ(39) ಕೊಲೆಯಾದ ವ್ಯಕ್ತಿಯಾಗಿದ್ದು, ಈತನ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ವಡ್ಡರಗಲ್ಲಿಯ ಕೃಷ್ಣ ನಗರದ ನಿವಾಸಿ ಗುರುರಾಜ್ ಶೇಷಪ್ಪ ನೆಲೋಗಿ(36), ಹೀರಾಪುರ ಸಮೀಪ ನಿಸರ್ಗ ಕಾಲೋನಿಯ ಅಶ್ವಿನಿ ಅಲಿಯಾಸ್ ತನು ರಾಜಶೇಖರ್ ಮಲ್ಲಬಾದ್(26) ಮತ್ತು ಹೊರವಲಯದ ಕಪನೂರ್ ಗ್ರಾಮದ ಲಕ್ಷ್ಮೀಕಾಂತ್ ಮಾಲಿಪಾಟೀಲ್(28) ಎಂಬಾತರನ್ನು ಬಂಧಿಸಲಾಗಿದೆ, ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದರು.
ನಗರದ ಹೋಟೆಲ್ ಮತ್ತಿತರ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದ ರಾಘವೇಂದ್ರ ಅವರು ಆಗಾಗ 8-10 ದಿನಗಳು ಮನೆ ಬಿಟ್ಟು ಹೋಗಿ, ಬಳಿಕ ವಾಪಸ್ ಬರುತ್ತಿದ್ದರು. ಅಂತೆಯೇ, 2025ರ ಮಾರ್ಚ್ 12ರ ಬೆಳಿಗ್ಗೆ ಕೆಲಸಕ್ಕೆ ಹೊಗುವುದಾಗಿ ಮನೆಯಿಂದ ಹೊರ ಹೋದವರು ಮತ್ತೆ ಮರಳಲಿಲ್ಲ. ಪತ್ನಿ ಸಹ ಕೆಲವು ದಿನಗಳ ಬಳಿಕ ಬರಬಹುದು ಎಂದುಕೊಂಡು ಸುಮ್ಮನೆ ಇದ್ದರು. ಎರಡು ತಿಂಗಳು ಕಳೆದರೂ ಎಲ್ಲಾ ಕಡೆ ಹುಡುಕಿದರೂ ಮನೆಗೆ ವಾಪಸ್ ಬಾರದೆ ಇದ್ದಾಗ ಮೇ 25ರಂದು ಗಂಡ ಕಾಣೆಯಾದ ಬಗ್ಗೆ ಇಲ್ಲಿನ ಸ್ಟೇಷನ್ ಬಝಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಸ್ಟೇಷನ್ ಬಝಾರ್ ಪೊಲೀಸರು, ಕಾಣೆಯಾದ ರಾಘವೇಂದ್ರನು ಕೊಲೆಯಾಗಿ, ಆತನನ್ನು ದುಷ್ಕರ್ಮಿಗಳು ಕೃಷ್ಣಾ ನದಿಗೆ ಎಸೆದಿದ್ದು ತಿಳಿದುಬಂದಿದೆ. ಬಳಿಕ ಇದರ ಬಗ್ಗೆ ಪತ್ನಿ ಸುರೇಖಾ ಅವರನ್ನು ಠಾಣೆಗೆ ಕರೆಯಿಸಿಕೊಂಡ ಕೊಲೆಯಾದ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಮಶಾನದಲ್ಲಿ ಕೊಲೆಗೈದು ನದಿಗೆ ಎಸೆದ ಆರೋಪಿಗಳು:
ಕೊಲೆಯಾದ ರಾಘವೇಂದ್ರ ಮತ್ತು ಅಶ್ವಿನಿ ಇಬ್ಬರೂ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿದ್ದರು. ಅಶ್ವಿನಿ ಅಲಿಯಾಸ್ ತನು, ರಾಘವೇಂದ್ರನನ್ನು ಬಿಟ್ಟು ಸ್ವಲ್ಪ ದಿನ ಕೃಷ್ಣ ನಗರದ ಗುರುರಾಜ್ ಜೊತೆಗೆ ಸಂಬಂಧ ಬೆಳೆಸಿದ್ದಾಳೆ.
ಈ ವೇಳೆ ರಾಘವೇಂದ್ರನಿಗೆ ಇಬ್ಬರ ಸಂಬಂಧ ಗೊತ್ತಾಗಿದ್ದು, ಗುರುರಾಜ್ ಗೆ ಬಿಟ್ಟು ಅಶ್ವಿನಿಗೆ ನನ್ನ ಜೊತೆ ಬಾ ಎಂದು ಪೀಡಿಸುತ್ತಿದ್ದನು.
ನಿರಂತರ ತೊಂದರೆ ಬಗ್ಗೆ ಅಶ್ವಿನಿ, ಗುರುರಾಜಗೆ ತಿಳಿಸಿದ್ದರು. ಗುರುರಾಜ ಮತ್ತು ಆತನ ಸಂಗಡಿಗರು ಮಾರ್ಚ್ 12ರಂದು ನಗರದ ಸೂಪರ್ ಮಾರ್ಕೆಟ್ ಲಾಡ್ಜ್ ಒಂದರಿಂದ ರಾಘವೇಂದ್ರ ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು, ಕೀರ್ತಿ ನಗರದ ಸ್ಮಶಾನಕ್ಕೆ ಕರೆದೊಯ್ದರು ಎನ್ನಲಾಗಿದೆ.
ಬಳಿಕ ಸ್ಮಶಾನದಲ್ಲಿ ರಾಘವೇಂದ್ರ ಅವರ ಕಪಾಳಕ್ಕೆ ಅಶ್ವಿನಿ ಅವರು ಹೊಡೆದರು. ಆ ಬಳಿಕ ಗುರುರಾಜ ಹಾಗೂ ಆತನ ಸಂಗಡಿಗರು ಬಡಿಗೆ, ಮತ್ತಿತರಗಳಿಂದ ರಾಘವೇಂದ್ರ ಮೇಲೆ ಹಲ್ಲೆ ನಡೆಸಿದ್ದರಿಂದ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.
ನಂತರ ಕೊಲೆಯಾದ ರಾಘವೇಂದ್ರ ನ ಶವವನ್ನು ರಾಯಚೂರು ಜಿಲ್ಲೆಯ ಶಕ್ತಿ ನಗರದ ಕೃಷ್ಣ ನದಿಯ ಬ್ರಿಡ್ಜ್ ಮೇಲಿಂದ ಎಸೆದಿದ್ದಾರೆ. ಅಲ್ಲಿ ಶವ ಪತ್ತೆಯಾಗಿರುವ ಕಾರಣ ಸಮೀಪದ ಶಕ್ತಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಎಂದು ದಾಖಲಾಗಿರುತ್ತದೆ. ಈ ಬಗ್ಗೆ ಸ್ಟೇಷನ್ ಬಝಾರ್ ಠಾಣೆಯ ಪೊಲೀಸರು ತನಿಖೆ ನಡೆಸಿದಾಗ ರಾಘವೇಂದ್ರನ ಶವ ಎಂದು ಗೊತ್ತಾಗಿದೆ ಎಂದು ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ ಅವರು ತಿಳಿಸಿದ್ದಾರೆ.