ಕಲಬುರಗಿ: ಭಾರತ ದೇಶವೇ ಬಸವ ಸಂಸ್ಕೃತಿ ಹಂಬಲಿಸುತ್ತಿರುವಾಗ ಕರ್ನಾಟಕ ಸರ್ಕಾರ ಬಸವಣ್ಣ ನವರನ್ನು ನಮ್ಮ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು, ಸರ್ವರಿಗೂ ಸಂತಸ ತಂದಿದೆ. ಸರ್ವಜನಾಂಗದ ಹಕ್ಕು ಮತ್ತು ಹಿತವನ್ನು ಬಯಸಿದ ಬಸವಾದಿ ಶರಣರು ವಿಶ್ವದ ಪರಿವರ್ತನಾ ಕಾರ್ಯ ಕಾರ್ಯ ಮಾಡಿದವರು. ಅಂದಿನ ಮತ್ತು ಇಂದಿನ ಸರ್ವರಿಗೂ ಏಕ ಸೂತ್ರದ ಅಡಿಯಲ್ಲಿ ಬದುಕು ರೂಪಿಸುವ ಚಿಂತನೆ ಮಾಡಿದ ಬಸವಣ್ಣ ಇಂದು ವಿಶ್ವಗುರುವಾಗಿ ದರ್ಶನವಾಗುತ್ತಿರುವುದು ಈ ನಾಡಿನ ಹೆಗ್ಗಳಿಕೆಯಾಗಿದೆ ಎಂದು ಸಾಹಿತಿ ಡಾ. ಜಗನ್ನಾಥ ತರನಳ್ಳಿ ಹೇಳಿದರು.
ವಚನೋತ್ಸವ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ನಗರದ ರವೀಂದ್ರಕುಮಾರ ಭಂಟನಳ್ಳಿ ಅವರ ಮಹಾಮನೆಯಲ್ಲಿ ಶುಕ್ರವಾರ ಜರುಗಿದ ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ನಡೆ ಚೆನ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಸಮಾಜದಲ್ಲಿ ಬೇರೂರಿದ್ದ ಜಾತೀಯತೆ, ಮೌಢ್ಯತೆ ವಿರುದ್ಧ ತೊಡೆತಟ್ಟಿ ನಿಂತು ದೀನ ದಲಿತರ, ಕಾಯಕ ವರ್ಗಗಳ ಆಶಾಕಿರಣವಾಗಿದ್ದ ವಿಶ್ವಗುರು ಬಸವಣ್ಣನವರು ದೇಹವೇ ದೇಗುಲವೆಂದು ಸಾರಿದರು. ಶ್ರೇಷ್ಠತೆ ಹುಟ್ಟಿನಿಂದ ಬರುವುದಿಲ್ಲ. ಅದು ಕಾಯಕದಿಂದ ಎಂಬ ಸಂದೇಶ ಸಾರಿದ ಬಸವ ತತ್ವದ ಪ್ರಚಾರ ವ್ಯಾಪಕವಾಗಿ ನಡೆಯಬೇಕಿದೆ ಎಂದರು.
ಮಹಾಮನೆಯ ರವೀಂದ್ರಕುಮಾರ ಭಂಟನಳ್ಳಿ ಮಾತನಾಡಿ, ವಚನ ಸಾಹಿತ್ಯ ವಿಶ್ವಗುರು ಬಸವಣ್ಣನವರು ಸಮಾಜಕ್ಕೆ ಕೊಟ್ಟ ಬಹು ದೊಡ್ಡ ಕೊಡುಗೆಯಾಗಿದೆ. ಸಮಾಜದ ಓರೆ ಕೋರೆಗಳನ್ನು ಜನರಿಗೆ ತಿಳಿಸುವಲ್ಲಿ ಶರಣರ ವಚನಗಳು ಅರಿವಿನ ಸೇತುವೆಯಾಗಿದೆ. ವಚನಗಳನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಅಂದಾಗ ಮಾತ್ರ ಸಮಾಜದಲ್ಲಿನ ಅಜ್ಞಾನದ ಕತ್ತಲೆ ಕಳೆದು ಜ್ಷಾನದ ಜ್ಯೋತಿ ಬೆಳಗಲು ಸಾಧ್ಯ ಎಂದರು.
ವಿಜ್ಞಾನಿ ಡಾ. ಬಿ.ಎ. ಪಾಟೀಲ, ಸಾಹಿತ್ಯ ಪ್ರೇರಕ ಸಿದ್ದಪ್ಪ ತಳ್ಳಳ್ಳಿ, ಶಿವರಾಜ ಅಂಡಗಿ, ಭುವನೇಶ್ವರಿ ಹಳ್ಳಿಖೇಡ ವೇದಿಕೆ ಮೇಲಿದ್ದರು. ವಚನೋತ್ಸವ ಪ್ರತಿಷ್ಠಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಸವರಾಜ ಧೂಳಾಗುಂಡಿ, ಕಲ್ಯಾಣಪ್ಪ ಬಿರಾದಾರ, ಸುನಂದಾ ಕರ್ಚಗೇಡ, ಸಿದ್ಧರಾಮ ಹಂಚನಾಳ, ಮಾತನಾಡಿದರು.
ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜ್ಯೋತಿ ಮಾರ್ಲ, ವಿದ್ಯಾಸಾಗರ ದೇಶಮುಖ, ಬಸವರಾಜ ಧೂಳಾಗುಂಡಿ, ಜಗದೀಶ ಮರಪಳ್ಳಿ, ಕೇದಾರನಾಥ ಕುಲಕರ್ಣಿ ಅವರನ್ನು ನಡೆ ಚೆನ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.