ಕಲಬುರಗಿ: ಕಲಬುರಗಿ ನಗರದ ಅಶೋಕ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ರೌಡಿ ಶೀಟರ ಜ್ವಾಲೇಂದ್ರನಾಥ ಅಲಿಯಾಸ್ ಜ್ವಾಲ್ಯ ತಂದೆ ರವಿಚಂದ್ರ ಕಾವಲೆ(37) ನನ್ನು ಬೆಂಗಳೂರು ನಗರ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಕಲಬುರಗಿ ನಗರದ ಅಫಜಲಪುರ ರಸ್ತೆ ಬಿದ್ದಾಪೂರ ಕಾಲೋನಿಯ ನಿವಾಸಿ ಜ್ವಾಲೇಂದ್ರ ವಿರುದ್ದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ 09 ಪ್ರಕರಣಗಳು, ಸಬ್-ಅರ್ಬನ್ ಪೊಲೀಸ್ ಠಾಣೆ ಮತ್ತು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ತಲಾ 01 ಪ್ರಕರಣ, ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು ಮತ್ತು ಮಹಾಗಾಂವ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಶಹಾಬಾದ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ ಸೇರಿದಂತೆ ಒಟ್ಟು 15 ಪ್ರಕರಣಗಳು ದಾಖಲಾಗಿರುತ್ತವೆ. 2008 ರಿಂದ 2024 ಸಾಲಿನ ವರೆಗೆ ಭಾರತೀಯ ದಂಡ ಸಂಹಿತೆ, ಭಾರತೀಯ ಆಯುಧ ಕಾಯ್ದೆ ಸೇರಿದಂತೆ 12 ಪ್ರಕರಣಗಳು, ಮಾದಕ ವಸ್ತು ಅಧಿನಿಯಮ ಕಾಯ್ದೆ ಮತ್ತು ಕಾರಾಗೃಹಗಳ ಅಧಿನಿಯಮ ಹಾಗೂ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ 01 ಪ್ರಕರಣ ಮತ್ತು ಭಾರತೀಯ ದಂಡ ಪ್ರಕ್ರಿಯೆ ಅಡಿಯಲ್ಲಿ 02 ಪ್ರಕರಣ ಹೀಗೆ ಒಟ್ಟು 15 ಪ್ರಕರಣಗಳಲ್ಲಿ ಪ್ರಮುಖ ಆರೋಪಿತನಾಗಿರುತ್ತಾನೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
ಆರೋಪಿತನು ರೂಢಿಗತ ಅಪರಾಧಿಯಾಗಿದ್ದು, ಇತನ ವಿರುದ್ಧ ‘ಎ’ ರೌಡಿ ತೆರೆದಿದ್ದು, ಪ್ರಸ್ತುತ ರೌಡಿ ಶೀಟ್ ಚಾಲ್ತಿಯಲ್ಲಿ ಇರುತ್ತದೆ. ಸದರಿ ಆರೋಪಿತನು ಕಲಬುರಗಿ ನಗರ ಹಾಗೂ ಕಲಬುರಗಿ ಜಿಲ್ಲೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ಸುಲಿಗೆ, ದರೋಡೆಯಂತಹ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಅಲ್ಲದೇ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ತಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳಲ್ಲಿ ಪ್ರಮುಖ ಆರೋಪಿತನಾಗಿರುತ್ತಾನೆ. ಆರೋಪಿತನ ಕಾನೂನು ಬಾಹಿರ ಚಟುವಟಿಕೆಗಳನ್ನು ಕಡಿವಾಣ ಹಾಕಲು ಕಾನೂನಿನ ಬಗ್ಗೆ ಸೂಕ್ತ ಗೌರವ ಹೊಂದುವಂತೆ ಮನವರಿಕೆ ಮಾಡಿಕೊಡಲು ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳಲು, ಸಮಾಜ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಸುವ್ಯವಸ್ಥೆಗೆ ಭಂಗ ಬರದಂತೆ ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ. ರವರ ಮಾರ್ಗದರ್ಶನದಲ್ಲಿ ಸದರಿ ಆರೋಪಿತನನ್ನು ಗಡಿಪಾರು ಮಾಡುವುದು ಸೂಕ್ತ ಮತ್ತು ಅನಿವಾರ್ಯವಾಗಿದ್ದು ಎಂದು ವರದಿ ಅನ್ವಯ ಕರ್ನಾಟಕ ಪೊಲೀಸ್ 5-19630 ಕಲಂ 558 ಅಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸದರಿ ಆರೋಪಿತನನ್ನು ಬೆಂಗಳೂರು ನಗರ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ವಿಶೇಷ ಕಾರ್ಯಾನಿರ್ವಾಹಕ ದಂಡಾಧಿಕಾರಿ ಆಗಿರುವ ಡಿಸಿಪಿ ಕನಿಕಾ ಸಿಕ್ರಿವಾಲ್ ಅವರು ಗಡಿಪಾರು ಆದೇಶ ಹೊರಡಿಸಿದ್ದಾರೆ.