ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರ ಶೇ. 60ರಷ್ಟು ಭ್ರಷ್ಟ ಸರ್ಕಾರ ಎಂದು ಕೆಲ ಗುತ್ತಿಗೆದಾರರು ಆರೋಪಿಸಿದ್ದಾರೆ. ಅಭಿವೃದ್ಧಿಯ ಗುರಿ, ಸಂಕಲ್ಪ ರಾಜ್ಯ ಸರ್ಕಾರದಲ್ಲಿ ಇಲ್ಲವೇ ಇಲ್ಲ. ಗ್ಯಾರಂಟಿ ಜಾರಿ ಮಾಡಿದ ಮೊದಲ ರಾಜ್ಯ ಎಂದು ಬೀಗುತ್ತಿರುವ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ದೇಶದಲ್ಲಿ ಕೇಂದ್ರ ಸರ್ಕಾರ ‘ಒನ್ ನೇಶನ್ ಒನ್ ಎಲೆಕ್ಷನ್’ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೇಂದ್ರ ಸರ್ಕಾರ ಏನೇ ಜಾರಿಗೆ ತಂದರೂ ವಿರೋಧಿಸುವುದು ಕಾಂಗ್ರೆಸ್ ಸರ್ಕಾರದ ದುರ್ಬಲ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ದೇಶ ಆರ್ಥಿಕವಾಗಿ ಮುಂದೆ ಸಾಗುತ್ತಿದ್ದರೆ, ಇತ್ತ ರಾಜ್ಯ ಕಾಂಗ್ರೆಸ್ ಸರಕಾರ ಅಸಮರ್ಥ ನಾಯಕತ್ವದಿಂದ ಬಳಲುತ್ತಿರುವುದಲ್ಲದೆ ಒಳಜಗಳದ ಪರಿಣಾಮವಾಗಿ ಸರ್ಕಾರ ಸಂಪೂರ್ಣ ಗೊಂದಲದ ಗೂಡಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಮತ್ತು ಡಿಸಿಎಂ ಅವರ ನಡುವಿನ ಒಳಜಗಳದಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ, ಅರ್ಸಿಬಿ ವಿಜಯೋತ್ಸವದ ಕಾಲ್ತುಳಿತ ಘಟನೆಗೆ ತಾವು ಕಾರಣರಲ್ಲ ಎಂದು ತಮ್ಮ ತಮ್ಮಲ್ಲೇ ದೂರುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಕುರಿತು ರಾಜ್ಯಪಾಲರಿಗೆ ನಾನು ಕೇಳಿದ್ದೆ, ಅದಕ್ಕೆ ಅವರು ಸಿಎಂ ಅವರ ಕಡೆಯಿಂದ ಆಹ್ವಾನ ಬಂದಿತ್ತು. ಅದಕ್ಕೆ ಪಾಲ್ಗೊಂಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಇಲ್ಲಿ ನೋಡಿದರೆ ಒಮ್ಮೆ ಆಹ್ವಾನ ಕೊಟ್ಟಿದ್ದೇನೆ, ಒಮ್ಮೆ ಇಲ್ಲ ಎನ್ನುತ್ತಿದ್ದಾರೆ. ಇಂತಹ ಬಾಲಿಷತನದ ಹೇಳಿಕೆಯಿಂದ ಸರಕಾರದಲ್ಲಿ ಎಲ್ಲವೂ ಸರಿಯಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ದೇಶ ಆರ್ಥಿಕವಾಗಿ ಬೆಳೆದು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದರೆ, ರಾಜ್ಯ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಿನ್ನಡೆ ಸಾಧಿಸುತ್ತಿದೆ. ಇತ್ತ ಭರವಸೆ ನೀಡಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ನೀಡುವಲ್ಲಿಯೂ ಸರ್ಕಾರ ತಿಣುಕಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಗಳನ್ನು ತಂದು ಸರ್ಕಾರ ಆರ್ಥಿಕವಾಗಿ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ಶಶೀಲ್ ನಮೋಶಿ, ಬಸವರಾಜ್ ಮತ್ತಿಮಡು, ಅಶೋಕ್ ಬಗಲಿ, ರಾಜಕುಮಾರ್ ಪಾಟೀಲ್ ತೇಲ್ಕೂರ್ ಸೇರಿದಂತೆ ಇತರ ಬಿಜೆಪಿ ನಾಯಕರು ಇದ್ದರು.