ಕಲಬುರಗಿ: ನಮ್ಮ ಸಾಹಿತ್ಯ ಸಮದರ್ಶನದ ಮೇಲೆ ನಿಲ್ಲಬೇಕಿದೆ. ಸಮಾನ ಮನಸ್ಸು, ಸಮಾನ ಚಿಂತನೆಯುಳ್ಳ ಸಮದರ್ಶಿತ್ವದ ಸಾಹಿತ್ಯ ಇಂದಿನ ಅಗತ್ಯವಾಗಿದೆ. ಇಂದಿನ ಪರಿಸರ ನನಗೆ ಭಯ ಹುಟ್ಟಿಸುತ್ತದೆ. ಸಮಾನತೆಯ ಕ್ಷೇತ್ರವಾಗಬೇಕಿದ್ದ ಸಾಹಿತ್ಯದಲ್ಲೂ ಗುಂಪು-ಘರ್ಷಣೆ, ಮತ-ಪಂಥ, ಎಡ-ಬಲ ಕಾಣುತ್ತಿದ್ದೇವೆ. ಮನುಷ್ಯ ಪಂಥ ಬಿಟ್ಟು ಎಲ್ಲ ಪಥಗಳತ್ತ ಹೋಗುತ್ತಿದ್ದೇವೆ. ಕನ್ನಡದ್ದು ಶ್ರೀಗಂಧದ ಸಂಸ್ಕೃತಿ, ಶ್ರೀಗಂಧದ ಒಮ್ಮೆಗೇ ಘಮ್ಮೆನ್ನಲ್ಲ. ತೇಯುತ್ತ ಹೋದಂತೆ ನಿಧಾನಕ್ಕೆ ಕಂಪು ಹೊಮ್ಮುತ್ತದೆ. ಸಾಹಿತ್ಯ ಕಟ್ ಆಂಡ್ ಪೇಸ್ಟ್ ಆಗಬಾರದು. ಇದೀಗ ಎಐ, ಜಿಪಿಟಿ ಬಂದಿದೆ. ಅದಕ್ಕೆ ಬೆಳಕಿನ ಬಗೆಗೆ ಒಂದು ಕವಿತೆ ಎಂದರೆ, ಅದೇ ಬರೆದು ಬಿಡುತ್ತದೆ. ಯಾವುದೇ ಸಾಹಿತ್ಯ ಸೃಜನಾತ್ಮಕ, ಕ್ರಿಯಾತ್ಮಕವಾದ ಮನಸ್ಸಿನಿಂದ, ಹೃದಯಪೂರ್ವಕವಾಗಿ ಬರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಕಸಾಪ ದ ವತಿಯಿಂದ ಹಮ್ಮಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ ಯುವ ಸೌರಭ ಕೃತಿಯ ಯುವಾವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮೊದಲ ದೂರದರ್ಶನ ಕೇಂದ್ರ ಆರಂಭವಾಗಿದ್ದೇ ಕಲಬುರಗಿಯಲ್ಲಿ. ಈ ಕೇಂದ್ರ ಮುಚ್ಚುವ ನಿರ್ಧಾರ ಸರಿಯಲ್ಲ. ಸರ್ಕಾರಗಳು ಎಲ್ಲವನ್ನೂ ವಾಣಜ್ಯ ದೃಷ್ಟಿಯಿಂದ ನೋಡದೇ ಇತಿಹಾಸ, ಪರಂಪರೆಯ ದ್ರಷ್ಠಿಯಿಂದ ನೋಡಬೇಕು. ಈ ದೂರದರ್ಶನ ಕೇಂದ್ರ ಮುಚ್ಚದಂತೆ ಕೇಂದ್ರ ಸರ್ಕಾರದ ಮೇಲೂ ವಯಕ್ತಿಕವಾಗಿ ಒತ್ತಡ ಹೇರುವೆ ಎಂದು ಜೋಶಿ ಭರವಸೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಎಲೆಮರೆಯ ಕಾಯಿಗಳಂತೆ ಮೌನದಿಂದಲೇ ಬಹು ದೊಡ್ಡ ಸಾಧನೆ ಮಾಡುತ್ತಿರುವ ಈ ಭಾಗದ ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಪರಿಷತ್ತಿನ ಮೂಲ ಉದ್ದೇಶವಾಗಿದೆ. ಸಾಹಿತಿ, ಸಾಹಿತ್ಯಾಸಕ್ತರನ್ನು ಜೋಡಿಸಿ ಇನ್ನೂ ಉತ್ತಮ ಕಾರ್ಯಗಳು ಪರಿಷತ್ತು ಮಾಡುತ್ತಿದೆ ಎಂದು ಹೇಳಿದ ಅವರು, ಈ ಭಾಗದ ಭಾಷೆ-ಸಂಸ್ಕೃತಿ ಮತ್ತು ಇವುಗಳ ಪ್ರಗತಿಗಾಗಿ ಅಹರ್ನಿಸಿ ದುಡಿಯುತ್ತಿರುವ ಯುವ ಲೇಖಕರನ್ನು ನಾಡಿಗೆ ಪರಿಚಯಿಸುವಂಥ ಕಾರ್ಯ ಈ ಕೃತಿಯ ಮೂಲಕ ಮಾಡಲಾಗಿದೆ. ಪರಿಷತ್ತು ಸಾಹಿತ್ಯಕ ಚಟುವಟಿಕೆಗಳ ಆಯೋಜನೆ ಜತೆಗೆ ಪುಸ್ತಕ ಪ್ರಕಟನೆಗೂ ಆದ್ಯತೆ ನೀಡಲಾಗುತ್ತಿದೆ ಎಂದರು.
ಸAಸ್ಕೃತಿ ಚಿಂತಕ ಸಂಜೀವ ಸಿರನೂರಕರ್ ಅವರು ಕೃತಿ ಪರಿಚಯಿಸಿದರು. ಕೇಂದ್ರ ಕಸಾಪ ದ ಗೌರವ ಕಾರ್ಯದರ್ಶಿ ಬಿ.ಎಂ. ಪಟೇಲ ಪಾಂಡು, ನಿವೃತ್ತ ಪ್ರಾಧ್ಯಾಪಕ ಡಾ. ಸಿದ್ರಾಮಯ್ಯ ಮಠ, ಶ್ರೀ ಹಿಂಗುಲಾAಬಿಕಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಗೀತಾ ಮೋರೆ ಮಾತನಾಡಿದರು. ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ಸೈಯ್ಯದ್ ನಜಿರುದ್ದಿನ್ ಮುತ್ತವಲಿ, ಡಾ. ರೆಹಮಾನ್ ಪಟೇಲ್, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ದಿನೇಶ ಮದಕರಿ, ಕಲ್ಯಾಣಕುಮಾರ ಶೀಲವಂತ, ಧರ್ಮರಾಜ ಜವಳಿ, ಪ್ರಭವ ಪಟ್ಟಣಕರ್, ಶಿವಲೀಲಾ ಕಲಗುರ್ಕಿ, ಎಸ್.ಕೆ. ಬಿರಾದಾರ, ರವಿಕುಮಾರ ಶಹಾಪುರಕರ್, ಎಂ.ಎನ್. ಸುಗಂಧಿ, ಶಿವಾನಂದ ಸುರವಸೆ, ಅಮೃತಪ್ಪ ಅಣೂರ, ಸೋಮಶೇಖರಯ್ಯಾ ಹೊಸಮಠ, ವಿಲ ಭೀಮನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವಿವಿಧ ಕ್ಷೇತ್ರದ ಯುವ ಸಾಧಕರಾದ ವೀರಣ್ಣ ಬೇಲೂರೆ, ವೀರೇಶ ಚಂಡ್ರಿಕಿಮಠ, ಪುಷ್ಪಾಂಜಲಿ ಆರ್ ಭಂಡಾರಿ, ಸಂಗೀತಾ ವಾಲಿ ಶಹಾಬಾದ, ಶೇಖ್ ಸಮ್ರೀನ್ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.