ಕಲಬುರಗಿ: ದಲಿತ ಸೇನೆ ವತಿಯಿಂದ ಇದೇ ಮೇ.25ರಂದು ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸೇನೆ ಗುಲಬರ್ಗಾ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಸಂತೋಷ ಪಾಳಾ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಮುಂಜಾನೆ 9.30 ಗಂಟೆಗೆ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದ್ದು, ಪೂಜ್ಯ ಭಂತೆ ಅಮರಜ್ಯೋತಿ ಧ್ಯಾನ ಭೂಮಿ, ಗುರುಪಾದಲಿಂಗಪ್ಪ ಶಿವಯೋಗಿ, ಪರಮಾನಂದ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಶಾಸಕ ಬಿ.ಆರ್.ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಅಧ್ಯಕ್ಷೆ ವಹಿಸಲಿದ್ದಾರೆ. ಉಪನ್ಯಾಸಕರಾದ ಡಾ.ಅನೀಲ್ ಟೆಂಗಳಿ, ಪತ್ರಕರ್ತ ಮತ್ತು ಸಾಹಿತಿ ಸುರೇಶ ಬಡಿಗೇರ್ ಮುಖ್ಯ ಭಾಷಣಕಾರರಾಗಿ ಆಗಮಿಸುವರು. ದತ್ತರಾಜ್ ಗುತ್ತೇದಾರ್, ಸಿದ್ದರಾಮ ಪ್ಯಾಟಿ, ನಿಂಬರ್ಗಾ ಪಿಎಸ್ಐ ಇಂದುಮತಿ, ವೀರಯ್ಯ ಮಠಪತಿ, ವಿಶ್ವನಾಥ ಕವಂಟಗಿ ಸೇರಿದಂತೆ ಅನೇಕರು ಬಹಿರಂಗ ಸಭೆಯ ವೇದಿಕೆಯ ಮೇಲೆ ಉಪಸ್ಥಿತವಿರುವರು ಎಂದು ವಿವರಿಸಿದರು.
ಅಂದು ಮಧ್ಯಾಹ್ನ 2.00 ಗಂಟೆಗೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ವರ್ಣರಂಜಿತ ಮೆರವಣಿಗೆಗೆ ಚಾಲನೆ ನೀಡುವರು, ಗ್ರಾಮದ ಸರಕಾರಿ ನೌಕರಸ್ಥರಿಗೆ ಸನ್ಮಾನ ಸಮಾರಂಭ ಕೂಡ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉದಯ ಖಣಗೆ, ಶಿವಶರಣಪ್ಪ ಶಿಂಗೆ, ಶರಣಬಸಪ್ಪ ಚಂಡಕೆ, ಶಿವಲಿಂಗಪ್ಪ ಗೊಚ್ಚೆ, ಅಮರ ಚಂಡಕೆ ಸೇರಿದಂತೆ ಇತರರು ಇದ್ದರು.