ಕಲಬುರಗಿ: ಕಲಬುರಗಿಯಲ್ಲಿ ಪೊಲೀಸರನ್ನು 15 – 20 ನಿಮಿಷ ತಡೆ ಹಿಡಿದರೆ, ಮುಸ್ಲಿಮರನ್ನು ನಮ್ಮ ಬೋರಮಾಠಿ ಸಮುದಾಯದಿಂದ ಸಾಮೂಹಿಕವಾಗಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಮಣಿಕಂಠ ರಾಠೋಡ್ ತನ್ನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮುಸ್ಲಿಂ ಸಮುದಾಯವನ್ನು ಬೇರು ಸಮೇತ ಕಿತ್ತೊಗೆಯಬೇಕು. 8 ದಿವಸಗಳ ಒಳಗಾಗಿ ʼಲವ್ ಜಿಹಾದ್ʼ ಆರೋಪಿಗಳನ್ನು ಸಾಯಿಸಬೇಕು ಎಂದು ಮಾತನಾಡಿರುವ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಶನಿವಾರ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೊದಲ ಎಫ್ಐಆರ್ ನಂತರ ಈಗ ಶಹಾಬಾದ್ ಪೊಲೀಸ್ ಠಾಣೆಯಯಲ್ಲಿ ರವಿವಾರ ಮತ್ತೊಂದು ಪ್ರಕರಣ ದಾಖಲಾಗಿದೆ.
ಶಹಾಬಾದ್ ನಿವಾಸಿ ಮುಹಮ್ಮದ್ ಮಸ್ತಾನ್ ದೂರು ನೀಡಿದ ಮೇರೆಗೆ ಕೋಮು ಸೌಹಾರ್ದತೆ ಕೆಡಿಸಲು ಪ್ರಯತ್ನಿಸಿದ್ದು, ಕೋಮು ಗಲಭೆಗೆ ಪ್ರಚೋದನೆ ನೀಡಿರುವ ಆರೋಪದಲ್ಲಿ ಮಣಿಕಂಠ ರಾಠೋಡ್ ವಿರುದ್ಧ ಶಹಾಬಾದ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕೋಮು ಗಲಭೆಗೆ ಪ್ರಚೋದನೆ ನೀಡಿರುವ ಆರೋಪದಲ್ಲಿ ಮಣಿಕಂಠ ರಾಠೋಡ್ ವಿರುದ್ಧ ಇದು ಎರಡನೇ ಪ್ರಕರಣ ದಾಖಲಾಗಿದ್ದು, ಈವರೆಗೆ ಪೊಲೀಸರು ಆತನನ್ನು ಬಂಧಿಸದಿರುವುದು ಮುಸ್ಲಿಂ ಸಮುದಾಯದ ಮತ್ತು ಪ್ರಗತಿಪರ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸಚಿವ ಪ್ರಿಯಾಂಕ್ ಖರ್ಗೆಗೆ ನಿಂದನೆ ಮಾಡಿರುವ ಆರೋಪದ ಮೇರೆಗೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.