ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು 2025-26ನೇ ಸಾಲಿನ ಮಾರುಕಟ್ಟೆ ಋತುವಿಗಾಗಿ 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಹೆಚ್ಚಿಸಲು ಅನುಮೋದನೆ ನೀಡಿರುವ ನಿರ್ಧಾರಕ್ಕೆ ಸ್ವಾಗತಿಸುವುದಾಗಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಳೆಗಾರರಿಗೆ ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 2025-26ರ ಮಾರುಕಟ್ಟೆ ಋತುವಿನಲ್ಲಿ ಖಾರಿಫ್ ಬೆಳೆಗಳ MSP ಅನ್ನು ಹೆಚ್ಚಿಸಿದೆ. ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ ಕಾರೆಳ್ಳು ಬೀಜ (ಕ್ವಿಂಟಲ್ಗೆ ರೂ. 820) ನಂತರ ರಾಗಿ (ಕ್ವಿಂಟಲ್ಗೆ ರೂ. 596), ಹತ್ತಿ (ಕ್ವಿಂಟಲ್ಗೆ ರೂ. 589) ಮತ್ತು ಎಳ್ಳು (ಕ್ವಿಂಟಲ್ಗೆ ರೂ. 579) ಶಿಫಾರಸು ಮಾಡಲಾಗಿದೆ ಎಂದರು.
ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತೊಗರಿಗೆ ಕೇಂದ್ರ ಸರ್ಕಾರವು 2024-25 ರಲ್ಲಿ 7550 ರೂ ಬೆಂಬಲ ನಿಗದಿಪಡಿಸಲಾಗಿತ್ತು, ರಾಜ್ಯ ಸರ್ಕಾರವು 450 ರೂ ಗಳನ್ನು ಸೇರಿಸಿ ಪ್ರತಿ ಕ್ವಿಂಟಾಲ್ 8000 ರೂಪಾಯಿಗಳನ್ನು ನೀಡಲಾಗುತಿತ್ತು. ಆದರೆ ಈಗ ಕೇಂದ್ರ ಸರ್ಕಾರವು 2013 ರಲ್ಲಿದ್ದ ಬೆಂಬಲ ಬೆಲೆಗಿಂತ ಸುಮಾರು ಶೇ. 86 ರಷ್ಟು ಹೆಚ್ಚಿಗೆ ಮಾಡಿದಂತಾಗಿದೆ, ತೊಗರಿ ನಮ್ಮ ಭಾಗದ ವಾಣಿಜ್ಯ ಬೆಳೆಯಾಗಿರುವುದರಿಂದ ನಮ್ಮ ರೈತರಿಗೆ ಸಹಾಯವಾಗಿದೆ ಎಂದು ಹೇಳಿದ್ದಾರೆ.
2025-26 ನೇ ಸಾಲಿನಲ್ಲಿ ತೊಗರಿ ಬೆಳೆಗೆ ಕೇಂದ್ರ ಸರ್ಕಾರವೆ 8,000 ರೂಪಾಯಿ ನಿಗದಿ ಪಡಿಸಿದ್ದು, ರಾಜ್ಯ ಸರಕಾರವು ಸಹ ಕನಿಷ್ಠ ಇನ್ನೂ 2,000 ರೂಪಾಯಿಗಳನ್ನು ಹೆಚ್ಚಿಸಿ 10000 ರೂಪಾಯಿಗಳನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.