ಕಲಬುರಗಿ: ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾಗಿ 11 ವರ್ಷಗಳು ಜೂ.9ಕ್ಕೆ ಪೂರ್ಣ ಗೊಂಡಿರುವ ಸವಿನೆನಪಿಗಾಗಿ 11 ವರ್ಷಗಳ ಸಾಧನೆಯ ಗುಚ್ಚವನ್ನು ಬಿಚ್ಚಿಡುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಸಿತ ಭಾರತದ ಅಮೃತ ಕಾಲ ಸೇವೆ, ಸುಶಾಸನ, ಬಡವರ ಕಲ್ಯಾಣದ ಮೋದಿ ಸರ್ಕಾರಕ್ಕೆ 11 ವರ್ಷ ಎಂಬ ಘೋಷ್ಯವಾಕ್ಯದಡಿ ಕೇಂದ್ರ ಸರಕಾರದಿಂದ ಆಗಿರುವ ಮಹತ್ವದ ಸಾಧನೆಗಳ ಕುರಿತು ದೇಶದ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಜಿಲ್ಲಾ ಸಮಿತಿ ರಚಿಸಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಅಭಿಯಾನವು ರಾಷ್ಟ್ರ, ರಾಜ್ಯ, ಮಹಾನಗರ ಪಾಲಿಕೆ, ಜಿಲ್ಲೆ, ಮಂಡಲ, ಶಕ್ತಿಕೇಂದ್ರಗಳಾಗಿ ವಿಭಾಗ ಮಾಡಿ ಸಮಿತಿ ರಚಿಸಿ ಸಭೆ ಸಮಾರಂಭಗಳು ಆಯೋಜನೆ ಮಾಡಲಾಗುತ್ತಿದೆ ಎಂದ ಅವರು, ಈ ನಿಟ್ಟಿನಲ್ಲಿ ಜೂ.14ರಂದು ಮದ್ಯಾಹ್ನ 2ಗಂಟೆಗೆ ನಗರದ ಪಿಡಿಎ ಸ್ಯಾಕ್ ಸಭಾಂಗಣದಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರು ವಿಷಯ ಮಂಡನೆ ಮಾಡುವರು, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಎಚ್ಕೆಸಿಸಿ ಅಧ್ಯಕ್ಷ ಶರಣು ಪಪ್ಪಾ, ಬಾರ್ ಅಸೋಶಿಯೇಷನ್ ಅಧ್ಯಕ್ಷ ಎಸ್.ಬಿ. ಪಪ್ಪಾ, ಸಂತೋಷ ಲಂಗರ್ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ತಾಯಿಗೊಂದು ಮರ ಎನ್ನುವ ನಿಟ್ಟಿನಲ್ಲಿ ಸಸಿ ನೆಡುವ ಕಾರ್ಯಕ್ರಮ, ಶಾಮ್ ಪ್ರಸಾದ ಅವರ ಬಲಿದಾನದ ದಿನವಾದ ಜೂನ 23ರಂದು ಪ್ರತಿ ಬೂತನಲ್ಲಿ ಕಾರ್ಯಕ್ರಮ ಆಯೋಜಿಸುವುದು, 70 ವರ್ಷ ದಾಟಿದ ಹಿರಿಯರಿಗೆ ವಯೋವಂದನ ಸೌಲಭ್ಯ ನೊಂದಣಿ, ಕಿಸಾನ ಸಮ್ಮಾನ ನಿಧಿ ಸೇರಿದಂತೆ ಹಲವಾರು ಸೌಲಭ್ಯಗಳ ಕುರಿತು ಪರಿಚಯ ಮಾಡಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ, ಅವ್ವಣ್ಣ ಮ್ಯಾಕೇರಿ, ಸಂತೋಷ ಹಾದಿಮನಿ, ಮಹಾದೇವ ಬೆಳಮಗಿ ಇದ್ದರು.