ಕಲಬುರಗಿ: ಪರಿಸರ ಸಂರಕ್ಷಣೆ ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಗನ್ನಾಥ ಶೇರಿಕಾರ ಹೇಳಿದ್ದಾರೆ.
ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿಯ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಘಟಕ ಹಾಗೂ ಬಿಸಿ ಟ್ರಸ್ಟ್ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪ್ಲಾಸ್ಟಿಕ್ ಬಳಕೆಯಿಂದ ಭೂಮಿಯ ಆರೋಗ್ಯ ಕೆಡುತ್ತಿದೆ. ಮರಗಳು ಬೆಳೆಸುವುದರಿಂದ ಪ್ರಕೃತಿಯಲ್ಲಿ ಸಮತೋಲನೆ ಉಂಟಾಗುತ್ತದೆ. ಯಾವುದೇ ಕಂಪೆನಿಯಿಂದ ನೀರು, ಮಣ್ಣು, ರಕ್ತ ತಯಾರಿಸಲು ಸಾಧ್ಯವಿಲ್ಲ ಆದರೆ ವ್ಯಕ್ತಿಯಿಂದ ಈ ಮೂರು ತಯಾರಿಸಲು ಸಾಧ್ಯವಿದೆ. ಹೆಚ್ಚು ಮರಗಳು ಬೆಳೆಸಿದರೆ ಮಣ್ಣಿನ ಸವಕಳಿ ತಡೆದು ಹೊಸದಾಗಿ ಮಣ್ಣು ತಯಾರಾಗುತ್ತದೆ, ಇದರಿಂದ ಕಾಲ ಕಾಲಕ್ಕೆ ಮಳೆ ಸುರಿಯುತ್ತದೆ ಎಂದರು.
ಉತ್ತಮ ವಾತಾವರಣದಲ್ಲಿ ವ್ಯಕ್ತಿ ಆರೋಗ್ಯ ಪೂರ್ಣ ಜೀವನನಡೆಸಿದರೆ ರಕ್ತವೂ ಹೆಚ್ಚುತ್ತದೆ ಎಂದರು. ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ ಸೇರಿದಂತೆ ವಿವಿಧ ಶುಭ ಕಾರ್ಯಗಳ ನೆಪದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ನಿಮ್ಮ ಕೊಡುಗೆ ನೀಡಿ ಸಾಮಾಜಿಕ ಜವಾಬ್ದಾರಿ ಮೆರೆಯಿರಿ ಎಂದು ಮನವಿ ಮಾಡಿದರು. ಇಂದು ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಲ್ಲಿಸುವುದು ಕಷ್ಟಸಾಧ್ಯ ಆದರೆ ಅತಿ ಅಗತ್ಯ ಮತ್ತು ಅನಿವಾರ್ಯವಿದ್ದಲ್ಲಿ ಮಾತ್ರ ಬಳಸಿದರೆ ನಾವು ಮಣ್ಣು, ನೀರು ಹಾಗೂ ವಾತಾವರಣದ ಮೇಲೆ ನಡೆಯುವ ದೌರ್ಜನ್ಯ ತಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಉದ್ಘಾಟಿಸಿದ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀದೇವಿ ಮಂಜುನಾಥ ಕೊರವಿ ಮಾತನಾಡಿ, ಜಗತ್ತಿನ 134 ದೇಶಗಳಲ್ಲಿ ವಿಶ್ವಪರಿಸರ ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರು ಸ್ವಸ್ಥ ಜೀವನ ನಡೆಸಬೇಕಾದರೆ ಉತ್ತಮ ಪರಿಸರ ಅತಿ ಅಗತ್ಯವಾಗಿದೆ ಇದಕ್ಕಾಗಿ ನೀವು ಹೆಚ್ಚು ಮರಗಳನ್ನು ನೆಡಲು ಮುಂದಾಗಬೇಕೆoದರು.
ಜಿಲ್ಲಾ ಜನಜಾಗೃತಿ ಸಮಿತಿ ಉಪಾಧ್ಯಕ್ಷ ನರಸಮ್ಮ ಲಕ್ಷ್ಮಣ ಅವುಂಟಿ, ಸದಸ್ಯ ಸುರೇಶ ದೇಶಪಾಂಡೆ, ಯೋಜನಾಧಿಕಾರಿ ಗೋಪಾಲ ಮಾತನಾಡಿದರು.
ಅಧ್ಯಕ್ಷತೆವಹಿಸಿದ್ದ ಮುಖ್ಯಶಿಕ್ಷಕ ದೇವೇಂದ್ರಪ್ಪ ಹೋಳ್ಕರ್ ಮಾತನಾಡಿ, ಆರೋಗ್ಯ ಪೂರ್ಣ ಜೀವನಕ್ಕೆ ಉತ್ತಮ ಪರಿಸರ ಅತಿ ಅಗತ್ಯ. ನಮಗೆ ಬೇಡವಾಗಿರುವುದು ಮರಗಳು ಸೇವಿಸಿ ನಮಗೆ ಬೇಕಾಗಿರುವುದು ಕೊಡುವ ಪರೋಪಕಾರಿ ಮರಗಳನ್ನು ಬೆಳೆಸಲು ನೀವು ಕೈಜೋಡಿಸಿ ಎಂದು ತಿಳಿಸಿ ತಮ್ಮ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ ಧರ್ಮಸ್ಥಳ ಸಂಸ್ಥೆಯ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಮೋಹನ ಸ್ವಾಗತಿಸಿದರು. ವಾಹಬ ನಿರೂಪಿಸಿದರು. ಸತೀಶ ವಂದಿಸಿದರು. ಕಾರ್ಯಕ್ರಮದಲ್ಲಿ ಶೌರ್ಯ ತಂಡದ ಮಂಜುನಾಥ ಸುನಾಗಮಠ, ಸಂಜೀವಕುಮಾರ ಪಾಟೀಲ ಯಂಪಳ್ಳಿ, ಗಣೇಶ ಹೂಗಾರ, ಮೇಲ್ವಿಚಾರಕಿ ಕಾವ್ಯಾ ಮತ್ತು ಸೇವಾ ಪ್ರತಿನಿಧಿಗಳು ಹಾಗೂ ಮಕ್ಕಳು ಇದ್ದರು.