ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ, ಎಚ್. ಕೆ .ಇ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ “ನನ್ನ ಮತ ಮಾರಾಟಕ್ಕಿಲ್ಲ -ಮತದಾರ ಜಾಗೃತಿ ಆಂದೋಲನ” ಕಾರ್ಯಕ್ರಮ ಜರುಗಿತು.
ವಿಶ್ವನಾಥ್ ರೆಡ್ಡಿ ಮುದ್ನಾಳ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಸವರಾಜ ಮಠಪತಿ ಕಾರ್ಯಕ್ರಮ ಉದ್ಘಾಟಿಸಿ ಬಹುತೇಕ ಎಲ್ಲಾ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮಿತಿಮೀರಿ ಹಣ ಹಂಚಿ ಮತದಾರರನ್ನು ದಾರಿ ತಪ್ಪಿಸುತ್ತಿವೆ. ಮತದಾರರು ಜಾಗೃತರಾಗಬೇಕು. ನಮ್ಮ ಮತಕ್ಕೆ ಬೆಲೆ ಕಟ್ಟಲಾಗದಷ್ಟು ಅಮೂಲ್ಯವಾದ ಮೌಲ್ಯವಿದ್ದು ನಮ್ಮ ಒಂದು ಮತ ನಮ್ಮ ದೇಶವನ್ನು ಸಮೃದ್ಧತೆಯಡೆಗೆ ಒಯ್ಯುವುದಲ್ಲದೆ ನಮ್ಮ ಜೀವನವನ್ನು ಸುಖಮಯವಾಗಿ ಮಾಡುವುದಕ್ಕೆ ಸಹಕಾರಿಯಾಗಿದೆ ಎಂದರು.
ಮತದಾರರು ಚುನಾವಣೆಯಲ್ಲಿ ಹಣ ಹಂಚಲು ಬಂದವರನ್ನು ಧಿಕ್ಕರಿಸಬೇಕು. ಹಣ ಹಂಚಿಕೆಯಿಂದ ದೇಶ ಮತ್ತು ರಾಜ್ಯಗಳಲ್ಲಿ ಭ್ರಷ್ಟಾಚಾರ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಭ್ರಷ್ಟಮುಕ್ತ ಸಮಾಜ ಮತ್ತು ರಾಜಕೀಯ ನಿರ್ಮಾಣದಲ್ಲಿ ಮತದಾರ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದ್ದರು.
ರಮೇಶ ಆರ್ ದುತ್ತರಗಿ ಪ್ರಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳು ಗಾಂಧಿ, ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಕಿತ್ತೂರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಮೌಲಾನ ಅಬ್ದುಲ್ ಕಲಾಂ ಆಜಾದ್ ರಂತಹ ಹೋರಾಟಗಾರರ ಜೀವನವನ್ನು ಅಧ್ಯಯನ ಮಾಡಬೇಕು. ಮಹಾನ್ ವ್ಯಕ್ತಿಗಳ ವ್ಯಕ್ತಿತ್ವವನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಚುನಾವಣೆಗಳಲ್ಲಿ ಹಣ ಹಂಚಿ ಆಯ್ಕೆಯಾದ ಜನಪ್ರತಿನಿಧಿಗಳಿಂದ ಪಾರದರ್ಶಕವಾದ ಆಡಳಿತ ನಿರೀಕ್ಷಿಸುವುದು ಹೇಗೆ ಸಾಧ್ಯ ? ನಮ್ಮ ದೇಶದ ಚುನಾವಣೆಗಳಲ್ಲಿ ಹಣವಂತರೆ ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ. ಹಣ ಸುರಿದು ಆಯ್ಕೆಯಾದ ಮೇಲೆ ಹಣ ಮಾಡುವುದರಲ್ಲಿ ತೊಡಗುತ್ತಿದ್ದಾರೆ. ಜನ ಪ್ರತಿನಿಧಿಗಳಿಗೆ ಸಮಾಜದ ಹಾಗೂ ದೇಶದ ಕಾಳಜಿಗಿಂತ ವೈಯಕ್ತಿಕ ಕಾಳಜಿ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜಕಾರಣ ಎನ್ನುವುದು ಒಂದು ವ್ಯಾಪಾರವಾಗಿ ಮಾರ್ಪಟ್ಟಾಗುತ್ತಿದೆ. ಇದರಿಂದ ದೇಶದ ಭವಿಷ್ಯಕ್ಕೆ ಮುಂದೆ ಗಂಡಾಂತರವಿದ್ದು ಪ್ರತಿಯೊಬ್ಬರು ಇಂದು ಎಚ್ಚೆತ್ತುಕೊಳ್ಳಬೇಕಾಗಿದೆ. ದೇಶದ ಭವಿಷ್ಯ ಯುವ ಜನಾಂಗದ ಕೈಯಲ್ಲಿದ್ದು ಇಂದಿನ ಯುವ ಜನಾಂಗ ಸಮಾಜದಲ್ಲಿ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ. ಯಾವುದೇ ಕ್ಷೇತ್ರದಲ್ಲಿ ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ನಾವು ಮೊದಲು ಮನುಷ್ಯರಾಗುವುದನ್ನು, ಮನುಷ್ಯತ್ವವನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಒಳ್ಳೆಯದಕ್ಕೆ ಬೆಂಬಲಿಸುವುದು ಹಾಗೂ ಕೆಟ್ಟದ್ದಕ್ಕೆ ಖಂಡಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಉಷಾದೇವಿ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಪ್ರತಿಯೊಬ್ಬರು ತಪ್ಪದೆ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು. ತಪ್ಪದೆ ಮತ ಚಲಾಯಿಸಬೇಕು. ಚುನಾವಣೆಯಲ್ಲಿ ಹಣ ಹಂಚಲು ಬಂದವರನ್ನು ತಿರಸ್ಕರಿಸಬೇಕು. ಕ್ರಿಮಿನಲ್ ಆರೋಪ ಹಿನ್ನೆಲೆ ಉಳ್ಳವರಿಗೆ ಮತ ಹಾಕಬಾರದು. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ನಮಗೆ ಸರಿ ಎನಿಸದೆ ಇದ್ದ ಪಕ್ಷದಲ್ಲಿ ಕೊನೆಗೆ ನೋಟಾ(NOTA) ಕ್ಕಾದರೂ ಮತ ಹಾಕುವ ಮುಖಾಂತರ ಮತದಾನದಲ್ಲಿ ಭಾಗಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅನುಸೂಯಾ ಜಿ .ಜೈಬಾ ಅಕ್ತರ್, ಶಿಲ್ಪಕಲಾ. ಬಿ, ರಾಜಶ್ರೀ, ಶುಭಾ ,ಉಪಸ್ಥಿತರಿದ್ದರು. ಪಿಯುಸಿ ದ್ವಿತೀಯ ವಿಜ್ಞಾನ ವಿದ್ಯಾರ್ಥಿನಿ ಸಿದ್ದಮ್ಮ ನಿರೂಪಿಸಿದ್ದರು. ಅಕ್ಷತಾ ಪ್ರಾರ್ಥನೆ ಗೀತೆ ಹಾಡಿದರು. ನಾಜಿಯಾ ಸ್ವಾಗತಿಸಿದರು. ಸಮಿನಾ ವಂದಿಸಿದ್ದರು. ವಿದ್ಯಾರ್ಥಿನಿಯರಿಗೆ ನನ್ನ ಮತ ಮಾರಾಟಕ್ಕಿಲ್ಲ .ನಾನು ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುತ್ತೇನೆ ಹಾಗೂ ಕ್ರಿಮಿನಲ್ ಅಪರಾಧ ಹಿನ್ನೆಲೆ ಉಳ್ಳವರಿಗೆ ನಾನು ಮತ ಹಾಕುವುದಿಲ್ಲ, ಎಂದು ಪ್ರತಿಜ್ಞಾವಿಧಿ ಬೋಧಿಸಲಾಯಿತು.