ಕಲಬುರಗಿ: ತಮಿಳು ಭಾಷೆಯಿಂದ ಕನ್ನಡ ಭಾಷೆ ಉಗಮವಾಯಿತು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಸಿನಿಮಾವನ್ನು ಜಿಲ್ಲೆಯಲ್ಲಿ ಬಿಡುಗಡೆಗೆ ಅನುವು ಮಾಡಿಕೊಡಬಾರದು ಎಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತಮಟೆ ಬಾರಿಸುವ ಮೂಲಕ ವಿವಿಧ ಘೋಷಣೆಗಳನ್ನು ಕೂಗುತ್ತ ಕರವೇ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಿತ್ರ ಜೂನ್ 5 ರಿಂದ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ನಮ್ಮ ಭಾಷೆಯನ್ನು ಅಪಮಾನಿಸಿರುವ ನಟರ ಸಿನಿಮಾವನ್ನು ಕಲಬುರಗಿಯ ಯಾವುದೇ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದರು.
ಇದೇ ವೇಳೆಯಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ, ನಮ್ಮ ಕನ್ನಡ ಭಾಷೆಗೆ 5 ಸಾವಿರ ವರ್ಷಗಳ ಇತಿಹಾಸವಿದೆ, ಕನ್ನಡ ಭಾಷೆಯ ಲಿಪಿಗೆ ಲಿಪಿಗಳ ರಾಣಿ ಎಂದು ಕರೆಯುತ್ತಾರೆ, ನಮ್ಮ ಭಾಷೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಆದರೆ ತಮಿಳು ಭಾಷೆ ಎಷ್ಟು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದೆ ಎಂದು ಕಮಲ್ ಹಾಸನ್ ಹೇಳಲಿ ಎಂದು ಆಗ್ರಹಿಸಿದ್ದಾರೆ.
ನಟ ಕಮಲ್ ಹಾಸನ್ ತನ್ನ ಪ್ರಚಾರಕ್ಕಾಗಿ ದೊಡ್ಡ ಇತಿಹಾಸ ಹೊಂದಿರುವ ನಮ್ಮ ಭಾಷೆಯನ್ನು ಅಪಮಾನ ಮಾಡುವ ಹೇಳಿಕೆ ನೀಡಿರುವುದು ನಾವು ಖಂಡಿಸುತ್ತೇವೆ. ಈ ಅಸಂಬದ್ಧ ಹೇಳಿಕೆ ಕನ್ನಡ ದ ಅಸ್ಮಿತಿಗೆ ಧಕ್ಕೆ ತಂದಿದೆ ಎಂದು ಕಿಡಿಕಾರಿದ್ದಾರೆ.
ಈ ಸಂದರ್ಭದಲ್ಲಿ ಪ್ರವೀಣ್ ಕಟ್ಟಿಮನಿ, ಮೆಹತಾಬ್ ಖಾನ್, ಅಪ್ಪಾರಾವ್ ಖೇತ್ರಿ, ಸುರೇಶ್ ಹೊಸಮನಿ, ದೇವೇಂದ್ರಗೌಡ ಪಾಟೀಲ್, ಮೌನೇಶ್ ಬೆನಕನಹಳ್ಳಿ, ಯಲ್ಲಾಲಿಂಗ ಹಯ್ಯಾಳಕರ್ ಸೇರಿದಂತೆ ಹಲವರು ಇದ್ದರು.