ಕಲಬುರಗಿ: ಇಲ್ಲಿನ ರಾಮದೇವ್ ನಗರದ 42 ವರ್ಷದ ಅಂಭಾದಾಸ್ ಎಂಬ ವ್ಯಕ್ತಿ ತೀವ್ರ ಹೃದಯಾಘಾತ, ಕಿಡ್ನಿ ವೈಫಲ್ಯ, ತೀವ್ರ ಶ್ವಾಸಕೋಶದ ಸೊಂಕು ಹಾಗೂ ಉಸಿರಾಟದ ತೊಂದರೆಯಿಂದಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯ ಸಮಯ ಪ್ರಜ್ಞೆ ಹಾಗೂ ಸರಿಯಾದ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಬಸವೇಶ್ವರ ಆಸ್ಪತ್ರೆಗೆ ದಾಖಲಾಗುವ ಮೊದಲು ರೋಗಿಗೆ ಆರಂಭದಲ್ಲಿ ಉರಿಯುವ ಮೂತ್ರದ ಜೋತೆಗೆ ಜ್ವರ ಕಾಣಿಸಿಕೊಂಡಿತ್ತು. ಇದರಿಂದಾಗಿ ಅವರು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿನ ವೈದ್ಯರು ಅವರನ್ನು ಪರೀಕ್ಷಿಸಿ ತೀವ್ರ ಮೂತ್ರನಾಳದ ಸೊಂಕು ಯುರೋಸೆಪ್ಸೀಸ್ ಎಂದು ಗುರುತಿಸಿ ಚಿಕಿತ್ಸೆ ನೀಡಿದರು. ಆದರೆ ಅವರಿಗೆ ಮಧುಮೇಹ, ರಕ್ತದೊತ್ತಡ, ದೇಹದ ಕೊಬ್ಬು ಹಾಗೂ ಉಸಿರಾಟದಲ್ಲಿ ತೊಂದರೆಯನ್ನು ಉಂಟು ಮಾಡುವ “ಅಬ್ ಸ್ಟ್ರಕ್ಟಿವ್ ಸ್ಲೀಪ್ ಅಪ್ನೀಯಾ” (OSA)ಅವರಿಗೆ ಇರುವುದರಿಂದ ಅವರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತ ಹೋಯಿತು. ಮುಂದೆ ಅವರಿಗೆ ಉಸಿರಾಟದ ತೊಂದರೆ ಉಂಟಾಗಿ ಅವರಿಗೆ ಹೆಚ್ಚಿನ ತಪಾಸಣೆ ಮಾಡಿದಾಗ ಇನ್ಪೀರಿಯರ್ ವಾಲ್ ಮೈಕಾರ್ಡಿಯಲ್ ಇನ್ಫಾರಕ್ಷನ್ ನಿಂದಾಗಿ ಹೃದಯಾಘಾತ ಹಾಗೂ ಕಿಡ್ನಿ ವೈಫಲ್ಯ ಆಗುವ ಸಂಭವವಿದೆ ಎಂದು ತಿಳಿಯಿತು ಇದರ ಚಿಕಿತ್ಸೆ ನೀಡಿದರು. ಆದರೂ ಅವರ ಆರೋಗ್ಯ ಪರಿಸ್ಥಿತಿ ಕ್ಷೀಣಿಸುತ್ತಲೇ ಹೋಯಿತು.
ಮುಂದೆ ಅವರ ಕುಟುಂಬದ ಸದಸ್ಯರು ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದರ. ಬಸವೇಶ್ವರ ಆಸ್ಪತ್ರೆಯ ವೈದ್ಯರು ಇವರನ್ನು ಪರೀಕ್ಷಿಸಿ ಉಸಿರಾಟದ ತೊಂದರೆ ಹಾಗೂ ಆಕ್ಸೀಜನ್ ಮಟ್ಟ ಕುಸಿತಗೊಂಡಿದ್ದಕ್ಕೆ ಇವರನ್ನು ಕೂಡಲೆ ಐಸಿಯುಗೆ ದಾಖಲಿಸಿ ವೆಂಟಿಲೇಟರ್ ನಲ್ಲಿ ಇಡಲಾಯಿತು. ಮೊದಲೆ ನ್ಯೋಮೋನಿಯಾ ದಿಂದ ಬಳಲುತ್ತಿದ್ದ ರೋಗಿಯ ಕಿಡ್ನಿ ಸ್ಥಿತಿಯು ಗಂಭಿರವಾಗಿತ್ತು.
ಇದನ್ನು ಅರಿತ ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ತಂಡ ಅತ್ಯಂತ ಜಾಣ್ಮೆಯಿಂದ 8 ದಿನಗಳ ಕಾಲ ವೆಂಟಿಲೇಟರ್ ನಲ್ಲಿಯೆ ಸರಿಯಾದ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ರೋಗಿಯನ್ನು ಗುಣಮುಖರಾಗಿ ಮಾಡಿ ಮನೆಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಚಿಕಿತ್ಸಾ ತಂಡದಲ್ಲಿ ಡಾ. ಶೌಕತ್ ಎ ಆರ್,ಡಾ ಬಸವರಾಜ ಜಿ ಟಿ, ಡಾ ವಿಶ್ವನಾಥ ಸಜ್ಜನ ಶೆಟ್ಟಿ, ಐಸಿಯು ವಿಭಾಗದ ಮುಖ್ಯಸ್ಥ ಡಾ ಸೋಹೈಲ್ ಮತ್ತು ಡಾ ಪ್ರತೀಕ್ ಸ್ನಾತಕೋತ್ತರ ವೈದ್ಯರ ತಂಡ ಹಾಗೂ ನರ್ಸ್ ಸಿಬ್ಬಂದಿಗಳಿದ್ದರು.
ಇಂತಹ ಅಪರೂಪದ ಗಂಭೀರ ಆರೋಗ್ಯ ಸಮಸ್ಯೆಗೆ ಯಶಸ್ವಿ ಚಿಕಿತ್ಸೆ ನೀಡಿ ರೋಗಿಯನ್ನು ಪ್ರಾಣಾಪಾಯದಿಂದ ಕಾಪಾಡಿದ ಆಸ್ಪತ್ರೆಯ ವೈದ್ಯರ ತಂಡಕ್ಕೆ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ್ ದೇಶಮುಖ್ ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.