ಕಲಬುರಗಿ : ವಚನ ಸಂಶೋಧನಾ ಪಿತಾಮಹ ಡಾ. ಫ.ಗು. ಹಳಕಟ್ಟಿ ಜಯಂತಿ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಮಾಡುವ 2025 ನೇ ಸಾಲಿನ ಡಾ. ಫ.ಗು. ಹಳಕಟ್ಟಿ ಪ್ರಶಸ್ತಿಗೆ 10 ಜನ ಬಸವಾನುಯಾಯಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ ತಿಳಿಸಿದ್ದಾರೆ.
ವಿಶ್ವನಾಥ ಮಂಗಲಗಿ, ಅಮೃತರಾವ ಪಾಟೀಲ ಅಫಜಲಪೂರ, ಮರಿಯಪ್ಪ ಹಳ್ಳಿ, ಡಾ. ಶಿವಲೀಲಾ ಚಟ್ನಳ್ಳಿ, ಲಕ್ಷ್ಮೀಕಾಂತ ಹುಬಳಿ, ಶಿವಲಿಂಗಪ್ಪ ಅಷ್ಟಗಿ, ಡಾ. ಗೌಸುದ್ದೀನ್ ತುಮಕೂರಕರ್, ನಾಗೇಂದ್ರಪ್ಪ ನಿಂಬರ್ಗಿ, ಸಿದ್ಧರಾಮ ಯಳವಂತಗಿ, ಕಾವೇರಿ ಎನ್ ಪಾಟೀಲ ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜೂನ್ 6 ರಂದು ಬೆಳಗ್ಗೆ 10.45 ಕ್ಕೆ ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ ತಿಳಿಸಿದ್ದಾರೆ.
ಹನ್ನೇರಡನೆಯ ಶತಮಾನದ ನಂತರ ವಚನ ಸಾಹಿತ್ಯಕ್ಕೆ ಮರು ಚೈತನ್ಯ ತಂದು ಕೊಡುವ ಮೂಲಕ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಯವರು ವಚನ ಸಾಹಿತ್ಯ ಪ್ರವರ್ತಕರಾಗಿದ್ದಾರೆ. ಬಸವಾದಿ ಶರಣರ ವಚನ ಸಾಹಿತ್ಯವನ್ನು ಬೆಳಕಿಗೆ ತರುವಲ್ಲಿ ವಚನ ಪಿತಾಮಹ ಎನಿಸಿಕೊಂಡಿರುವ ಹಳಕಟ್ಟಿ ಅವರ ಶ್ರಮ ಅಮೋಘವಾಗಿದೆ. ಒಂದು ವಿಶ್ವವಿದ್ಯಾಲಯ ಸಾಧಿಸಿದಷ್ಟು ಕೆಲಸವನ್ನು ಏಕಾಂಗಿಯಾಗಿ ಮಾಡಿದ್ದಾರೆ ಎಂದು ವಿವರಿಸಿದರು.
ಗುಲಬರ್ಗ ವಿಶ್ವವಿದ್ಯಾಲಯದ ಕುಲಪತಿ ಡಾ. ಬಾಬಣ್ಣ ಹೂವಿನಭಾವಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಯಾದಗಿರಿ ವೈದ್ಯಕೀಯ ವಿಜ್ಷಾನಗಳ ಸಂಸ್ಥೆಯ ನಿರ್ದೇಶಕ ಡಾ. ಸಂದೀಪ ಹರಷಿಣಿಗಿ, ಹೂಗಾರ ಸಮಾಜದ ಪ್ರಮುಖ ಸೂರ್ಯಕಾಂತ ಫುಲಾರಿ, ರಾಜೀವಗಾಂಧಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಅರವಿಂದ ಕಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ. ಫ.ಗು. ಹಳಕಟ್ಟಿ ಅವರ ಜೀವನ ಮತ್ತು ಸಾಧನೆ ಕುರಿತು ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ವಿಚಾರ ಮಂಡಿಸಲಿದ್ದಾರೆ.
ನಾಸಾ ಮತ್ತು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಇತ್ತೀಚೆಗೆ ನಡೆಸಿದ ಬಾಹ್ಯಕಾಶ ವಸಾಹತು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆಗೈದ ಹನ್ನೊಂದು ವಿದ್ಯಾರ್ಥಿಗಳನ್ನೂ ಸಹ ಇದೇ ಸಂದರ್ಭದಲ್ಲಿ ಸತ್ಕರಿಸಲಾಗುವುದು.