ಕಲಬುರಗಿ: ನೊಂದವರ, ಬೆಂದವರ ಬದುಕಿನಲ್ಲಿ ಭರವಸೆಯ ಬೆಳಕು ನೀಡುವ ಮೂಲಕ ವೈದ್ಯಕೀಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೆ ಆದ ವಿಭಿನ್ನ ಛಾಪು ಮೂಡಿಸಿದ ಅಪರೂಪದ ವೈದ್ಯ ಡಾ.ಎಸ್.ಎಸ್.ಗುಬ್ಬಿ ಅವರಾಗಿದ್ದಾರೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ ಅಭಿಪ್ರಾಯ ಪಟ್ಟರು.
ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಡಾ.ಎಸ್.ಎಸ್.ಗುಬ್ಬಿ ಅವರ `ಹೃದಯವಂತ’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ, ಬಡವರು, ನಿರ್ಗತಿಕರಿಗೆ ಉಚಿತವಾದ ಚಿಕಿತ್ಸೆ ನೀಡಿ `ಹೃದಯವಂತ’ರಾಗಿದ್ದಾರೆ ಎಂದರು.
ಬಡವರು, ದೀನದಲಿತರ ಬಗ್ಗೆ ಡಾ.ಗುಬ್ಬಿ ಅವರು ಹೊಂದಿದ ಅಪಾರವಾದ ಪ್ರೀತಿ ನೋಡಿದರೆ, ಅವರ ಬಗ್ಗೆ ಗೌರವ ಹೆಚ್ಚುತ್ತದೆ. ಅವರು ನಡೆದು ಬಂದ ದಾರಿ ಯುವಕರಿಗೆ ಪ್ರೇರಣೆ ಆಗಬೇಕು ಎಂದರು.
ಗ್ರAಥ ಬಿಡುಗಡೆ ಮಾಡಿದ ರಾಜ್ಯನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ದುಡ್ಡಿನ ಹಿಂದೆ ಬೆನ್ನತ್ತುವ ವೈದ್ಯರು ಹೆಚ್ಚಾಗಿದ್ದಾರೆ. ಆದರೆ ಡಾ.ಎಸ್.ಎಸ್.ಗುಬ್ಬಿ ಅವರು ದುಡ್ಡಿನ ಹಿಂದೆ ಬೆನ್ನು ಹತ್ತದೆ, ಯಾವ ರೋಗಿಗಳಿಂದಲೂ ಹೆಚ್ಚು ದುಡ್ಡು ಖರ್ಚು ಮಾಡಿಸದೆ, ಉತ್ತಮ ಆರೋಗ್ಯಕ್ಕಾಗಿ ಹಾಗೂ ರೋಗಗಳ ನಿವಾರಣೆಗೆ ಯೋಗಾಸನ ಮಾಡಲು ಹೇಳುತ್ತಾರೆ. ಗುಣಮಟ್ಟದ ಚಿಕಿತ್ಸೆ ನೀಡಿ ಖ್ಯಾತರಾಗಿದ್ದಾರೆ ಎಂದರು.
ಗ್ರAಥದ ಕುರಿತು ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್ ಅವರು, ಹೃದಯವಂತ ಗ್ರಂಥದಲ್ಲಿ ಒಟ್ಟು ಆರು ಭಾಗಗಳನ್ನು ಮಾಡಿ, ಡಾ.ಎಸ್.ಎಸ್.ಗುಬ್ಬಿ ಅವರ ಸಮಗ್ರ ಪರಿಚಯ ಮಾಡಿಕೊಡಲಾಗಿದೆ. ಅವರ ನಡೆ-ನುಡಿ ಕುರಿತು ಅವರ ಹಿತೈಸಿಗಳು, ಒಡನಾಡಿಗಳ ಬರಹಗಳು ಅವರೊಬ್ಬ ಮಾದರಿ ವ್ಯಕ್ತಿಯಾಗಿ ಹಿಡಿದಿಡುತ್ತವೆ. ಬಹುತೇಕ ವೈದ್ಯರು ದುಡ್ಡಿನ ಹಿಂದೆ ಬೆನ್ನುಹತ್ತಿರುತ್ತಾರೆ. ಆದರೆ ಡಾ.ಗುಬ್ಬಿ ಅವರು ದುಡ್ಡಿನ ಹಿಂದೆ ಬೆನ್ನು ಹತ್ತದೆ ವೈದ್ಯಕೀಯ ಲೋಕದ ಬಹುದೊಡ್ಡ ಜಂಗಮರಾಗಿದ್ದಾರೆ ಎಂದರು.
ಅಭಿನAದನೆ ಸ್ವೀಕರಿಸಿದ ಡಾ.ಎಸ್.ಎಸ್.ಗುಬ್ಬಿ ಅವರು ಮಾತನಾಡಿ, ನನ್ನ ವೈದ್ಯಕೀಯ ಸೇವೆಯ ಜೊತೆಗೆ ಸಾಹಿತಿಯಾಗಿದ್ದು, ನನ್ನ ಸಾಮಾಜಿಕ ಒಲವಿಗೆ ಕಾರಣ ಆಗಿರಬಹುದು. ದ್ವೇಷ, ಅಸೂಯೆ, ಸ್ವಾರ್ಥತೆಯನ್ನು ಸಾಹಿತ್ಯವು ದೂರ ಮಾಡುತ್ತದೆ ಎಂಬುದು ನಾನು ಕಂಡ ಸತ್ಯ. ಬಡವರಿಗೆ, ಕರುಣಾಜನಕ ಸ್ಥಿತಿಯಲ್ಲಿದ್ದವರಿಗೆ ಚಿಕಿತ್ಸೆ ನೀಡಿ, ಅವರಿಗೆ ಗುಣಮುಖರನ್ನಾಗಿ ಮಾಡಿ ಅವರಲ್ಲಿ ಸಂತೋಷ ಕಂಡದ್ದು ನನಗೆ ದೊರೆತ ಬಹುದೊಡ್ಡ ಆನಂದ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಎಲ್.ಪಾಟೀಲ್, ಉಮೇಶ ಶೆಟ್ಟಿ ಬಸವರಾಜ ಕಲೆಗಾರ ಮಾತನಾಡಿದರು. ಗ್ರಂಥದ ಸಂಪಾದಕ ಬಿ.ಎಚ್.ನಿರಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಸಾನಿಧ್ಯವನ್ನು ಸೊನ್ನ ಸಿದ್ದಲಿಂಗೇಶ್ವರ ವಿರಕ್ತಮಠದ ಶ್ರೀ ಡಾ.ಶಿವಾನಂದ ಮಹಾಸ್ವಾಮಿ ಸಾನಿಧ್ಯ ವಹಿಸಿದ್ದರು. ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಡಾ.ಎಸ್.ಬಿ.ಕಾಮರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೇತ್ರ ತಜ್ಞ ಡಾ.ಕೆ.ಜಿ.ಬಿರಾದಾರ, ಗ್ರಂಥದ ಪ್ರಧಾನ ಸಂಪಾದಕ ಎಸ್.ಎಸ್.ಹಿರೇಮಠ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಡಾ.ಎಸ್.ಎಸ್.ಗುಬ್ಬಿ ದಂಪತಿಯನ್ನು ಅಭಿನಂದನಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಡಿ.ಎನ್.ಪಾಟೀಲ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಿರಣ ಪಾಟೀಲ್ ಪ್ರಾರ್ಥಿಸಿದರು. ವಿಜಯಕುಮಾರ ರೋಣದ ವಂದಿಸಿದರು. ಕಾರ್ಯಕ್ರಮದಲ್ಲಿ ಗಣ್ಯರಾದ ಉಮಾಕಾಂತ ನಿಗ್ಗುಡಗಿ, ಬಸವರಾಜ ಕೋನೆಕ್, ರವೀಂದ್ರ ಶಾಬಾದಿ, ಸುಜಾಜ ಜಂಗಮಶೆಟ್ಟಿ, ಸದಾನಂದ ಪೆರ್ಲ, ಅಪ್ಪಾರಾವ್ ಅಕ್ಕೋಣಿ, ಸ್ವಾಮಿರಾವ್ ಕುಲಕರ್ಣಿ, ಸಿದ್ದಪ್ಪ ತಳ್ಳಿಳ್ಳಿ ಸೇರಿದಂತೆ ಮೊದಲಾದವರು ಇದ್ದರು. ಕಿರಣ ಪಾಟೀಲ್, ಚಾಮರಾಜ ದೊಡ್ಡಮನಿ, ಬಾಬು ಜಾಧವ, ರಾಜಶೇಖರ್ ಮಾಂಗ್ ಅವರಿಂದ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಿತು.