ಕಲಬುರಗಿ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ದೇಶದ ಸಾಂವಿಧಾನಿಕ ಉನ್ನತ ಸಂಸ್ಥೆಗಳಲ್ಲಿ ಶೋಷಿತ ವರ್ಗಗಳ ಪ್ರಾತಿನಿಧ್ಯ ಇಲ್ಲದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಬೆಂಗಳೂರಿನ ಅಕ್ಕಾ ಐಎಎಸ್ ಅಕಾಡೆಮಿ ನಿರ್ದೆಶಕ ಡಾ. ಶಿವಕುಮಾರ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯ ಕಾರ್ಯಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟ ಆಯೋಜಿಸಿದ್ದ ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ದೇಶದ ಸುಪ್ರೀಂ ಕೋರ್ಟ್, ಹೈಕೋರ್ಟ್, ಐಐಟಿ, ಸಾರ್ವಜನಿಕ ಸೇವಾ ಆಡಳಿತ ವರ್ಗಗಳಲ್ಲಿ ಈ ದೇಶದ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರು ಶೋಷಿತ ಸಮುದಾಯಗಳ ಸರಿಯಾದ ಪ್ರಾತಿನಿಧ್ಯ ಇಲ್ಲದಿರುವುದು ದೇಶದಲ್ಲಿ ಇನ್ನೂ ಸಾಮಾಜಿಕ ಸಮಾನತೆ ಬಂದಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಗೌತಮ ಬುದ್ಧರ ಪಂತಶೀಲ ತತ್ವಗಳು ಮತ್ತು ಅಷ್ಟಾಂಗ ಮಾರ್ಗಗಳು ಬಸವಣ್ಣನವರ ವಚನಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದಿಂದ ಮಾತ್ರ ಭಾರತದಲ್ಲಿ ಸಾಮಾಜಿಕ ಸಮಾನತೆ ತರಲು ಸಾಧ್ಯವಾಗುತ್ತಿದೆ ಎಂದರು.
ಅಂಬೇಡ್ಕರರು ಭಾರತ ಸಂವಿಧಾನದಲ್ಲಿ ವಯಸ್ಕ ಮತದಾ ಪದ್ದತಿ , ಮಹಿಳೆಯರ ಸ್ವಾತಂತ್ರ್ಯ, ಶಿಕ್ಷಣ, ಚುನಾವಣಾ ಆಯೋಗ, ಸ್ವಾತಂತ್ರ್ಯ ನ್ಯಾಯಾಂಗ ಮುಂತಾದ ಅಂಶಗಳು ಸಂವಿಧಾನದಲ್ಲಿ ಅಳವಡಿಸುವ ಮೂಲಕ ದೇಶದ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಿದ್ದಾರೆ. ಬಾಬಾಸಾಹೇಬರು ವಿದ್ಯಾರ್ಥಿ ಜೀವನದಲ್ಲಿ ದಿನಕ್ಕೆ 18 ಗಂಟೆಗಳ ಕಾಲ ಓದುವ ಮೂಲಕ ಜ್ಞಾನ ಪಡೆದುಕೊಂಡವರು. ವಿದೇಶದಲ್ಲಿ ವ್ಯಾಸಂಗ ಮಾಡಿ ಹಲವಾರು ವಿಷಯಗಳಲ್ಲಿ ಪದವಿ ಪಡೆದು ಜ್ಞಾನ ಸಂಪಾದಿಸಿದರು. ಪ್ರಸ್ತುತ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಅಂಬೇಡ್ಕರ್ ಹಾಗೇ ಅಧ್ಯಯನ ಮಾಡುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುಂದೆ ನಡೆಯಬೇಕು. ವಿದ್ಯಾರ್ಥಿಗಳು ಕೌಶಲ್ಯ ಪಡೆದು ದೇಶದ ನಾಗರೀಕ ಸೇವೆಗಳಲ್ಲಿ ತೋಡಗಿಸಿ ಕೋಳ್ಳಬೇಕು ಎಂದು ಸಲಹೆ ನೀಡಿದರು.
ದೇಶದ ಶಕ್ತಿ ಕೇಂದ್ರಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ಅಂಗಗಳಲ್ಲಿ ಶೋಷಿತ ಸಮುದಾಯಗಳು ಹಾಗೂ ಹಿಂದುಳಿದ ವರ್ಗಗಳು ಇಲ್ಲದಿರುವುದು ಒಂದು ದುರಂತವೇ ಎಂದು ಅಭಿಪ್ರಾಯಪಟ್ಟರು. ಉದ್ಯಮ, ಕೈಗಾರಿಕೆ, ಮತ್ತು ಸಂವಹನ ಮುಂತಾದ ಕ್ಷೇತ್ರಗಳಲ್ಲಿ ಸಮುದಾಯದ ವಿದ್ಯಾರ್ಥಿಗಳು ಸಾಧನೆ ಮಾಡಿ ಸಮುದಾಯದ ಬೆಳವಣಿಗೆ ಅಡಿಪಾಯ ಹಾಕಿದಬೇಕಾಗಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಚಿಗರಳ್ಳಿ ಪೂಜ್ಯ ಕಬೀರಾನಂದ ಸ್ವಾಮೀಜಿ ಮಾತನಾಡಿ, ನಾವು ಹಿಂದುಳಿಯಲು ನಮ್ಮ ಮನಸ್ಥಿತಿಯೇ ಕಾರಣ. ಮೊದಲು ನಮ್ಮ ಮನಸ್ಥಿತಿ ಬದಲಾಗಬೇಕಿದೆ. ಬಾಬಾಸಾಹೇಬ ಅಂಬೇಡ್ಕರ್ ಹಾಗೇ ಸಮುದಾಯದ ವಿದ್ಯಾರ್ಥಿಗಳು ಓದಿ ಸಾಮಾಜದಲ್ಲಿ ಮುಂದೆ ಬರಬೇಕು ಎಂದರು.
ಭಾರತೀಯ ಸಂವಿಧಾನ ನಮಗೆ ತಲೆ ಎತ್ತಿ ನಿಲ್ಲುವಂತೆ ಮಾಡಿದೆ. ನಿಮ್ಮ ಸಲುವಾಗಿ ಮತ್ತು ಸಮುದಾಯದ ಜನರಿಗಾಗಿ ಬದುಕಿದ ಜೀವ ಬಾಬಾಸಾಹೇಬ ಅಂಬೇಡ್ಕರ್ ಎಂಬ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಗೂರು ಶ್ರೀರಾಮುಲು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದ ಸಮುದಾಯದಕ್ಕೆ ಬಾಬಾಸಾಹೇಬ ಅಂಬೇಡ್ಕರ್ ಅಪಾರ ಕೊಡುಗೆ ನೀಡಿದ್ದಾರೆ. ಸಂವಿಧಾನ ಮತ್ತು ಅಂಬೇಡ್ಕರ್ ಎರಡು ಒಂದೇ. ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ ಅಸಾಮಾನ್ಯ ಕಾರ್ಯ ಮಾಡಿದ್ದಾರೆ. ಈ ದೇಶದಲ್ಲಿ ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆ ತೋಡೆದು ಹಾಕಲು ಸಂವಿಧಾನ ಮೂಲಕ ಮಾಡಿದ್ದಾರೆ ಎಂದರು.
ಸರ್ಕಾರಿ ಮಹಾವಿದ್ಯಾಲಯ ಕಲಾನಿಕಾಯದ ಡೀನ್ ಡಾ ವಿಜಯಕುಮಾರ ಸಾಲಿಮನಿ ಮಾತನಾಡಿ, ಬಾಬಾಸಾಹೇಬ ಅಂಬೇಡ್ಕರ್ ಈ ದೇಶಕ್ಕೆ ಶಿಕ್ಷಣ ನೀಡಿದವರು. ಮಹಿಳೆಯರ ಪಾಲಿನ ಸಮಾಜದಲ್ಲಿ ಕೆಟ್ಟ ಸಂಪ್ರದಯಗಳಾದ ಬಾಲ್ಯ ವಿವಾಹ ಸತಿ ಸಹ ಗಮನ ಪದ್ದತಿ ಮತ್ತು ಶಿಕ್ಷಣ ನೀಡದೇ ಇರುವುದು ಸಂವಿಧಾನದ ಮೂಲಕ ಕಿತ್ತುಹಾಕಿದರು.ಅದರ ಮೂಲಕ ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಶಿಕ್ಷಣ ನೀಡುವುದರ ಮೂಲಕ ಸಮಾಜದಲ್ಲಿ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆ ಒದಗಿಸುವ ಕೆಲಸ ಮಾಡಿದರು ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಸತಿ ನಿಲಯದ ಮುಖ್ಯ ಪರಿಪಾಲಕ ಡಾ. ಸುರೇಶ ಜಂಗೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕುಲಸಚಿವ ಪ್ರೊ.ರಮೇಶ್ ಲಂಡನ್ಕರ್, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಜಿ.ಕಣ್ಣೂರ್. ಅರುಣ್ ಕುಮಾರ್ ಕಿನ್ನಿ, ಸೈಯದ್ ಮಜರ್ ಹುಸೇನ್, ರಾಘವೇಂದ್ರ, ಉದಯ ಪಾಟೀಲ್, ಡಿ.ಜಿ.ರಾಜಣ್ಣ, ಡಾ.ಅನಿಲ್ ಟೆಂಗಳಿ ಯುವ ಚಿಂತಕರು. ಶರತ್ ರೇಷ್ಮೆ, ನಾಗಪ್ಪ ನಗನೂರ್, ಲಕ್ಷ್ಮಿಕಾಂತ್, ರಾಜಕುಮಾರ್, ಗಿರೀಶ್ ನಿಲಯ ಪಾಲಕರು, ಶಿವಾನಂದ ಹೊನಗುಂಟಿ, ಡಾ.ಅರುಣ, ಡಾ.ಗೌತಮ್ ಕರಿಕಲ್ ಅಧ್ಯಕ್ಷ ಎನ್.ಎಸ್.ಯು.ಐ. ಸಂಪೂರ್ಣ ಪಾಟೀಲ್ ಉಪಾಧ್ಯಕ್ಷೆ ಎನ್.ಎಸ್.ಯು.ಐ ರವಿಕುಮಾರ್ ಈಶ್ವರ, ಆನಂದ್ ಮೈತ್ರಿ, ಚಂದ್ರಕಾಂತ ಸಂಗೋಳಗಿ, ನಾಗಮ್ಮ ದೊಡ್ಡಮನಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು
ಅಣವೀರಗೌಡ ಬಿರಾದಾರ ನಿರೂಪಿಸಿದರು. ಸಂತೋಷ್ ಕುಮಾರ್ ಎಸ್.ಪಿ. ಸ್ವಾಗತಿಸಿದರು. ಖೇಮ್ಮಣ್ಣ ರಾಠೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಚಯ್ಯ ಸ್ವಾಮಿ ಹಿರೇಮಠ ವಂದಿಸಿದರು.