ಕಲಬುರಗಿ: ಸತತ 3 ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡುತ್ತಿರುವ ಪ್ರಿಯಾಂಕ್ ಖರ್ಗೆ ಅವರನ್ನು ಮೆಚ್ಚಿದ್ದೆ, ಆದರೆ ಇಂದು ಗುಲಬರ್ಗಾ ಜಿಲ್ಲೆ ಎಂದರೆ ಈಗ ಪಾಳೇಗಾರಿಕೆಯ ಆಳ್ವಿಕೆಯಂತೆ ವರ್ತನೆ ತೋರುತ್ತಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಛಲವಾದಿ ನಾರಾಯಣಸ್ವಾಮಿ ಅವರಿಗೆ ಅಪಮಾನ ಖಂಡಿಸಿ ಬಿಜೆಪಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಕಲಬುರಗಿ ಚಲೋ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದರು.
ಛಲವಾದಿ ನಾರಾಯಣಸ್ವಾಮಿ ಅವರು ದಲಿತ ಕುಟುಂಬದಿಂದ ಬಂದಿದ್ದಾರೆ ಎಂಬ ಕಾರಣಕ್ಕೆ ಅವರ ವಿರುದ್ಧ ದಬ್ಬಾಳಿಕೆ ಮಾಡುತ್ತಿದ್ದೀರಾ? ಅಧಿಕಾರ ಶಾಶ್ವತ ಇಲ್ಲ, ನಿಮ್ಮ ದರ್ಪ ಅಳಿಸುವ ಶಕ್ತಿ ನಮ್ಮ ಕಾರ್ಯಕರ್ತರಲ್ಲಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಮಗನಾಗಿ ಈ ರೀತಿ ಮಾಡುತ್ತಿರುವುದು ಅಕ್ಷಮ್ಯ ಅಪರಾಧ, ಇಂತಹವುಗಳಿಗೆ ಬಿಜೆಪಿ ಹಿಂದೆ ತಕ್ಕ ಉತ್ತರ ಕೊಟ್ಟಿದೆ, ನಾವು ಮುಂದೆ ತಕ್ಕ ಉತ್ತರ ಕೊಡಲಿದ್ದೇವೆ ಎನ್ನುವುದನ್ನು ಎಚ್ಚರಿಕೆ ಕೊಡುತ್ತಿದ್ದೇವೆ ಎಂದರು.
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕಲಬುರಗಿ ಕೊನೆಯ ಸ್ಥಾನ ಬಂದಿದೆ, ಇಲ್ಲಿ ಸುದೀರ್ಘ ಆಡಳಿತ ನಡೆಸಿರುವ ನೀವು ಫಲಿತಾಂಶದಲ್ಲಿ ಉತ್ತಮ ಏರಿಕೆ ಆಗಿದ್ದರೆ ಮೆಚ್ಚುತ್ತಿದ್ದೆ, ಫಲಿತಾಂಶದ ಹೆಚ್ಚಳಕ್ಕೆ ನೀವು ಏನು ಮಾಡಲಿಲ್ಲ, ನಿಮ್ಮ ಅಧಿಕಾರದ ಅವಧಿಯಲ್ಲಿ ಎಷ್ಟು ಸಾವಿರ ಕೋಟಿ ಅನುದಾನ ಜಿಲ್ಲೆಗೆ ತಂದಿದ್ದೀರಿ ಉತ್ತರ ಕೊಡಿ , ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಲಿಲ್ಲ, 15 ಸಾವಿರಕ್ಕೂ ಹೆಚ್ಚಿನ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಿಲ್ಲ ಯಾಕೆ? ಎಂದು ಪ್ರಶ್ನಿಸಿದರು.
ಫಹಾಲ್ಗಮ್ ನಲ್ಲಿ 26 ಭಾರತೀಯರನ್ನು ಹತ್ಯೆಗೈದ ಉಗ್ರರು, ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯರು ಅಂದುಕೊಂಡಿದ್ದು, ಅದನ್ನ ಸೈನಿಕರು ಮಾಡಿ ತೋರಿಸಿದ್ದಾರೆ. ಅಂತಹ ವೀರ ಯೋಧರ ನೈತಿಕ ಸ್ಥೈರ್ಯವನ್ನು ಪ್ರಶ್ನಿಸುವಂತಹ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಪ್ರಶ್ನಿಸುವ ನಾರಾಯಣ ಸ್ವಾಮಿಯಂತಹ ನಾಯಕರಿಗೆ ಅಪಮಾನ ಮಾಡುತ್ತೀರಾ? ಎಂದು ಕಿಡಿಕಾರಿದರು.
ಚುನಾವಣೆ ನಡೆದರೆ 135 ಸೀಟ್ ಗೆಲ್ಲಲಿವೆ:
ಸರಕಾರ ಗ್ಯಾರಂಟಿ ಎನ್ನುತ್ತಿದೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಬಡವರು ಕಣ್ಣೀರು ಹಾಕುತ್ತಿದ್ದಾರೆ, ಶಾಸಕರಿಗೆ ಅನುದಾನ ಸಿಗುತ್ತಿಲ್ಲ, ಇಂಥ ರೈತರ, ದಲಿತರ ವಿರೋಧಿ ದುಷ್ಟ ಸರಕಾರವನ್ನು ಬುಡ ಸಮೇತ ಕಿತ್ತು ಹಾಕುವ ಕೆಲಸ ಮಾಡಲಿದ್ದೇವೆ. ಇದರ ವಿರುದ್ಧ ಹೋರಾಟ ಮುಂದುವರೆಸೋಣ ಎಂದರು. ಒಂದು ವೇಳೆ ಈಗ ಚುನಾವಣೆ ನಡೆದರೆ, ಖಾಸಗಿ ವಾಹಿನಿಯ ಸಮೀಕ್ಷೆ ಆಧಾರದ ಮೇಲೆ 130 ರಿಂದ 135 ಸೀಟ್ ಗಳು ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದರು.
ವಿಧಾನ ಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಈಗ ಛಲವಾದಿ ನಾರಾಯಣಸ್ವಾಮಿ ಅವರಿಗೂ ಆದರೂ ಅಥವಾ ನಮ್ಮ ಕಾರ್ಯಕರ್ತರಿಗೆ ಅಪಮಾನವಾದರೂ ನಾವು ಸಹಿಸಲ್ಲ, ದಿನಾಲೂ ಸಂವಿಧಾನ ಪುಸ್ತಕ ತೆಗೆದುಕೊಂಡು ತೀರುಗಾಡ್ತೀರಿ ಯಾವ ಕಾಲಂನಲ್ಲಿ ಗೂಂಡಾಗಿರಿ ಉಲ್ಲೇಖಿಸಲಾಗಿದೆ ಒಮ್ಮೆ ತಿಳಿಸಿ, ಪುಸ್ತಕ ತೋರಿಸಿಕೊಂಡು ಓಡಾಡುತ್ತಿರಿ ಅದು ಖಾಲಿ ಪುಸ್ತಕವೋ ಅಥವಾ ಪ್ರಿಂಟ್ ಆಗಿದೆಯೋ ಗೊತ್ತಿಲ್ಲ, ನಾವು ಕೂಡ ಅದನ್ನು ನೋಡಬೇಕಿತ್ತು, ನೋಡಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಪದ್ಮವಿಭೂಷಣ, ಪದ್ಮಶ್ರೀ ಪ್ರಶಸ್ತಿಗಳು ನೀವು ಕೊಡಲ್ಲ, ಅದನ್ನ ಕೇಂದ್ರ ಸರ್ಕಾರ ಕೊಡುತ್ತದೆ ಎಂದು ಇದೇ ವೇಳೆಯಲ್ಲೇ ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದರು.
ಅಂಬೇಡ್ಕರ್ ಸಾಕಿದ ಹುಲಿಗಳು ಎನ್ನುವ ಇವರುಗಳು ದಿಲ್ಲಿಯಲ್ಲಿ ಅಂಬೇಡ್ಕರ್ ಅವರು ಮೃತಪಟ್ಟಾಗ ದಿಲ್ಲಿಯಿಂದ ಬಾಂಬೆವರೆಗೆ ಶವ ತರಲು 5 ಸಾವಿರ ಹಣ ಕೊಟ್ಟಿಲ್ಲ, ಈಗ ನೋಡಿದರೆ ನ್ಯಾಶನಲ್ ಹೆರಾಲ್ಡ್ ಗೆ ಕೋಟ್ಯಂತರ ಹಣ ಕೊಟ್ಟಿದ್ದಾರೆ ಎಂದ ಅವರು, ಕಲಬುರಗಿಯಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದಲಿತರು ಮುಖ್ಯಮಂತ್ರಿ ಆಗ್ಬೇಕು ಎನ್ನುವುದನ್ನು ನಿಮ್ಮ ಹೆಸರು(ಮಲ್ಲಿಕಾರ್ಜುನ್ ಖರ್ಗೆ) ತಲೆ ಮೇಲೆ ಇಟ್ಟುಕೊಂಡು ಸುತ್ತಾಡಿದವನು. ನಿಮ್ಮ ಹೆಸರು ಕಲ್ಯಾಣ ಕರ್ನಾಟಕದಲ್ಲಿ ಅಷ್ಟೇ ಗೊತ್ತಿತ್ತು. ಸೋನಿಯಾ ಗಾಂಧಿಯವರತ್ತ ಪರಿಚಯಿಸಿದವನು ನಾನು ಎಂದ ಅವರು, ದಲಿತರು ಎಂದರೆ ಮುಖ್ಯಮಂತ್ರಿ ಬೇಡ ಎಂದವರು ಈಗ ದಲಿತರಿಗೆ ಮೀಸಲಿರುವ ಮತಕ್ಷೇತ್ರದಲ್ಲಿ ಸ್ಪರ್ಧಿಸುವುದು ಏಕೆ ಎಂದು ಮಲ್ಲಿಕಾರ್ಜುನ್ ಖರ್ಗೆಯವರನ್ನ ಪ್ರಶ್ನಿಸಿದ್ದಾರೆ.
ದಲಿತತ್ವವನ್ನು ಹೇಳಲು ಪ್ರಿಯಾಂಕ್ ಖರ್ಗೆ ಅವರೇ ನೀವು ಪುಸ್ತಕ ಓದಿ ಹೇಳಬೇಕಾಗುತ್ತದೆ, ನಾನು ಸ್ವತಃ ದಲಿತ ಕುಟುಂಬದಲ್ಲಿ ಹುಟ್ಟಿ ಚಾಪೆಯಲ್ಲಿ ಮಲಗಿದ್ದವನು. ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ನಿಮ್ಮ ತರಹ ನಾನು ಗೋಲ್ಡನ್ ಸ್ಪೂನ್ ನಲ್ಲಿ ಹುಟ್ಟಿಲ್ಲ, ಅಪ್ಪಟ ದಲಿತ ಎಂದರೆ ನೀವಲ್ಲ, ಈ ಚಲುವಾದಿ ನಾರಾಯಣಸ್ವಾಮಿ ಎಂದು ತಮ್ಮನ್ನೇ ತಾವೇ ಭೇಷ್ ಎನಿಸಿಕೊಂಡರು.
40 ವರ್ಷ ಕಾಂಗ್ರೆಸ್ ನಲ್ಲಿ ದುಡಿದೆ, ಒಂದು ಬಾರಿ ಟಿಕೆಟ್ ಕೊಡಿಸಲು ಆಗಿಲ್ಲ, ಟಿಕೆಟ್ ಕೊಡದೆ ಆಚೆ ಕಳಿಸಿದ್ದೀರಿ ಹೇಗೆ ಗೆಲ್ಲಲು ಸಾಧ್ಯ? ನನಗೆ ಮಾಡಿದ ಅನ್ಯಾಯ ನನ್ನ ಸಮಾಜಕ್ಕೆ ಮಾಡಬೇಡಿ ಎಂದ ಅವರು, ಗುರುಮಠಕಲ್ ಕ್ಷೇತ್ರದಲ್ಲಿ 9 ಬಾರಿ ಗೆದ್ರಿ ಒಬ್ಬ ನಾಯಕ ಹುಟ್ಟಿದ್ದಾನ? ನೀವು ನಡೆಯೋ ಕಡೆ ಒಂದು ಹುಲ್ಲು ಕೂಡ ಹುಟ್ಟುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಹೆಸರಿನ ಮುಂದೆ ಖರ್ಗೆ ಇರದೆ ಇದ್ದರೆ ಮಂಡಲ ಪಂಚಾಯ್ತಿ ಗೆಲ್ಲಲ್ಲ, 3 ಸಾರಿ ಗೆದ್ದೀರಿ, ನಿಮಗಿಂತ ಹೆಚ್ಚು ಗೆದ್ದಿರುವ ಪ್ರಸಾದ್ ಅಪ್ಪಯ್ಯ, ಶಿವಣ್ಣ ಆನೇಕಲ್ ನರೇಂದ್ರ ಸ್ವಾಮಿ ಯಾಕೆ ಮಂತ್ರಿ ಆಗಿಲ್ಲ, ಅಜಯ್ ಸಿಂಗ್ ಅವರನ್ನು ಇವರೇ ತುಳಿದು ಹಾಕಿದ್ದಾರೆ. ನನ್ನ ಹೇಳಿಕೆಗೆ ಬಗ್ಗೆ ಕ್ಷಮೆ ಕೇಳಲ್ಲ, ನಾನು ಹೇಳಿದ್ದು ಕೇವಲ ಗಾದೆ ಎಂದು ಮತ್ತೆ ತಮ್ಮ ಹೇಳಿಕೆ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.
ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ್ದು ಸೋಲಿಸಿದ್ದು ಕಾಂಗ್ರೆಸ್ ಪಕ್ಷ, ನಿಮ್ಮ ಕಾರ್ಯಕರ್ತರ ಗುಂಡಾಗಿರಿಗೆ ನೀವೇ ರಾಜೀನಾಮೆ ಕೊಡಬೇಕು, ನಾನು ಕೊಡಲ್ಲ. ನನ್ನನ್ನು ಕೆಣಕಿದವರಿಗೆ ನಾನು ಬಿಡುವವನಲ್ಲ, ಲೋಡ್ ಗಟ್ಟಲೆ ವಿಚಾರಗಳಿವೆ, ಅವೆಲ್ಲ ಪರ್ಸನಲ್ ವಿಷಯಗಳು ಇವೆ, ಇನ್ನೂ ಕೆಣಕಿದರೆ ಪರ್ಸನಲ್ ವಿಷಯಗಳು ಹೊರಗೆ ಬರಲಿವೆ. ನನಗೆ ನೀವು ಮಸಿ ಹಾಕಬಹುದು ಇಮೇಜ್ ಹಾಳಾಗಲ್ಲ ಎಂದರು.
ಬಿ.ಶ್ರೀರಾಮುಲು ಮಾತನಾಡಿ, ಕಲಬುರಗಿ ಪಪ್ಪು ಸಂಸ್ಥಾನವಾಗುತ್ತಿದೆ, ಅದು ಅಪಾಯ. ರಿಪಬ್ಲಿಕನ್ ಕಲಬುರಗಿ ಮಾಡಲು ಬಿಡುವುದಿಲ್ಲ, ಕಾಂಗ್ರೆಸ್ ವಿರುದ್ಧ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸುವ ಕೆಲಸ ಮಾಡೋಣ, ಈ ಕಾಂಗ್ರೆಸ್ ಸರಕಾರ ಕೇವಲ 3 ವರ್ಷ ಇರಲಿದೆ, ಮುಂದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಸಂಸದ ಗೋವಿಂದ್ ಕಾರಜೋಳ ಮಾತನಾಡಿ, ನರೇಂದ್ರ ಮೋದಿ ಚೌಕಿದಾರ ಚೋರ್ ಹೈ ಅಂತ ಹೇಳಿದ್ದಾರೆ. ದೇಶದ ಪ್ರಧಾನಿ ಅವರಿಗೆ ವಿಷ ಸರ್ಪ ಎಂದು ಹೇಳಿದ್ದಾರೆ. ಕಾಂಗ್ರೆಸ್ ನವರಿಗೆ ಯಾವ ಸಸ್ಕೃತಿ ಇದೆ ಎನ್ನುವುದನ್ನು ಮಲ್ಲಿಕಾರ್ಜುನ್ ಖರ್ಗೆ ಅವರೇ ಹೇಳಬೇಕು, ನರೇಂದ್ರ ಮೋದಿಗೆ ಏಕವಚನದಲ್ಲಿ ಟೀಕೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದಾರೆ, ಸಚಿವರನ್ನು ಹದ್ದು ಬಸ್ತಿನಲ್ಲಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.
ಎಂಎಲ್ಸಿ ಸಿಟಿ ರವಿ ಮಾತನಾಡಿ, ಅಧಿಕಾರ ದುರ್ಬಳಕೆ ಮಾಡುವುದನ್ನು ರಾಜ್ಯದ ಜನರು ಒಪ್ಪಲ್ಲ, ನಿಜಾಮಗಿರಿ ತಾನಸಾಹಿ ಇಲ್ಲಿ ನಡೆಯುವುದಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಏನೆಲ್ಲಾ ಕೊಡುಗೆ ನೀಡಿದೆ ಎನ್ನುವುದನ್ನು ನಾವು ಹೇಳಲು ಸಿದ್ಧರಿದ್ದೇವೆ, ನೀವು ಏನು ಮಾಡಿದ್ದೀರಿ? ಎಂಬುವುದನ್ನು ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.
ಲೋಕತಾಂತ್ರದಲ್ಲಿ ಗೂಂಡಾಗಿರಿ ನಡೆಯುವುದಿಲ್ಲ, ಚಿತ್ತಾಪುರ ಕ್ಕೆ ಬಂದು ನಿಮ್ಮ ಸವಾಲು ಎದುರಿಸುತ್ತೇವೆ, ಬನ್ನಿ ಚಿತ್ತಾಪುರಕ್ಕೆ ನಮಗೆ ಗೌರವ ಕೊಡುವುದು ಬರುತ್ತೆ, ದೌರ್ಜನ್ಯ ನಡೆಸಲು ಬಂದ್ರೆ ನಿಮ್ಮದೇ ಭಾಷೆಯಲ್ಲಿ ಉತ್ತರ ಕೊಡಲು ಬರುತ್ತೆ ಎಂದರು.
ನಾವು ಕೂಡ ಅಂಬೇಡ್ಕರ್ ನೀಡಿದ ಸಂವಿಧಾನ ಕುಡಿದ ಹುಲಿಗಳು, ಅಟಲ್ ಬಿಹಾರಿ ವಾಜಪೇಯಿ ಹಿಂಬಾಲಕರು ನಾವು, ತುರ್ತು ಪರಿಸ್ಥಿತಿ ವಿರುದ್ಧ ಜೈಲಿಗೆ ಹೋಗಿ ಸಂವಿಧಾನ ರಕ್ಷಣೆಗೆ ಎದೆ ಕೊಟ್ಟಿದ್ದೇವೆ, ನೂರು ಡಿಕೆ ಶಿವಕುಮಾರ್ ಬoದ್ರೆ ಸಂವಿಧಾನ ಬದಲಿಸಲು ಆಗುವುದಿಲ್ಲ ಎಂದ ಅವರು, ಯಾರು ಹುಲಿ, ಇಲಿ ಇದ್ದಾರೆ ಎನ್ನುವುದು ಜನರು ತೀರ್ಮಾನಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಮುನಿಸ್ವಾಮಿ, ಪ್ರೀತಂ ಗೌಡ, ಸುನೀಲ್ ವಲ್ಯಪುರೆ, ಸಿ.ಟಿ ರವಿ, ಎಂಎಲ್ಸಿ ಶಶೀಲ್ ನಮೋಶಿ, ಸಿಮೆಂಟ್ ಮಂಜುನಾಥ್, ರಾಜಕುಮಾರ್ ಪಾಟೀಲ್ ತೆಲ್ಕೂರ್, ಸಿದ್ದು ಸವದಿ, ಹರೀಶ್ ಪೂoಜಾ, ಅಮರನಾಥ್ ಪಾಟೀಲ್, ಎನ್.ರವಿಕುಮಾರ್, ಬಿ.ಶ್ರೀರಾಮುಲು, ದತ್ತಾತ್ರೇಯ ಪಾಟೀಲ್ ರೇವೂರ್, ಬಸವರಾಜ್ ದಡೆಸೂಗುರು, ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮಡು, ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಬಿ.ಜಿ ಪಾಟೀಲ್, ಚಂದು ಪಾಟೀಲ್, ಅವ್ವಣ್ಣಾ ಮ್ಯಾಕೇರಿ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಸಂತೋಷ್ ಹಾದಿಮನಿ, ಮಹಾಗಾoಕರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಸ್ವಾಗತಿಸಿದರು.