ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಅಫಜಲಪೂರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರಕ್ಕೆ ಸ್ಥಳೀಯ ಶಾಸಕ ಎಂ.ವೈ.ಪಾಟೀಲ ಅವರೊಂದಿಗೆ ಭೇಟಿ ನೀಡಿ ಅಲ್ಲಿ ಭಕ್ತಾದಿಗಳ ಅನುಕೂಲಕ್ಕೆ ನಡೆಯುತ್ತಿರುವ ಮೂಲಸೌಕರ್ಯ ಕಾಮಗಾರಿಗಳನ್ನು ಪರಿಶೀಲಿಸಿದರು.
ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ವಾಕ್ ವೇ, ಶೆಲ್ಟರ್ ಕಾಮಗಾರಿಗಳ ವೀಕ್ಷಿಸಿದ ಅವರು, ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು ಎಂದ ಅವರು, ಪ್ರಸಾದ ಯೋಜನೆ ಮತ್ತು ಮಾಸ್ಟರ್ ಪ್ಲ್ಯಾನ್ ಕುರಿತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ಅವರೊಂದಿಗೆ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಶಾಸಕ ಎಂ.ವೈ.ಪಾಟೀಲ ಅವರು, ಜಿಲ್ಲೆಯ ಅಭಿವೃದ್ಧಿ, ಸುಭಿಕ್ಷೆಗೆ ದತ್ತನ ಸನ್ನಿಧಿಯಲ್ಲಿ ಮತ್ತು ಸಂಗಮದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇದಕ್ಕು ಮುನ್ನ ಘತ್ತರಗಾ ಬ್ಯಾರೇಜ್ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮತ್ತು ಶಾಸಕರು, ಅಲ್ಲಿನ ನೀರಿನ ಮಟ್ಟ ಮತ್ತು ಪ್ರವಾಹ ಬಂದಲ್ಲಿ ತೆಗೆದುಕೊಳ್ಲಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಂತರ ಭಾಗ್ಯವಂತಿ ದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಅಲ್ಲಿ ಆನ್ ಲೈನ್ ಹುಂಡಿ ಮತ್ತು ನವೀಕೃತ ಇ.ಓ. ಕಚೇರಿ ಉದ್ಘಾಟನೆಯಲ್ಲಿ ಪಾಲ್ಗೊಂಡರು. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಕುದರಿ ಅವರೊಂದಿಗೆ ಮಾಸ್ಟರ್ ಪ್ಲ್ಯಾನ್ ಕುರಿತು ಚರ್ಚಿಸಿದರು.
ಸೊನ್ನ ಬ್ಯಾರೇಜ್ ವೀಕ್ಷಣೆ:
ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಸೊನ್ನ ಬ್ರಿಡ್ಜ್ ಕಂ ಬ್ಯಾರೇಜ್ ಗೆ ಭೇಟಿ ನೀಡಿದ ಡಿ.ಸಿ ಅವರು, ಸದ್ಯದ ನೀರಿನ ಮಟ್ಟದ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರವಾಹ ಪರಿಸ್ಥಿತಿಯಲ್ಲಿ ಜನ ಜಾನುವಾರಗಳ ರಕ್ಷಿಣೆಗೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಜಿಲ್ಲೆಯ ಜಲಾಶಯ, ಬ್ಯಾರೇಜ್ ವೀಕ್ಷಣೆಗೆ ಬಂದಿರುವ ಹೈದ್ರಾಬಾದಿನ 20 ಬಟಾಲಿಯನ್ ಬಿಹಾರ ರೆಜ್ಮೆಂಟಿನ ಮೇಜರ್ ಅಭಯ ಯಾದವ ಮತ್ತು ಆರ್ಮಿ ಅಧಿಕಾರಿ ಸಂಜೀವ ಅವರೊಂದಿಗೆ ಚರ್ಚಿಸಿದ ಅವರು, ಪ್ರವಾಹ ಕುರಿತು ಸಾರ್ವಜನಿಕರಿಗೆ ಮೊದಲೆ ಮಾಹಿತಿ ನೀಡುವ ಮೂಲಕ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಂದಿರಾ ಕ್ಯಾಂಟೀನ್ ಉದ್ಘಾಟನೆ:
ಅಫಜಲಪೂರ ಪಟ್ಟಣದಲ್ಲಿ ಪುರಸಭೆಯಿಂದ ನೂತನವಾಗಿ ಸ್ಥಾಪಿಸಲಾದ ಇಂದಿರಾ ಕ್ಯಾಂಟೀನ್ ಶಾಸಕ ಎಂ.ವೈ.ಪಾಟೀಲ ಅವರು ಉದ್ಘಾಟಿಸಿ ಉಪಹಾರ ಸವಿದು ಗುಣಮಟ್ಟ ಪರಿಶೀಲಿಸಿದರು. ನಂತರ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರೊಂದಿಗೆ ಸೇರಿ ಸಾರ್ವಜನಿಕರಿಗೆ ತಿಂಡಿ ಬಡಿಸಿದರು. ಪುರಸಭೆ ಅಧ್ಯಕ್ಷೆ ಸುಹಾಸನಿ ವೀರೇಶ, ಉಪಾಧ್ಯಕ್ಷ ಶಿವಕುಮಾರ ಪದಕಿ, ಡಿ.ಯು.ಡಿ.ಸಿ ಮುನಾವರ ದೌಲಾ, ಮುಖ್ಯಾಧಿಕಾರಿ ಮಹಾಂತೇಶ ಹೂಗಾರ ಸೇರಿದಂತೆ ಪುರಸಭೆ ಸದಸ್ಯರು ಇದಕ್ಕೆ ಸಾಕ್ಷಿಯಾದರು. ನಂತರ ಪಟ್ಟಣದಲ್ಲಿ ನಡೆಯುತ್ತಿರುವ ಸಿ.ಸಿ. ರಸ್ತೆ ಕಾಮಗಾರಿ ಪರಿಶೀಲಿಸಿ, ಕಾಲಮಿತಿಯಲ್ಲಿ ಮುಗಿಸುವಂತೆ ಗುತ್ತಿಗೆದಾರನಿಗೆ ಡಿ.ಸಿ. ತಾಕೀತು ಮಾಡಿದರು.
ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ಸಾಹಿತ್ಯ, ಅಫಜಲಪೂರ ತಹಶೀಲ್ದಾರ ಸಂಜೀವಕುಮಾರ ದಾಸರ್, ತಾಲೂಕ ಪಂಚಾಯತ್ ಇ.ಓ ವೀರಣ್ಣ ಕೌಲಗಿ, ಲೋಕೋಪಯೋಗಿ ಇಲಾಖೆಯ ಎ.ಇ.ಇ. ಲಕ್ಷ್ಮೀಕಾಂತ, ನೀರಾವರಿ ಇಲಾಖೆಯ ಶಿವಸ್ವಾಮಿ ಸೇರಿದಂತೆ ಅನೇಕ ಅಧಿಕಾರಿಗಳಿದ್ದರು.