ಕಲಬುರಗಿ: ಆಳಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜನವರಿ ಕೊನೆಯ ವಾರದಂದು ನಡೆದಿದ್ದ ಕೊಲೆ ಪ್ರಕರಣವನ್ನು 4 ತಿಂಗಳ ಬಳಿಕ ಒಟ್ಟು 10 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ರಾಹುಲ್ ಖಜೂರೆ(28) ಕಾಣೆಯಾಗಿದ್ದಾನೆಂದು ಅವರ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣವನ್ನು ಭೇದಿಸಿದ ಪೊಲೀಸರು, ಕಾಣೆಯಾಗಿರುವವನು ಕೊಲೆಯಾಗಿ ಆತನ ಶವ ಮಹಾರಾಷ್ಟ್ರದ ಉಮರ್ಗಾ ತಾಲ್ಲೂಕಿನ ಬೆಡಗಾ ಸಮೀಪದ ಬೆಣ್ಣೆತೋರಾ ಡ್ಯಾಮಿನಲ್ಲಿ ಬಿಸಾಡಿದ ಬಗ್ಗೆ ತಿಳಿದುಬರುತ್ತದೆ. ಕ್ರಮೇಣ ತನಿಖೆ ನಡೆಸಿ, ಕೆಲವರನ್ನು ತನಿಖೆಗೆ ಒಳಪಡಿಸಿದಾಗ ಆರೋಪಿಗಳ ಹಿನ್ನೆಲೆ ಗುರುತಿಸಲಾಗಿದೆ. ನಿರಂತರ ಕಾರ್ಯಾಚರಣೆಯಿಂದ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ತನಿಖಾ ಯಶಸ್ವಿಯಾಗಿದೆ ಎಂದರು.
ಅನೂರು ಗ್ರಾಮದ ಪೃಥ್ವಿರಾಜ್ ಹರಿಪ್ರಸಾದ್ ಚಿಟಂಪಲ್ಲೇ, ಭಾಗ್ಯವಂತಿ ಹರಿಪ್ರಸಾದ್ ಚಿಟಂಪಲ್ಲೇ, ಸೀತಾಬಾಯಿ ಗಂಡ ಹರಿಪ್ರಸಾದ್ ಚಿಟಂಪಲ್ಲೇ, ಪವನ್ ರಜಪೂತ್ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದವ ಸೇರಿದಂತೆ ಐವರು ಪ್ರಮುಖ ಆರೋಪಿಗಳಾಗಿದ್ದಾರೆ. ಉಳಿದವರು ಶ್ರೀಧರ್, ಸಂದೀಪ್, ಸತ್ಯಭಾಮ, ಸರಸ್ವತಿ ಮತ್ತು ಮಹಾದೇವ ಎಂಬಾತರು ಪ್ರಮುಖ ಆರೋಪಿಗಳಿಗೆ ದುಡ್ಡು ಕೊಡುವುದು, ಬೇರೆ ಬೇರೆ ಸ್ಥಳಗಳಿಗೆ ಪಲಾಯನ ಮಾಡುವುದಕ್ಕೆ ಸಹಕಾರ ನೀಡಿದ್ದವರು ಆಗಿದ್ದಾರೆ ಎಂದು ಮಾಹಿತಿ ನೀಡಿದರು.
ಕೊಲೆ ಮಾಡಿ ಕಾಶಿ, ಅಯೋಧ್ಯೆ, ಪಂಢರಾಪುರ ಪ್ರವಾಸಕ್ಕೆ ತೆರಳಿದ ಆರೋಪಿಗಳು:
ಜನವರಿ ಕೊನೆಯ ವಾರದಲ್ಲಿ ಪ್ರಮುಖ ಆರೋಪಿಗಳು, ರಾಹುಲ್ ಖಜೂರೆ ಎಂಬಾತನನ್ನು ಪುಸಲಾಯಿಸಿ ಕರೆಸಿಕೊಂಡು ಆತನನ್ನು ಕೊಲೆ ಮಾಡಿ ಆತನ ಹೊಟ್ಟೆಗೆ ಹಗ್ಗದಿಂದ ದೊಡ್ಡ ಕಲ್ಲನ್ನು ಕಟ್ಟಿ ಉಮರ್ಗಾ ತಾಲ್ಲೂಕಿನ ಬೆಡಗಾ ಸಮೀಪದ ಬೆಣ್ಣೆತೋರಾ ಡ್ಯಾಮಿನಲ್ಲಿ ಬಿಸಾಕಿದ್ದಾರೆ. ಬಳಿಕ ಪ್ರಮುಖ ಆರೋಪಿ ಪೃಥ್ವಿರಾಜ್ ಹರಿಪ್ರಸಾದ್ ಚಿಟಂಪಲ್ಲೇ ಅಯೋಧ್ಯೆಯ ಪ್ರಯಾಗರಾಜ್ ನ ಮಹಾಕುಂಭಮೇಳ, ಫಂಡರಾಪೂರ, ಕಾಶಿ ಮತ್ತಿತರ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾನೆ. ಪರಾರಿಯಾಗಿದ್ದ ಪೃಥ್ವಿರಾಜ್ ನನ್ನು ಕೊನೆಗೂ ಪೊಲೀಸರು ಬಂಧಿಸಿ, ಬೈಕ್ ಒಂದನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮಹೇಶ್ ಮೇಘನ್ನನವರ್, ಡಿವೈಎಸ್ಪಿ ಗೋಪಿ ಬಿ.ಆರ್, ಪಿಐ ಶಂಕರ್ ಕೊಡ್ಲಾ, ಸಂಜೀವ್ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.